Saturday, September 18, 2010

ಶಕ್ತಿವರ್ಧಕ ಶುಂಠಿ

-ಡಾ. ಟಿ. ವೆಂಕಟಶಾಮಯ್ಯ

ಪ್ರಮುಖವಾದ ಸಾಂಬಾರ ಪದಾರ್ಥಗಳಲ್ಲಿ ಶುಂಟಿ ಕೂಡ ಒಂದು. ಶುಂಠಿಯಲ್ಲಿ ಉಪಯೋಗ ಮಾಡುವ ಭಾಗ, ಭೂಮಿಯ ಒಳಭಾಗದಲ್ಲಿ ಬೆಳೆಯುವ ಗುಪ್ತ ಕಾಂಡ. ಚಟ್ನಿ, ಉಪ್ಪಿನಕಾಯಿ ಮುಂತಾದ ವ್ಯಂಜನಗಳಲ್ಲಿ ಮತ್ತು ಮಾಂಸಾಹಾರದ ಅಡುಗೆಗಳಲ್ಲಿ ವಿಶೇಷವಾಗಿ ಶುಂಠಿಯನ್ನು ಉಪಯೋಗಿಸುತ್ತಾರೆ. ಇದಲ್ಲದೆ ಬೇಕರಿ ಪದಾಥಗಳು ಹಾಗೂ ವಿವಿಧ ಪಾನೀಯಗಳನ್ನು ತಯಾರಿಸಲು ಶುಂಠಿಯನ್ನು ಉಪಯೋ ಮಾಡುತ್ತಾರೆ. ಒಣಗಿದ ಹಾಗೂ ಹಸಿಶುಂಟಿಗಳೆರಡನ್ನೂ ಸಾಂಬಾರ ಪದಾರ್ಥವಾಗಿ ಬಳಸುತ್ತಾರೆ. ನಮ್ಮ ದೇಹದಲ್ಲಿ ಪಚನಶಕ್ತಿಯನ್ನು ಹೆಚ್ಚಿಸುವ ಇದನ್ನು ಆಯುರ್ವೆದ ಔಷಧಿಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸುತ್ತಾರೆ.

ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಶುಂಟಿಯನ್ನು ನಾಗರ, ವಿಶ್ವೌಷಧ ವಿಶ್ವಭೇಷಜ. ಮಹೌಷಧ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಸಂಸ್ಕೃತದ ಈ ಹೆಸರುಗಳೇ ಸೂಚಿಸುವಂತೆ ಇದು ಒಂದು ಅಪೂರ್ವ ಔಷಧ ದ್ಯವ್ಯ, ಕಟು(ಖಾರ) ರಸವನ್ನು ಹೊಂದಿರುವ ಇದು ಜೀರ್ಣರಸದೊಂದಿಗೆ ಸೇರಿ ಪಚನವಾದಾಗ ಮಧುರ(ಸಿಹಿ)ಭಾವವನ್ನು ಪಡೆಯುವುದರಿಂದ ಇದು ಒಂದು ಶಕ್ತಿವರ್ಧಕವಾಗಿದೆ. ಗುಣದಲ್ಲಿ ಸ್ನಿಗ್ಧ ಮತ್ತು ಉಷ್ಣ ರ್ಯವುಳ್ಳದ್ದಾಗಿದ್ದು ಕಫ ಮತ್ತು ವಾತ ದೋಷಗಳನ್ನು ನಾಶ ಮಾಡುತ್ತದೆ.

ಶ್ವಾಸಕೋಶ, ಅರುಚಿ, ಪಾಂಡು(ರಕ್ತಹೀನತೆ), ಅತಿಸಾರ, ಜ್ವರ, ಕೆಮ್ಮು ಮುಂತಾದ ರೋಗಗಳಲ್ಲಿ ಉಪಯೋಗಿಸಲ್ಟಡುವ ಇದು ಒಂದು ಶ್ರೇಷ್ಠ ದೀಪನ ಹಾಗೂ ಪಾಚನ ಔಷಧವಾಗಿದೆ. ಇದಲ್ಲದೆ ಅಮವಾತ(ಕೀಲುನೋವು) ಗ್ರಹಣಿ, ಗುಲ್ಮ, ಹೃದ್ರೋಗ, ಅಮಾತಿಸಾರ ಮುಂತಾದ ಅನೇಕ ರೋಗಗಳಲ್ಲಿ ಶುಂಟಿ ಒಂದು ಉತ್ತಮ ಔಷಧಿ. ಹಸಿ ಶುಂಠಿಯನ್ನು ಅದ್ರಕ್ ಎಂದು ಕರೆಯುತ್ತಾರೆ. ಅಡುಗೆ ಮತ್ತು ಔಷಧಿಗಳಲ್ಲಿ ಒಣಶುಂಟಿ ಹಾಗೂ ಹಸಿ ಶುಂಠಿಗಳೆರಡೂ ಉಪಯೋಗಕ್ಕೆ ಬರುತ್ತವೆ.

