Friday, June 4, 2010

ಗೆದ್ದಲು ಕಟ್ಟಿದ ಗೂಡು

ಕಾತ ಚಿಕ್ಕಣ್ಣ

ಪರದೆ ಕಿರಕಿರನೆ ಮೇಲೆದ್ದಾಗ, ಆ ಕಣ್ಣುಗಳೆಲ್ಲ ಈ ಲೈಟು ಬೆಳಕಿಗೆ ಪಳಪಳನೆ ಹೊಳೆಯ ತೊಡಗಿದಾಗ, ಈ ತುದಿಯಿಂದ ಆ ತುದಿಯವರೆಗೂ ಬರಿ ಕರಿತಲೆಗಳು, ಪಿಳಿಗರಿಯೊ ಕಣ್ಣುಗಳೇ ಕಾಣತೊಡಗಿದವು.

ಎಲ್ಲೆಲ್ಲೂ ಜನವೆ ಜನ. ಲಯಬದ್ಧವಾಗಿ ಬೀಳುತ್ತಿದ್ದ ತಾಳ ಮೇಳಕ್ಕೆ, ಹೊತ್ತಿ- ಆರಿ; ಹೊತ್ತಿ- ಆರುತ್ತಿದ್ದ ಬಣ್ಣಗರಿಯೊ ಬೆಳಕಿಗೆ ಎತ್ತಿ ಕುಕ್ಕರಿಸಿದಂತಾಗುತ್ತಿತ್ತು. ಆಗ ಉತ್ಸಾಹ, ಹುಮ್ಮಸ್ಸು, ಆವೇಶ, ದರ್ಪ, ಕೊಬ್ಬಿನಿಂತ ಅಭಿಮಾನ. ಹೇಳಿದ್ದೇ ಹೇಳಿದ್ದು. ಹಾಡಿದ್ದೇ ಹಾಡಿದ್ದು; ಚಪ್ಪರ ಹಾರಿಹೋಗುವಂತೆ. ಜೊತೆ ಜೊತೆಗೇ ಚಪ್ಪಾಳೆ, ಒನ್ಸ್‌ಮೋರ್, ಶಿಳ್ಳೆ-ಕಾಕು-, ಹೂವ್ನಾರ.. ನಾಟಕದಲ್ಲಿ ಪಾರ್ಟುಮಾಡೇ ಅನುಭೌವಿಸಬೇಕು ಇಂಥ ಮಜ!

ಹಾಡಿದ. ಮೂರನೆ ಕಾಲದಲ್ಲೇ; ಮೇಷ್ಟರು ಬಾರಿಸಿದಲ್ಲೇ ಹಾಡಿದ. ಸಿಂಹಾಸನದಿಂದ ಎರಡು ಮೆಟ್ಟಿಲಿಳಿದು ಬಂದು ಹಾಡಿದ. ಕೃಷ್ಣನ Justify Fullಮೀರಿಸಿ ಹಾಡಿದ. ಸೈ ಅನ್ನೋವರೆಗೂ ಹಾಡಿದ.

ಐದು ಗ್ರಾಮವಲ್ಲ- ಐದು ಮುಳ್ಳು ಮೊನೆ ಮುರಿಯೋವಷ್ಟು ಜಾಗಾನೂಸೈತ ಕೊಡೋದಿಲ್ಲವೆಂದು ಮೀಸೆ ತಿರುವಿ, ಒರೆಯಿಂದ ಕತ್ತಿ ಹಿರಿದೆಳೆದು ಮತ್ತೆ ಸ್ವರಕ್ಕನೆ ನೂಕಿ, ತೊಡೆತಟ್ಟಿ, ಕಾಸೆ ಮೇಲೆತ್ತಿ, ಮತ್ತೆ ಪೀಠಕ್ಕೇರಿ ಕೂತು ಅಟ್ಟಹಾಸದಿಂದ ನಕ್ಕು, ಉಸಿರುಕಟ್ಟಿ ಹೇಳಿದ. ದುಶ್ಯಾಸನ ಕರ್ಣನಾದಿಯಾಗಿ ಎಲ್ರೂ ಎತ್ತರಿಸಿ ದನಿಗೂಡಿಸಿದರು. ಪ್ರೇಕ್ಷಕರೆಲ್ಲ ಕೇಕೆ ಹಾಕಿ, ಪ್ರತಿ ಮಾತು ಮಾತಿಗೂ ಪದಪದಗಳಿಗೂ ಚಪ್ಪಾಳೆ ಹಾಕಿದರು. ಇಡೀ ಚಪ್ಪರವೇ ಮೊಳಗುಟ್ಟಿ ಮಾರ್ದನಿಗೊಂಡಿತು.

ಆ ಘಟ್ಟದಲ್ಲಿ ಕಿರಿಚಿದಂತೆನಿಸಿ ಆತರಿಸಿದಂತೆ ಎದ್ದು ಕೂತ. ಮೈ ಬೆವತು, ರೋಮ ನಿಂತು, ನರಗಳು ಬಿಗಿದುಕೊಂಡಿದ್ದವು. ತಲೆ ದಿಂಬು ಒಂದ್ಕಡೆ, ರಗ್ಗು ಇನ್ನೊಂದ್ಕಡೆ ಬಿದ್ದಿದ್ದವು.

ಕುಳ್ಳಪ್ಪ ನಿಧಾನವಾಗಿ ಇಳಿಯತೊಡಗಿದ. ಕನಸು ಪೂರ್ಣವಾಗಿ ಕರಗಿತ್ತು. ಅತ್ತೆ ಒಳಗೆ ಗೊರಕೆ ಹೊಡೀತಿದ್ದು ಒಂದೇ ಸಮೆ ಕೇಳಿಸುತ್ತಿತ್ತು. ಕೆಂದ ಕಾಲ್ದಸಿ ಮಲಗಿತ್ತು. ಮುತ್ತಜ್ಜಿಯ ಬೆನ್ನಿನಂತಿದ್ದ ಬೀದಿ, ಅಡ್ಡವಡ್ಡವಾಗಿ ಸೊರಗಿ ನಿಂತಿದ್ದ ಮನೆ. ಎಲ್ಲೆಲ್ಲೂ ಕತ್ತಲೆ ತನ್ನ ಬಿಗಿ ಮುಷ್ಟಿಯಲ್ಲಿ ಅದುಮಿಕೊಂಡಂತೆ ಕಾಣುತ್ತಿತ್ತು. ಉಳಿದೆಲ್ಲ ನಿಶ್ಯಬ್ದ; ನಿರ್ಜನ. ಅವನಿಗೆ ಆಳವಾಗಿ ನಿದ್ರೆ ಹತ್ತಿರಲಿಲ್ಲ. ಬಹು ಹೊತ್ತು ಒದ್ದಾಡಿ ಒದ್ದಾಡಿ ಆಗತಾನೆ ಮಂಕುನಿದ್ದೆ ಹತ್ತಿರಬೌದು. ಅಷ್ಟರಲ್ಲೇ ಕನಸು ಕಂಡ, ಆ ಕನಸಿಗೆ ಕಾರಣವೂ ಇತ್ತು.

ಅಂದು ನರಸಪ್ಪ ಲಕ್ಕಿಕುಪ್ಪೆಯಿಂದ ಹೊಸಮೇಷ್ಟರನ್ನು ಕರೆತಂದಿದ್ದ. ಅವನನ್ನು ತಡೆದುಕೊಳ್ಳೋದೇ ಕಷ್ಟ ಅಂತ ಎಲ್ಲರಿಗೂ ಗೊತ್ತಿದ್ರೂ ಹೊಸ ನಾಟಕ, ಹೊಸ ಮೇಸ್ಟರು ಬೇಕಾದ್ದರಿಂದ, ಮಡಿವಾಳ್ರ ರಾಮಯ್ಯನ ಹಳೇಕಥೆ, ಹಾಡಿದ್ದೇ ರಾಗ ವಾಕರಿಕೆ ಬಂದಿದ್ದರಿಂದ ಊರಲ್ಲಿ ಎಲ್ಲರೂ ಒಪ್ಪಿ ಮೊದಲಿಗೆ ಈ ಪ್ರಯತ್ನ ನಡೆದಿತ್ತು. ಎರಡು ಖಂಡುಗ ರಾಗಿ, ಕೈಗೆ ನೂರೈವತ್ತು ರೂಪಾಯಿ, ಒಂಜೊತೆ ಅಂಗಿ ಪಂಚೆ ಎಂದು ಮಿಟ್ಟವಾಗಿತ್ತು. ಇದಲ್ಲದೆ ಸರದಿಯಂತೆ ದಿನಕ್ಕೆ ಎರಡೂಟ, ಒಂತಿಂಡಿ, ಎರಡೊತ್ತು ಕಾಫಿ, ಕೈಗೆ ಬೀಡಿ ಬೆಂಕಿ ಪಟ್ಣಕ್ಕೇ ಅಂತ ಕೈಗೊಂದ್ರೂಪಾಯಿ.

ನಾಟಕ ಈ ಸುತ್ತಮುತ್ತ ಇಲ್ಲಿಗಂಟ ಯಾರು ಅಡದಿದ್ದಂಥ ಸಂಕ್ಷೇಪ ಮಹಾಭಾರತ. ಅಪಾರ ಜನ ಬೇಕಿತ್ತು. ಆರಂಭಕ್ಕೆ ಬಂದ್ರೆ ಬೆಳಕರಿಯೋ ಗಂಟ ನಿಲ್ಲಬೇಕಿದ್ದ ಎಲ್ಲ ಕಟ್ಟುಪಾರ್ಟುಗಳು.

ಕುಲದ ಹಟ್ಟಿ ತುಂಬೋಗಿತ್ತು. ಮ್ಯಾಳ ಮಿಟ್ಟ ಮಾಡಲು ಯಜಮಾನ್ರು ಅವ್ರು ಇವ್ರು ಅಂತ ಎಲ್ರೂ ಸೇರಿಸಿಕೊಂಡಿದ್ರು. ಇದಕ್ಕೆ ಏರ್ಪಾಟು ಮಾಡಿದ್ದ ನರಸಪ್ಪ ಮ್ಯಾಳದ ಹುಡುಗರ ದೃಷ್ಟೀಲಿ ಬಲು ಎತ್ತರಕ್ಕೆ ಕಾಣಿಸಿದ್ದ. ಅವರೆಲ್ರಿಗಂತು ಉತ್ಸಾಹ- ಹುಮ್ಮಸ್ಸೇ ಎದ್ದು ಬಂದಂಗೆ. ಅಂಥ ಸಮಯ ಕೌರವನ ಪಾರ್ಟಿಗೆ ನೀನೇ ಸರಿ ಅಂತ ಒಮ್ಮತದ ತೀರ್ಮಾನವಾಗಬೇಕಿದ್ರೆ ಪಡಕೊಂಡು ಬಂದಿರಬೇಕು ಆದರೆ..

ಸುಮ್ಮನೆ ಒಲ್ಲೆ- ಎಲ್ಲೇಂದ್ರೂ ಮೇಸ್ಟರು ಎರಡು ಮಟ್ಟ ಹೇಳಿಸಿದ್ರು. ಒತ್ತಾಯ ಮಾಡಿದಂಗೆಲ್ಲ ಉತ್ಸಾಹ ಏರ್ತಿತ್ತು. ಕೃಷ್ಣ- ಕೌರವನ ಸಂಧಿಗೆ ಬಂದ ಸಮಯದ ಯುಗಳ ಕಂದವನ್ನೂ ತನ್ನ ಮತ್ತು ನರಸಪ್ಪನಿಂದ ಅನ್ನಿಸಿದ್ರು. ತನ್ನ ಕಂಚಿನ ರಾಗಕ್ಕೆ ಮಾತಿನ ಕಡುಪಿಗೆ ಎಲ್ರೂ ಸೈ ಅಂದ್ರು -ಮಾವೊಬ್ಬನ ಹೊರ್ತಾಗಿ.

ಯಾವ ಪಾರ್ಟಿಗೆ ಯಾರಾರು ಸರಿಯೆಂದು, ಅಂಥವರೆಲ್ರಿಂದ ಒಂದೊಂದು ಮಟ್ಟು, ಮಾತನ್ನೂ ಹೇಳಿಸಿದ್ರು. ಅದರಂತೆಯೇ ಪಾರ್ಟು ಹಂಚುತ್ತ ಬಂದ್ರು. ಕುಳ್ಳಪ್ಪನ ಸರದಿಯೂ ಬಂತು. ಒಳಗೆ ಒತ್ತಾಸೆಯಿದ್ರೂ ಬೇಕಂತ್ಲೇ ಬಾಯಿ ಮಾತಿಗೆ ‘ನಂಗೆಲ್ಲಾಯ್ತದೆ’ ಅಂದ. ಸೂರಪ್ಪ ‘ಇದ್ಯಾವ್ ತಿರಕ್ ಬಡಾಯ ಅದೇನು ಸರ‍್ಯಾಗಿ ಹೇಳ್ಲಾ’ ಅಂದಾಗ ‘ನಂ ಮಾವ ಹೂಂ ಅಂದೆ ನಾನೆಂಗೇಳ್ಳಿ ನೀವೇ ಒಂದ್ಮಾತು ಕೇಳಿ’ಎಂದು ಸೇರಿಸಿದ.