ಅಮವಾತದಲ್ಲಿ ಉಪಯೋಗ: ವಾಯುವಿನಿಂದ ಕೈಕಾಲುಗಳ ಕೀಲುಗಳಲ್ಲಿ ಬಾವು ಮತ್ತು ನೋವುಗಳು ಇದ್ದರೆ ಅದಕ್ಕೆ ಅಮವಾತ ಅಥವಾ ವಾಯುನೋವು ಎನ್ನುತ್ತಾರೆ. ಇದು ದೇಹದಲ್ಲಿ ಜೀರ್ಣಶಕ್ತಿ ಕುಂದಿದಾಗ, ಉಂಟಾದ ಅಮದೋಷದಿಂದ ಬರುವ ರೋಗ, ಒಳ್ಳೆಯ ಪಚನಕಾರಿಯಾದ ಶುಂಟಿ ಈ ಅಮವಾತ ರೋಗಕ್ಕೆ ಒಂದು ದಿವ್ಯೌಷಧ.

ಹಸಿ ಶುಂಠಿಯನ್ನು ತೆಗೆದುಕೊಂಡು ಕುಟ್ಟಿ ರಸವನ್ನು ತೆಗೆದು ಒಂದು ಚಮಚ ರಸಕ್ಕೆ ಒಂದು ಚಮಚ ಜೇನುತುಪವಪ್ನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ತೆಗೆದುಕೊಂಡರೆ ಪಚನಶಕ್ತಿ ಹೆಚ್ಚಾಗಿ ಅಮದೋಷ ನಿವಾರಣೆಯಾಗಿ ಅಮವಾತ ಅಂದರೆ, ಕೀಲು ನೋವಿನಲ್ಲಿ ಉತ್ತಮ ಲಾಭ ಸಿಗುತ್ತದೆ. ಇದಲ್ಲದೆ ಶುಂಟಿ ರಸ ಮತ್ತು ಜೇನುತಪ್ಪಗಳನ್ನು ತೆಗೆದುಕೊಳ್ಳುವುದರಿಂದ ಶೀತ ನೆಗಡಿ ಅಜೀರ್ಣಗಳು ದೂರಾಗುತ್ತವೆ. ಸಕ್ಕರೆ ರೋಗವುಳ್ಳವರು ಜೇನುತುಪ್ಪಕ್ಕೆ ಬದಲಾಗಿ ಸೈಂಧವ ಲವಣವನ್ನು ಉಪಯೋಗಿಸಬಹುದು. ಒಣಶುಂಟಿ, ಅಮೃತಬಳ್ಳ ಮತ್ತು ಜೇಷ್ಠ ಮಧು ಇವುಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ವಿಧಿವತ್ತಾಗಿ ಕಷಾಯ ಮಾಡಿ. ಅಂದರೆ ಮೇಲ ಹೇಲೀರುವ ಮೂರು ಔಷಧಿಗಳ ಹದಿನಾರರಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ. ಅದರಲ್ಲಿ ಕಾಲುಭಾಗ ಉಳಿಯುವಂತೆ ಕಷಾಯ ಮಾಡಿಕೊಳ್ಳಬೇಕು. ಇದಕ್ಕೆ ಬೆಲ್ಲ ಅಥವಾ ಜೇನುತಪ್ಪ ಸೇರಿಸಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬರಿಯ ಹೊಟ್ಟೆಯಲ್ಲಿ ತೆಗೆದುಕೊಂಡು ಪಥ್ಯ ಮಾಡಿದರೆ ಅಮವಾತ ಗುಣವಾಗುತ್ತದೆ. ಇದು ಅಮವಾತಕ್ಕೆ ಸುಲಭ ಹಾಗೂ ಪರಿಣಾಮಕಾರಿ ಔಷಧವಾಗಿದೆ. ಇದಲ್ಲದೆ ಕೆಲವರು ಒಣಶುಂಟಿ ಚೂರ್ಣವನ್ನು ಜೇನುತುಪ್ಪದಲ್ಲಿ ಬೆರೆಸಿ ಸೇವಿಸಲು ಹೇಳುತ್ತಾರೆ. ಆಯುರ್ವೇದ ವೈದ್ಯರು, ನಾಗರಾಧಿಕ್ಷಾಥ, ನಾಗರಾದಿಚೂರ್ಣ ಮುಂತಾದ ಔಷಧಿಗಳನ್ನು ತಯಾರಿಸಿ ಅಮವಾತದಲ್ಲಿ ಉಪಯೋಗಿಸುತ್ತಾರೆ.