ಮಾವನ ಕೂಗಿದಾಗ ಅವನು ಯಾವಾಗ ಎದ್ದು ಹೋಗಿದ್ನೋ ಯಾರಿಗೂ ತಿಳಿಯದು. ಆದರೆ ಅವನು ಎದ್ದು ಹೋಗಿದ್ದು ತಾನು ಕೊನೆ ಪದ ಹೇಳುತ್ತಿದ್ದಾಗೆಂದು ಕುಳ್ಳಪ್ಪ ಕಂಡಿದ್ದ. ಮಾವ ಮ್ಯಾಳದ ಮನೆಗೆ ಬರೋದು ಅಪರೂಪ. ಅಂಥಾದ್ರಲ್ಲಿ ಈಗ ಬಂದದ್ದು ಕಂಡು, ಈ ಸಲ ತನ್ನ ನಾಟಕಕ್ಕೆ ಸೇರಿಸೆಯೇ ಸೇರುಸ್ತಾನೇನೋ ಅಂದ್ಕೊಂಡೇ ಮೈಯೆಲ್ಲಾ ಕಣ್ಣಾಗಿಸ್ಕೊಂಡು ನಿರುಕಿಸ್ತಿದ್ದ. ಆದ್ರೆ ಎಂದು ಮೆಲ್ಲ ಎದ್ದನೋ ಆಗಲೇ ತನ್ನ ಎದೆ ಎಂದಿನಂತೆ ಕಲ್ಲಾಗತೊಡಗಿತು. ಆದ್ರೂ ಆಸೆಯೊಂದು ಬೇಸಿಗೆಯಲ್ಲೂ ಬದುಕುವ ಗರಿಕೆಯಂತೆ ಇರುತ್ತಲ್ಲ-ಅದಕ್ಕಾಗಿ ಕಾದು ಕೂತ.

‘ಅಪ್ಪ ಅವ್ವ ಮಾವUವ ಯಾರ‍್ನೂ ಹುಡಿಕ್ಕೊಂಡೋಗಿ ಪರ್ಸಾದ ಕೇಳೋದು ಬ್ಯಾಡ. ಯಾರಾರಿಗೆ ಇಷ್ಟ ಅದೊ ಅಂಥೋರು ಹೂಂ ಅನ್ಲಿ. ಅಪ್ಪ ಅವ್ವದೀರ ಹತ್ರ ಹೋಗಿ ನಿನ್ ಮಗನ್ನ ಸೇರ್ಸು ನಿನ್ನ ಅಳೀನ್ನ ಸೇರ್ಸು ಅಂಥ ಹೊಸೆಯೊ ಹಜಾಂಗಿರಿ ಕೆಲ್ಸ ನಂಗ್ಯಾಕೆ?’ಎಂದು ಮಾವನ ಕಂಡ್ರೆ ಮೊದಲಿಂದ್ಲೂ ಆಗದಿದ್ದ ಕೆಂಪೇಗೌಡ್ರು ಕೊಸಾರನೆ ಅಂದ ಮಾತು ಹೆಂಗಾದ್ರು ಒತ್ತಾಯ ಮಾಡಿ ಮಾವನಿಗೆ ಹೇಳಿ ಸೇರುಸ್ತಾರೆ ಅಂದ್ಕೊಂಡಿದ್ದ ತನ್ನ ಎದೆಯಾಸೆಯ ಮೇಲೆ ಚಪ್ಪಡಿ ಎಳೆದಂತೆಯೇ ಬಂದೆರ್ಗಿತು.

ಮೇಸ್ಟರೂ ಕೂಡ ‘ನೋಡ್ರೀ ನೀಂ ಮಾವನ್ನ ಇಲ್ಲೇ ಕರ‍್ಕೊಂಡು ಬಲ್ರಿ ಹೇಳಾನೆ-ನೀವು ಸೇರ‍್ಕೊಳ್ರಿ ಪರ‍್ವಾಗಿಲ್ಲ’ ಎಂದು ವಿಶೇಷವಾಗಿ ಆಹ್ವಾನಿಸ್ದಾಗ ತನ್ನ ಪಾಲಿಗೆ ಇಲ್ಲೇ ಈ ಭೂಮಿ ಇಬ್ಭ್ಬಾಗವಾಗಬಾರದ ಅನ್ನಿಸಿತು.

‘ಹುಂ! ಅವುನ ಮಾವ್ನೋ ಸೇರ್ಸೋನು.. ಹೇಲ್ನಲ್ಲಿ ಬಿದ್ದ ಕಾಸ್ನೂ ಎತ್ತಿ ಗಂಟಾಕೋನು.. ಎಲ್ಲಾದ್ರೂ ಹೊಲ ಮನೆ ಸಿಕ್ತಾವೋ, ಯಾರಾದ್ರೂ ಅಡವಿ ಗಿಡವಿ ಇಡ್ತಾರೋ ಅಂತ ಎಣ್ಕೆ ಹಾಕೋದ್ಬುಟ್ಟು ಇಂಥದ್ಕೆಲ್ಲ ಸೇರುಸ್ತಾನಾ? ಅದೇನೊ ಹಿಂದ್ಕೇಳಿದಂಗಾಯ್ತು.. ಏನಪ್ಪ- ಇದ್ರಮ್ಯಾಲೆ ಇವನಿಷ್ಟ...’ ಅಂದ ಗೊರವ ಸಣ್ಣಗೆ. ಅಲ್ಲಿಗೆ ತನ್ನ ಅಧ್ಯಾಯ ಮುಗ್ದಂತಾಗಿತ್ತು.

ಕುಳ್ಳಪ್ಪನಿಗೆ ಆ ನಿರಾಸೆಯ ಹೆಂಗೆ ಶಮನ ಮಾಡ್ಕೋಬೇಕೆಂಬುದೇ ತಿಳೀದೆ ಮೂಗು ಬಾಯಿ ಮುಚ್ಚಿ ಹಿಡಿದಂತಾಗಿತ್ತು. ಒಂದ್ಸಲ ಆದ್ರೂ ಹೆಂಗಾದ್ರು ಮಾಡಿ ನಾಟ್ಕಕ್ಕೆ ಸೇರೆ ಸೇರ್ಬೆಕು ಅನ್ನೋ ಆಸ ಸದಾ ಕೊರೀತಿತ್ತು. ಇವತ್ತೇನೋ ಅವಕಾಶ್ವೇ ಹುಡಿಕೊಂಡು ಬಂದಂತಾಗಿತ್ತು. ಆದ್ರೆ ಅಷ್ಟೇ ಅನಾಯಾಸ್ವಾಗಿ ಕಳಚಿಹೋಗಿದ್ನ ತಡೆಯೋದಾದ್ರೂ ಹೆಂಗೆ?

ಸಿಡಿ ಸಿಡಿ ಹೆಚ್ಚಾಯ್ತು. ಬೀಡಿ ತಡಕಿ ನೋಡಿದ. ಅದೂ ಮುಗಿದು ಹೋಗಿತ್ತು. ಮ್ಯಾಳದ ಮನೇಲೇ ಒಂದು ಬೀಡಿ ಕೇಳಿ ಅಣ್ಣಯ್ಯನಿಂದ ಬೈಸಿಕೊಂಡಾಗಿತ್ತು. ತೂಪರದೆಲೆಯೇನೊ ಇದ್ದೋ, ಆದ್ರೆ ತುಂಬಿ ಸೇದಲು ಹೊಗೆಸೊಪ್ಪು ಮುಗ್ದೋಗಿತ್ತು. ಅದೂ ಮಾವ್ನಿಂದ್ಲೇ. ತಾನು ಜೋಡಿಸ್ಕೊಂಡಿಟ್ಟಿದ್ದ ಹೊಗೆ ಸೊಪ್ನೆಲ್ಲಾ ಅವನೇ ತುಂಬ್ಕೊಂಡು ಸೇದಿ ಸೇದಿ ಮುಗಿಸಿದ್ದ. ಗಂಟುಕಳ್ಳ. ಆದದ್ದಾಯ್ತು ಮುಗ್ದೋಗದೆ ಎಲ್ಲಿಂದ ತಂದಾನು ಅಂತ ತಿಳ್ದಾದ್ರೂ ಸಂತಿಂದ ತಂದ್ಕೊಡ್ತಾನ? ಗುಳ್ಳೆಲಕ್ಕನ ಜಾತೋನು.. ಅದಿಕ್ಕೇ ನರಸಪ್ಪ ಹೇಳೋದು- ನಾಯಿ ಮೊಲೇಲಿ ಹಾಲಿರೋದು ನಿಂಮಾವನ ಪೆಟ್ಗೇಲಿ ಕಾಸಿರೋದು ಒಂದೇ ಅಂತ.

ಹುಂ! ನೋಡು ನರಸಪು ಹೆಂಗವನೆ. ಇದ್ರೆ ಅವನಂಗೇ ಇರಬೇಕು. ಅದೇನವನ ಜಾಯಾಮಾನ. ನನ್ನಂಗೆ ಅವನ್ಗೂ ಮನೆ ಮಠ ಇಲ್ಲ. ತಂದು ಅಂತ ಹೇಳ್ಕೊಳ್ಳಾಕೆ ಒಂಚೂರು ಭೂಮಿಯಿಲ್ಲ. ಆ ಸಂತೆ ಈ ಸಂತೇಲಿ ಬರೀ ದಲ್ಲಾಳಿ ಯಾಪಾರ ಮಾಡ್ಕೊಂಡು ಯಾರದೊ ಜಗಲಿ ಮೇಲೆ ನೆರಕೆ ಕಟ್ಕೊಂಡು, ಹೆಂಗೆ ಜೀವನ ನಡುಸ್ತಾ ಅವನೆ. ಉಳ್ಳೋರೆಲ್ರೂನ್ನೂ ಅವನ್ಮುಂದೆ ನೀವಾಳ್ಸಿ ಹಾಕಬೇಕು. ಅಂಥ ಪಟೇಲ್ರ ಬಸಪ್ಪನೋರ ಮನೇಲೇ ದಿನಾ ಅನ್ನ ಮಾಡ್ತಾರೋ ಇಲ್ವೋ ಕಾಣೆ. ಅಂಥಾದ್ರಲ್ಲಿ ಇವನು ನಂಗೆ ಅನ್ನಯಿಲ್ದೆ ಹೋದ್ರೆ ಉಂಡಂಗೇ ಆಗಾಕಿಲ್ಲ ದಿನಾ ಹಿಟ್ಟಿನ ಮ್ಯಾಲೊಂಚೂರು ಬಿಳೀದು ಆಗೇ ತೀರಬೇಕು ಅಂಥೇಳಿ ಹಂಗೆ ಅನ್ನ ಮಾಡ್ಸಿ ಉಣ್ಣಾಕ್ಕೂ ಉಣ್ತಾನೆ. ಯಾವಾಗ್ಲೂ ತುಂಬ ತೋಳಿನ ಅಂಗಿ ಇಕ್ಕೊಂಡು ಉಡ್ಗೆ ಹಾಕೊಂಡೇ ತಿರುಗ್ತಾನೆ. ಊರೋರೆಲ್ರೂ ತನ್ನ ಸಂಸಾರದ ಕಡೆಗೆ ಕೈ ತೋರ್ಸಿ ಕೆರೆದಾಡಿಕೊಳ್ಳಂಗೇ ಬಾಳ್ತಾನೆ.

ಅವನೇ ಹೋಗಿ ಈ ಮೇಸ್ಟ್ರು ಕರ‍್ಕೊಂಡು ಬಂದ. ನಾಟಕ ಎತ್ತಿದ. ತಾನೆ ಕೃಷ್ಣನ ಪಾರ್ಟು ವೈಸ್ಕೊಂಡ.

ಅವನ ಸದಿರೀಗೆ ನಿಲ್ಸಿ ನೀನು ಕೌರವನ ಪಾರ್ಟು ವೈಸ್ಕೊ ಅಂದ್ರು. ಇಬ್ರೂ ಕೈಲೂ ಅವೆರಡು ಪಾರ್ಟುಗಳ ವಷ್ಟೊಷ್ಟು ಪದ ಹೇಳಿಸಿ ನೋಡಿದ್ರು. ತನ್ನ ಹಾಡುಗಾರಿಕೆಗೆ ಎಲ್ರೂ ತಲೆ ತೂಗಿದ್ರು. ಕೊಟ್ರೆ ಕೌರವನ ಪಾರ್ಟು ಇವುಂಗೆ ಕೊಡಬೇಕು ಅಂದ್ರು. ಯಾರಿಗೂ ಹಿಂಗೆ ಹೇಳಿರ‍್ಲಿಲ್ಲ. ಅಂಥೋದ್ರಲ್ಲಿ ನಂಗೆ ಒಮ್ಮತವಾಗಿ ಹೇಳಿದ್ರು. ಆದ್ರೆ ತಾನು ಏಕ್‌ದಂ ಹೂ ಅಂದ್‌ಬಿಡಾಕೆ ಆಯ್ತಾ? ಮಾವಾ ಮಳ್ಳಿಯಂಗೆ ಮೆಲ್ಲಗೆ ಎದ್ದು ಬಂದುಬುಟ್ನಲ್ಲ ಸೇರಿಸ್ಬೇಕಾಯ್ತದೆ ಅಂತ. ಇವನ್ ಈ ಜೀನ ಬುದ್ಧಿಗೆ...

ಹೋಗ್ಲಿ ಅವನ ಹಠದ ಮ್ಯಾಲೆ ನಾನಾದ್ರೂ ಆಗ್ಲಿ ಅಂದ್ ಬುಡಾನೆ ಅಂದ್ರೆ ಅಷ್ಟು ಎಲ್ಲಿದ್‌ತರ‍್ಲಿ? ಪುಟಗೋಸಿ ಒಂದ್ ನಾಟಿ ಬೀಡಿ ತಕ್ಕೋಳ್ಳಾಕೆ ಕಾಸಿಲ್ಲ. ಅಂಥೋದ್ರಲ್ಲಿ ಅದೇನು ಸುಮ್ನೆ ಆಯ್ತ?... ನಾಟಕದ ಖಯಾಲಿ ಭಾಳ ಅದೆ ಅಂತ ಗೊತ್ತಿದ್ರೂ ಸೇರುಸ್ದೆ ಹೋದ್ನಲ್ಲ? ಮತ್ಯಾಕೆ ಹಿಂಗೆಲ್ಲ ದುಡಿಯೋದು ಒಳ್ಳೆ ಕತ್ತೆ ದುಡಿಯಂಗೆ?