ಅಜೀರ್ಣ ಮತ್ತು ಅಮಾತಿಸಾರಗಳಲ್ಲಿ: ಅಜೀರ್ಣ ಮತ್ತು ಅಜೀರ್ಣದಿಂದ ಉಂಟಾಗುವ ಅತಿಸಾರದಲ್ಲಿ ೨೫೦ರಿಂದ ೩೦೦ ಮಿ. ಗ್ರಾಂ. ಒಣ ಶುಂಟಿ ಚೂರ್ಣವನ್ನು ಸಕ್ಕರೆ ಮತ್ತು ತುಪ್ಪ ಬೆರೆಸಿ ತೆಗೆದುಕೊಂಡರೆ ಒಳ್ಳೆಯ ಲಾಭ ಸಿಗುತ್ತದೆ.

ಶುಂಠಿಯ ಕ್ಷೀರಪಾಕ: ಒಂದು ಚಮಚ ಒಣಶುಂಟಿ ಪುಡಿಗೆ ಒಂದು ಲೋಟ ನೀರು, ಒಂದು ಲೋಟ ಹಾಲು ಕೂಡಿಸಿ ಚೆನ್ನಾಗಿ ಕಾಯಿಸಬೇಕು. ನೀರನ ಭಾಗವೆಲ್ಲಾ ಅವಿಯಾತಿ ಹೋಗಿ ಹಾಲು ಮಾತ್ರ ಉಳಿದಾಗ (ಒಂದು ಲೋಟ ಹಾಲು ಮಾತ್ರ ಉಳಿಯಬೇಕು)ನದನ್ನು ಒಲೆಯ ಮೇಲಿಂದ ತೆಗೆದು ಶೋಧಿಸಿಕೊಂಡು ಅದಕ್ಕೆ ಬೆಲ್ಲ ಅಥವಾ ಜೇನುತಪ್ಪುವನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ತೆಗೆದುಕೊಂಡರೆ ದೇಹದಲ್ಲಿ ಪಚನ ಶಕ್ತಿ ಹೆಚ್ಚಾಗುತ್ತದೆ. ಶೀಥ ಕೆಮ್ಮುಗಳು ಬಾಧಿಸುವುದಿಲ್ಲ. ಮಳೆಗಾಲಕ್ಕೆ ಇದು ಒಂದು ಉತ್ತಮ ಪಾನೀಯ, ಕೆಲವರಿಗೆ ಹಾಲು ಕುಡಿದರೆ ಜೀರ್ಣವಾಗುವುದಿಲ್ಲ. ಅಂತಹವರು ಮೇಲೆ ಹೇಳಿರುವ ಕ್ಷೀರ ಪಾಕ ಮಾಡಿ ತೆಗೆದುಕೊಳ್ಳಬಹುದು.

ಮಕ್ಕಳ ಶೀತಕ್ಕೆ: ಮಕ್ಕಳಿಗೆ ನೆಗಡಿ ಶೀತವಾಗಿ ಜ್ವರ ಬಂದು, ಮೂಗು ಕಟ್ಟಿ, ಉಸಿರಾಡಲು ತೊಂದರೆಯಾದಾಗ ೩-೬ ಹನಿ ಹಸಿ ಶುಂಠಿ ರಸ ಒಂದು ಚಮಚ ಜೇನುತಪ್ಪ ಮತ್ತು ೨-೩ ಹನಿ ತುಳಸಿ ರಸ ಸೇರಿಸಿಕೊಟ್ಟರೆ ಬಹು ಬೇಗ ಶೀತ ನೆಗಡಿಗಳನ್ನು ಕಡಿಮೆಯಾಗಿ ಮಗುವಿಗೆ ಆರಾಮವೆನಿಸುತ್ತದೆ.