ಕುಳ್ಳಪ್ಪನ ತಲೆಯೊಳಗೆ ಕುರುಕ್ಷೇತ್ರವೇ ನಡೆಯತೊಡಗಿತು. ಚಾಪೆ ಮೇಲೆ ಹಂಗೆ ಕೂತಿದ್ದ ಅವನಿಗೆ ಸೇದೋ ಗುಂಡಿತ್ತಾವು ಯಾವುದೋ ಒಂದು ನಾಯಿ ಬೊಗಳುತ್ತಿದ್ದ ಕಂಡು ಇಲ್ಲಿಂದಲೇ ಶುರು ಮಾಡ್ದ ಕೆಂದನ ಒದರಾಟಕ್ಕೆ ತಲೆ ಸಿಡಿದು ಹೋಗುವಂತಾಯ್ತು. ಸುಮ್ಮನಾಗುವಂತೆ ಅದಕ್ಕೆ ಹೇಳಿ-ಲೊಚ್ಚಗರಿದು ಸಾಕಾದ. ಅದು ಮಣಿಯೋ ಹಂಗೆ ಕಾಣಲಿಲ್ಲ. ದಿಕ್ಕಂತ ಒದ್ದ. ಕುಯ್‌ಗರೀತ ಜಗಲಿಯಿಂದ ಕೆಳಗೆ ಬಿದ್ದು, ಎದ್ದು ಇವನ ಕಡೆ ಒಮ್ಮೆ ನೋಡಿ ಮತ್ತೆ ಹಿಡಿದಿಡಿದು ಬೊಗಳುತ್ತ ಮುಂದೆ ಹೋಯ್ತು.

ಅಳಿಮೈತನಕ್ಕೆ ಸೇರಿ, ಮದ್ವೆಯಾಗಿ ಇಲ್ಲಿಗೆ ಆರೇಳು ವರ್ಷ ಕಳೆದ್ರೂ ಮಾವ ಮನೆ ಮಗಾಂತ ಭಾವುಣಿಸ್ಲಿಲ್ಲ. ಅವರಿವ್ರ ಸುದ್ದೋಗ್ಲಿ ಖಾಸ ಅಳಿಯಂಗೇ ಕೊಡೋದು ಬುಡೋದಂದ್ರೆ ಸುತ್ರಾಂ ಹಿಡೀನಿಲ್ಲ. ತನಗೆ ಅನ್ನಿಸಿದ್ನ ತಂಗೆ ಮಾಡೋಕ್ಕುಂಟಾ?... ಒಂದು ಕೂಟವೇ? ಒಂದು ಆಟವೇ? ಒಂದು ಸಂತೆಗೆ ಗಾಡಿ ಬಾಡಿಗ್ಗೇ ಒಪ್ಪಂದ್ವೆ? ಒಂದು ಖಯಾಸದ ಅಂಗಿ-ಅರ‍್ವೆಯೇ? ಒಂದೂರೆ ಒಂದು ಕೇರಿಯೇ? ಅವತ್ತು ಭಾರಿ ಕೇಳ್ಕೊಂಡ ಅಂತ ಸಣ್ಣ ಮಲ್ಲನಿಗೆ ತಂಗಳದ ಹೊತ್ಗಂಟ ಉಳೋಕ್ಕೆಲ್ಲೊ ಆರು ಕೊಟ್ಟೆ ಅಂತ ಎಷ್ಟು ಹಾರಾಡಿದ ? ಅಲ್ಲಾ ಹಿಂಗಾಗ್‌ಬುಟ್ರೆ ಹೆಂಗೆ? ಥೂ! ಇವುನ ಕೊರುಂ ಬುದ್ಧಿಗೆ ನನ್ ಶಪ್ಪ ಬಿಸಾಕ...

ಒಳಗಿಂದ ಯಾರೊ ಅಗಣಿ ತೆಗೆದ ಸದ್ದಾಯ್ತು. ಅವನ ವಿಚಾರ ಸರಣಿ ಅಲ್ಲಿಗೇ ನಿಂತಂತಾಯ್ತು. ಅತ್ತೆ-ಗಿತ್ತೆ ಇರಬೌದೆಂದು, ಈ ಪುಣ್ಯಾತ್ಗಿತ್ತಿ ಒಬ್ಬಳ ಈ ಹೊತ್ನಲ್ಲಿ ಹೇಳು ಎಂದು ತನ್ನಲ್ಲೇ ಅಂದ್ಕೊಂಡು, ಮೈ ನೀರು ಹುಯ್ಯಕ್ಕಿರಬೌದೇನೋ ಹಿಂಗೆ ಕೂರೋದು ಬ್ಯಾಡ ಅನಿಸಿ ಉರುಳಿ ರಗ್ಗೆಳೆದುಕೊಂಡ. ಬೀದಿಗಿಳಿದು ಚರಂಡಿ ಹತ್ರ ಕೂತು ಚ್ವರ್ ಅಂತ ಹುಯ್ಯತೊಡಗಿದಾಗ ಮೆತ್ತಗೆ ಈ ಕಡೆಗೆ ತಿರುಗಿ ನೋಡಿ ಓ! ಇವಳೋ ಅಪ್ನ ಮಗಳು ಅಂದ್ಕೊಂಡ.

ಈಗ ಅವನ ಆಲೋಚನೆ ಈ ಕಡೆ ತಿರುಗಿತು. ಹತಾಸೆಗೊಂಡ ಮನಸ್ಸು ಯಾಕೋ ಉಚ್ಚೆ ಸದ್ದಿಗೆ ವಿಕಾರವಾಗತೊಡಗಿತು. ಎಷ್ಟು ದಿನ ಆಯ್ತು? ಹೋಗಿ ಮUನಂಗೆ ಮಲಿಕೊತ್ತಾಳೆ ಗರ್ತಿ-ತಾಳು ಇವತ್ತು ಅಂದ್ಕೊಂಡ.ಮೈಯಲ್ಲಿ ಕಾವೇರತೊಡಗಿತು. ಮಂತಾನಸ್ಥನ ಮಗಳು- ಗಂಡ ಅನ್ನೋನ ನಿಗಾನೇಯಿಲ್ಲ. ನಾನಾಗೇ ಕರೀಬೇಕು- ಅಂದ್ಕೊಂಡ. ಆದ್ರೆ ಆಚೆ ಜಗ್ಲೀಲಿ ಅವಳಪ್ಪ ಮಲಗಿದ್ದು ನೆನಪಾಯ್ತು. ಮುದಿಯ ಕೊಂಟಿನಂಗೆ ಬಿದ್ದಿದ್ದ. ಹಂಗೇ ಬಿದ್ದಿರ‍್ಲಿ ಆ ಗುಂಮ್ಟ. ನನಗಂತು ಅವನಿಂದ ಪಾರಿಲ್ಲ ತಲೆ ಚಿಟ್ಟು ಹಿಡ್ದೋಗೈತೆ ಎಂದು ಹಲ್ಲುಮುರಿ ಕಚ್ಚುತ್ತ ರಗ್ಗಿನೊಳಗೆ ಸೇರಿಕೊಂಡ್ರೆ ಹೆಂಗೆ ಗೊತ್ತಾಯ್ತದೆ ಮಣ್ಣು- ಆ ಹಿಂಜಿನ್ಗೆ? ಎಂದ್ಕೊಂಡು ಧೈರ್ಯ ಮಾಡಿ ಕೇಳಿಸ್ತೊ ಇಲ್ವೋ ಅನ್ನೋ ಹಂಗೆ ಸಣ್ಣಗೆ ಕೆಮ್ಮಿದ. ಕತ್ತೆತ್ತಿ ಸೂಚ್ನೆಯಂತೆ ಹೆಂಡ್ತಿಯ ಕಡೆಯೂ ನೋಡಿದ. ಆದ್ರೆ ಅದರ ಪರಿವೆಯೇ ಇಲ್ಲದಂತೆ ಅವಳು ಒಳ ನಡೆದು ಬಾಗಿಲು ಹಾಕಿ ಅಗಣಿ ಜಡಿದಳು.

ಅವನ ಬಾಯನ್ನೂ ಸೇರಿಸಿ ಅಗಣಿ ಜಡಿದಂತಾಯ್ತು. ಆದ್ರೆ ಮನಸ್ಸು ಎತ್ತಿಬಿಟ್ಟ ಕೋಡಿಯಂತೆ ತೆರೆದುಕೊಂಡಿತ್ತು. ಅವನಿಗೆ ತಡೀಲಾಗಲಿಲ್ಲ. ಗೌಜಲಕ್ಕಿ ಗೂಡಿಗಿಟ್ಟು ಬಾಜಿಗಾಗಿ ಬೆಳೆಸೋ ಹಂಗೆ ಭೂಮಿ ಗೈಯೋದಿಕ್ಕೆ ಮಾತ್ರ ಈ ದೇಹ ಬೆಳಿಸ್ತಾರೆ. ಈ ... ಮತ್ತೆ ಬಂದ ಬೈಗುಳವನ್ನು ಬಾಯಲ್ಲೇ ತಕ್ಕೊಂಡು ಕೈ ಕೈ ಹೋಸಿಕೊಂಡ.

ಇವರ ನಡವಳಿಕೇನೆ ಸರಿಕಾಣಲಿಲ್ಲ. ಎದೆಯೊಳಗೆ ಬತ್ತ ಕುಟ್ಟಿದಂಗೆ ಆಗ್ತಯಿತ್ತು. ಇಂಥ ಬಾಳು ಗುಲಾಂ ನನ್ನ ಮಗ್ನ ಬಾಳು ಅನ್ನಿಸ್ತು. ಆಗ ನರಸಪ್ಪನ ಬಾಳು ಸಾಕಾರಗೊಂಡ್ತು. ಎದ್ದ ಮೊಲಾನ ಹಿಂಬಾಲಿಸೊ ಕೆಂದನಂಗೆ ಮನಸ್ಸು ನರಸಪ್ಪನ ಹಿಂಬಾಲಿಸ್ತು.

ಅವನಂಗೇ ತಾನೂ ಇದ್ದಿದ್ರೆ.. ಅವನಂಗೇ ತಂದೇ ಒಂದು ನೆರಳು ಮಾಡ್ಕೊಂಡು ತನ್ನ ಕಾಲ್ಮೇಲೆ ತಾನು ನಿಂತಿದ್ರೆ.. ಹಿಂಗೆಲ್ಲ ಆಯ್ತಿತ್ತ? ಇವನಿಂದಾಗಿ ಎಲ್ರಿಂದ ತಲೆಗೊಂದು ಮಾತು ಕೇಳೋದು ತಪ್ತಿತ್ತು. ನನ್ನ ಹಣ್ಪಾಡು ನಾನೋಡ್ಕೋಬೌದಾಗಿತ್ತು.
ಅವನ ಮನಸ್ಸು ತೋಡಿದ ಹಿಕ್ಕಲಲ್ಲಿ ಓಡೋ ನೀರಂತೆ ಇಳಿಗಣ್ಣ ಕಡೆ ಓಡತೊಡಗಿತು.

ಇಲ್ಲೀಗಂಟಾಯ್ತು. ಇನ್ಮೇಲೆ ಸಾಕು. ನರಸಪ್ಪನಂಗೇ ಇದ್ದು ಬಿಡೋದೇ ಸರಿ. ಇವಳೇನಾದ್ರು ಇನ್ನು ಅಪ್ಪ ಅವ್ವ ಅಂತ್ಲೇ ಹೇಳ್ಕೊಂಡು ಕೂತ್ರೆ ಅವಳ ಹಣ್ಪಾಡು. ನಂಗಂತು ಸಾಕಾಯ್ತು. ಇನ್ಮೇಲೆ ಇವರ ಹಂಗೇ ಬ್ಯಾಡ. ಅತ್ತೆ ಅತ್ರೂ ಅತ್ಕೊಳ್ಳಿ ಅದ್ಕೆ ನಾನೇನು ಮಾಡ್ಲಿ? ಅಂಥೋಳು ಗಂಡ್ನಿಗೆ ಹೇಳ್ಕೊಳ್ಳಿ- ಅಂದ್ಕೊಂಡ. ಒಂದು ತೀರ್ಮಾನಕ್ಕೇ ಬಂದೆ ಅನಿಸಿದಾಗ ಯಾರೋ ಹಿಡಿದಿದ್ದ ಮೂಗನ್ನು ಬಿಟ್ಟಂತಾಯಿತು.

ತಾನು ಮನೆಬಿಟ್ರೆ ಮಾವನ ಈ ಹಾರಾಟೆಲ್ಲ ನಿಂತೋಗುತ್ತೆ. ಗೈಯೋರಿಲ್ದೆ ಹೊಲೆಲ್ಲ ಪಾಳು ಬೀಳ್ತವೆ. ಆಗ ತನ್ನ ಜೀನ ಬುದ್ಧಿ ಗೊತ್ತಾಗಿ, ಬಂದು ನನ್ನ ಕಾಲ್ನೇ ಕಟ್ಟಬೇಕು. ನೀನೇ ಗತಿ ಅನ್ನಬೇಕು. ಆಗ ತಾನು ಏನೂಂಥ ಗೊತ್ತಾಯ್ತದೆ.

ನೀನೇನೇಳ್ತಿಯೋ ಹಂಗೇ ಆಯ್ತು ಬಾಪ್ಪ ಅಂತ ಹಲ್‌ಗಿರಿತಾನೆ. ಆಮ್ಯಾಲೆ ನೋಡ್ ಬೇಕು- ಎಂಬ ಚಿತ್ರ ಅವನ ಕಣ್ಮುಂದೆ ಬಂತು.
ತೀರ ಸರಳವಾಗೇ ಭಾಳ ಕ್ಲಿಷ್ಟವೆಂದಿದ್ದ ಗಂಟೊಂದು ಬಿಚ್ಚಿ ಹೋದಂತೆನಿಸಿ, ಒಂಥರ ನಕ್ಕ. ನಾಟಕದಲ್ಲಿ ನಕ್ಕಂತೆ, ಕೃಷ್ಣನ ಹಿಡಿದು ಸಭೆಯೊಳಗೆ ಕಟ್ಟಿ ಹಾಕ್ಸೋವಾಗ ನಗುವಂತೆ, ನಾಟಕ ಅಂದ್ರೆ ತೀರ್ತು-

ದೂರ ಬಲು ದೂರ್ದಿಂದ ನಾಟಕ ನೋಡಕ್ಕೆ ಜನ ಚಿಕ್ಕೂರಿಗೆ ಅಲೆ ಅಲೆಯಂಗೆ ಬಂದು ಎಲ್ಲೆಲ್ಲೂ ಬರಿ ಜನವೇ ಕಾಣ್ತಿತ್ತು. ಊರೆಲ್ಲ ನಂಟಿಷ್ಟ್ರಿಂದ ಸಡಗರದಿಂದ ಗಿಟಗರಿಯುತ್ತ ಗುಡೀ ಮುಂದೆ ದೊಡ್ಡ ಚಪ್ಪರ ಎದ್ದು ನಿಂತು, ಮೈಕು ಊರ‍್ನೇ ಮೊಳಗುಸ್ತಿತ್ತು. ಇದನ್ನೆಲ್ಲ ಕಂಡ ಜೀವ, ನಿಲ್ಲಲಾದ್ರೆ ಒತ್ತೊತ್ತಿ ಬರ‍್ತಿದ್ದ ಹೆಮ್ಮೆ ತವಕದಿಂದ ಕುಣೀತಿತ್ತು. ಆ ಮೇಲೆ ನಾಟಕವೂ ಸುರು ಆಯ್ತು. ಭಜನೆ ಹಾಡಿಯೂ ಮುUತು. ಬರೋ ತನ್ನ ಶೀನುನ್ನೆ ಎಲ್ರೂ ಕಾಯ್ತ ಕೂತಿದ್ರು. ತಾನು ಎತ್ರದ ಸಿಂಹಾಸ್ನದಲ್ಲಿ ಏರಿ ಕೂತಿದ್ದೆ. ಇಡೀ ಊರೇ ನಾಟಕ ನೋಡಕ್ಕೆ ಬಂದಿದ್ರೂ ತನ್ನ ಹೆಂಡ್ತಿ ಬಂದಿರಲಿಲ್ಲ. ಮಾವ ಮಾಮೂಲಿಯಂಗೇ ವಟಗರಿತ ತುಂಡು ಗೋಡೆ ಮೇಲೆ ತುಂಡು ಬೀಡಿನೆ ಊಪಿ ಎಳೀತ ಕೂತಿದ್ದ.

ಪರದೆ ಏಳ್ತು. ಲೈಟು ಝಗ್‌ಢಗಿಸ್ತೋ! ಎಲ್ರೂ ಶಿಳ್ಳೆ ಹೊಡೀತಿದ್ರು. ಮೇಸ್ಟ್ರು ತಲೆ ತೂಗ್ತ ಬಾರಿಸ್ತಿದ್ರು. ತಾನು ಸಿಂಹಾಸನದಿಂದೆದ್ದು ಕೃಷ್ಣನ (ಮಾವನ್ನ) ಹಿಡಿದು ರಾಜಸಭೆ ಮುಂದೆಲ್ಲ ಅಟ್ಟಾಡಿ ‘ಕಟ್ಟಿ ಹಾಕಿರಿ ಈ ದುಷ್ಟನನ್ನು’ ಎಂದು ಅಪ್ಪಣೆ ಮಾಡಿದ್ದೇ ತಡ ಸೇವಕ್ರು ಬಂದು ಅವುನ್ನ ದರದರನೆ ಎಳ್ದಾಡತೊಡಗಿದ್ರು. ಅವನು (ಕೃಷ್ಣ-ಮಾವ) ‘ಬ್ಯಾಡ ಬ್ಯಾಡ’ ಎಂದು ಹಲ್ಲುಗಿರೀತ ತನ್ನ್ಕಡೆ ನೋಡ್ತಿದ್ದ. ಮುಂದೆಯೇ ಕೂತ ಅತ್ತೆ ಒಳ್ಗೊಳ್ಗೆ ನಗ್ತಿದ್ದಳು. ಹಂಗೇ ಆಗಬೇಕೂಂತ ಕರ್ಣ ದುಶ್ಯಾಸನ್ರೆಲ್ಲ (ಕೆಂಪೇಗೌಡ್ರು, ಗೊರವ, ನರಸಪ್ಪ) ಛೇಡಿಸ್ತಿದ್ರು. ತಾನು ಗೆದ್ದ ಖುಶೀಲಿ ನಗತೊಡಗಿದ್ದೆ. ಜೊತೆ ಜೊತೆಗೇ ಜನಗಳ ಶಿಳ್ಳೆ, ಕಾಕು, ಚಪ್ಪಾಳೆ, ಒನ್ಸ್‌ಮೋರುಗಳು ನೆರೆ ಥರ ಉಕ್ಕುಕ್ಕಿ ಬರುತ್ತಿರೊ ಹಂಗೆ...

ತಣ್ಣಗಾದಂತೆನಿಸಿತು. ರಗ್ಗು ಕಿತ್ತಾಕಿದ್ಕೂಡಲೇ ಮೂಡ್ಲು ದಿಕ್ಕಿನ ಬೆಳಕು ಕುಕ್ಕಿದಂತಾಯ್ತು. ಅವಳು ‘ಏನೀ ಸುಖ್ನಿದ್ದೆ? ಏನ್‌ಕನ್ಸದು? ಅದೇನು ಹಂಗಂಗೆ ಮಾತಾಡ್ಕೊಂಡು ನಗ್ತಿದ್ದೆ? ನೋಡು ಯಾಲೆ ಏಟೊತ್ತಾಗೈತೆ ಅಪ್ಪ ಕೆರೆಕಡಿಂದ ಬಂದ್ರೆ ನಿನ್ನ ಸುಮ್ಕೆ ಬುಟ್ಟಾನಾ..?’ ಅಂದಳು.

‘ಅಪ್ಪ’ ಎಂದ ಮಾತು ಎಂದಿನಂಗೆ ಕೆಲಸಕ್ಕೆ ಎಚ್ಚರಿಸೊ ಸೂಚ್ನೆ ಅನ್ನಿಸ್ಲಿಲ್ಲ. ಬದಲಾಗಿ ಮೈ ಉರಿ ಹೆಚ್ಚಿಸ್ತು.

ಅವಳ ಮೇಲಿನ ರಾತ್ರಿ ಸಿಟ್ಟು ಇನ್ನೂ ಆರಿರ‍್ಲಿಲ್ಲ. ಅಪ್ಪ...ಅಪ್ಪ.. ಅಪ್ಪಾ.. ಅಪ್ನೆ ಹೆಚ್ಚು ಇವಳಿಗೆ ಗಂಡಗಿಂಡಯೇನೂ ಬ್ಯಾಡ... ಪಟಾರಂತ ಬಾರಿಸಿ ಬಿಡಬೇಕೆನಿಸಿತು. ಅದೇ ಸಿಟ್ನಲ್ಲಿ ಪಟಕ್ಕನೆ ಎದ್ದು ರಗ್ಗು ಚಾಪೆ ಸುತ್ತಿ ತೊಲೆ ಮೇಲೆಸೆದ.

‘ಅಪ್ಪ ಅಂದ್ರೆ ಅಂದ್ಯಾಕಂಗಾಡ್ತಿ? ಅದೇನೂ ಹೇಳ್ತಾರಲ್ಲ-ಬೈಯೋನ್ಯಾವಾಗ್ಲೂ ಬದ್ಕಾಕೆ ಹೇಳ್ದ ನಗೋನ್ಯಾವಾಗ್ಲೂ ಕೆಡಾಕೇಳ್ದಾ ಅಂತ. ಕಾಸಿಗೆ ಕಾಸು ಕೂಡಾಕಿ ಯಾವ ಗಂಡ್ಮಕ್ಕಳು ಅವೆ ಅಂತ ಹಂಗೆಲ್ಲ ಮಾಡ್ತಾನೇಳು? ಅಲ್ಲಾ...’ ಅಂತ ಅಂತಿದ್ದವಳು ಅಪ್ಪ ಬರುತ್ತಿದ್ದ ಕಂಡು ಅಷ್ಟಕ್ಕೇ ನಿಲ್ಲಿಸಿದಳು. ಮಾವ ಬಂದವನು.

‘ಆ ಹಳ್ಳದೊತ್ತಿ ಆಲದ ಮರದಲ್ಲಿ ಯಾರು ಹಂಗೆ ಅಡಿಗೆ ಅಷ್ಟಷ್ಟು ದಪ್ಪ ಕಡ್ಡಿ ಸೊಪ್ಪು ಕಡ್ದೋರು? ಹೋದದ್ದು-ಬಂದದ್ದನ್ನೆಲ್ಲ ನೋಡ್ಕೊಳ್ದೇ ಹೋದ್ರೆ ಹೆಂಗೆ? ಹೋಗು ಆ ಬಿದ್ದಿರೋ ಕೊನೆನಾದ್ರು ಎಳ್ಕೊಂಡು ಬಂದು ಹಿತ್ಲಿಗೆ ಹಾಕು. ಈ ಬ್ಯಾಸ್ಗೆಲ್ಲೇ ಒಂದಿಷ್ಟು ಸೌದೆ ಸೊಪ್ಪು ಜೊತ್ಮಾಡ್ಕೊಳ್ದೆ ಹೋದ್ರೆ ಮಳೆಗಾಲ್ದಲ್ಲಿ ಏನ್ಮಾಡೋದು? ಆಂ..ಅಂದ.’

ಹೆಂಡ್ತಿ ‘ಬಾ ಇನ್ನೊಂದ್ಸಲ ಏನು ಈಗ್ಲೇ ಮುಖ ತೊಳ್ಕೊಂಡು ತಂಗಳ ಉಂಡೋಗಿವಿಯಂತೆ ಒಟ್ಗೇ’ ಅಂದಳು.

ಪಾತ್ರೆ ತೊಳೆದು ಬಚ್ಲಿಗೆ ನೀರು ಹಾಕ್ತಿದ್ದ ಅತ್ತೆ- ಮುಂದೆ ನಾದ್ನಿ: ರಾತ್ರಿ ಹಂಗೆ ಭಾವನೆ ಗಳು ಈಗ ಗೂಡು ಕಟ್ಟಕ್ಕೆ ಅವಕಾಶ ಇರ‍್ಲಿಲ್ಲ. ಅವನೀಗ ಯಥಾ ಸ್ಥಿತಿಗೆ ಬಂದಿದ್ದ. ಮನಸ್ಸೊ ಳಗೆ ನಿಂತು ಪ್ರೇರಣೆ ಕೊಡುತ್ತಿದ್ದ ನರಸಪ್ಪ ನಾಗ್ಲೀ ಬಣ್ಣ ಬಣ್ಣದ ಬೆಳಕಲ್ಲಿ ಕುಣೀತಿದ್ದ ಪಾರ್ಟುಗಳಾಗ್ಲೀ ಯಾವೊಂದೂ ಬೆಂಗಾವ್ಲಿಗೆ ನಿಲ್ಲಿಲ್ಲ ಕಾವೂನು ಕೊಡ್ಲಿಲ್ಲ. ಬದಲಾಗಿ ಎಂದಿನಂತೆ ಇಂದಿನ ಕಾರ್ಯಭಾರದ ‘ಹೊಣೆ’ ನುಸುಳಿ ಈಗಿತ್ತ ಮುಖ ಮಾಡಿತು: ಅದು ಹಿತ್ಲಿಗೆ ಮರದ ಕೊನೆ ಸಾಗ್ಸೋದಾಗಿತ್ತು.

ಕುಳ್ಳಪ್ಪ ನಾದಿನಿ ಕೊಟ್ಟ ಚೊಂಬು ಕೈಗೆತ್ತಿ ಕೊಂಡು ನರ ಉಬ್ಬಿಕೊಂಡಿದ್ದ ಮುಖಕ್ಕೆ ರಭ- ರಭಸವಾಗಿ ನೀರೆರ್ಚಿಕೊಳ್ಳತೊಡಗಿದ. ಅದನ್ನು ನೋಡಿದ ಆ ಹುಡುಗಿ ಭಾವನ ಸಿಟ್ಟು ಇಳೀ ಬೇಕಾದ್ರೆ ಈ ಚೊಂಬು ನೀರು ಸಾಕಾಗೋ ದಿಲ್ಲ ಅಂದ್ಕೊಂಡು ಇನ್ನೊಂದು ಚೊಂಬು ನೀರು ತರಲು ಒಳ ನಡೆಯಿತು. ಮನಸ್ನಲ್ಲೆ ನಗ್ತ.