ದೇಹದ ತೂಕ ಕಡಿಮೆ ಮಾಡಲು: ಒಂದು ದೊಡ್ಡ ಲೋಟ ಕಡೆದ ಮಜ್ಜಿಗೆಗೆ ಎರಡು ಚಮಚ ಹಸಿ ಶುಂಠಿ ರಸ ಮತ್ತು ಸ್ವಲ್ಪ ಸೈಂಧವ ಲವಣವನ್ನು ನೀರಿನಲ್ಲಿ ಪ್ರತಿ ದಿನ ತೆಗೆದುಕೊಂಡು ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳನ್ನು ಬಿಟ್ಟು ಪಥ್ಯ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಇದಲ್ಲದೆ ಪಚನ ಶಕ್ತಿ ಹೆಚ್ಚಾಗುತ್ತದೆ. ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಣೆಯಾಗುತ್ತದೆ. ಶುಂಠಿಯನ್ನು ಪ್ರತಿ ದಿನ ಊಟದಲ್ಲಿ ಸಾಕಷ್ಟು ಬಳಸಿದರೆ, ಅದು ಊಟಕ್ಕೆ ರುಚಿಯನ್ನು ಕೊಡುವುದೇ ಅಲ್ಲದೆ, ಪಚನ ಕ್ರಿಯೆಯನ್ನು ವೃದ್ಧಿಗೊಳಿಸಿ, ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ದೇಹಕ್ಕೆ ಪೋಷಣೆ ಕೊಟ್ಟು ಆರೋಗ್ಯವನ್ನು ಕಾಪಾಡುತ್ತದೆ.

ಎಷ್ಟು ಸಮಯ ಈ ಮುನಿಸು?

ಉದಯವಾಣಿ, ಮಹಿಳಾ ಸಂಪದ, ಶುಕ್ರವಾರ ೩-೯-೨೦೧೦

ಎಷ್ಟು ಸಮಯ ಈ ಮುನಿಸು?

ಪ್ರೀತಿಯ
ನನಗೆ ನಿಜವಾಗ್ಲೂ ಆಶ್ಚರ್ಯವಾಗುತ್ತಿದೆ. ನೀನು ಯಾಕೆ ಹೀಗೆ ಬದಲಾಗಿದ್ದಿ ಎಂಬ ಒಂದು ಪ್ರಶ್ನೆಗೆ ಉತ್ತರ ಸಿಗದೆ ಮನಸ್ಸು ತಳಮಳಗೊಂಡಿದೆ. ಕೆಲವು ವರ್ಷಗಳಿಮದ ಜತೆಯಾಗಿಯೇ ಸುತ್ತಾಡುತ್ತಿದ್ದ ಅವಳಿ ಸೋದರರಂತಿದ್ದ ನಾವು ಇಂದು ಮುಖವೊಡ್ಡಿ ಮಾತಾಡದೆ ಸ್ಥಿತಿ ಬರಲು ಏನು ಕಾರಣ?

ನನ್ನ ಆತ್ಮಸಾಕ್ಷಿ ಪ್ರಕಾರ ಹೇಳುವುದಾದರೆ ನಾನೇನೂ ತಪ್ಪು ಮಾಡಿಲ್ಲ. ಆದರೆ ನೀನು ನನ್ನಲ್ಲಿ ಏನೊ ತಪ್ಪು ಕಂಡಿದ್ದಿ. ಅದೇನೆಂದು ಕೆಲವು ಸಲ ಕೇಳಿದರೂ ನೀನು ಉತ್ತರಿಸಲು ಮನಸ್ಸು ಮಾಡಿಲ್ಲ. ನನ್ನ ಗೆಳೆತನ ಸಾಕಾದರೆ ಹೇಳು, ಜತೆಯಾಗಿಯೇ ಒಂದು ಗ್ಲಾಸ್ ಜ್ಯೂಸನ್ನು ಫಿಪ್ಟಿ ಫಿಪ್ಟಿ ಮಾಡಿ ಕುಡಿದು ಮಾತು ಕಡಿಮೆ ಮಾಡೋಣ. ನಿನ್ನೆ ಸಮಾಧಾನಕ್ಕೆ ಅದು ಅನಿವಾರ್ಯವಾದರೆ ನಾನು ಅದಕ್ಕೂ ಸಿದ್ದ. ಆದರೆ ನೀನು ಏಕಾ‌ಏಕಿ ಮೌನವಾದೆಯಲ್ಲಾ, ಅದು ಯಾಕೆ?

ಒಂದು ಫಂಕ್ಷನ್‌ಗೆ ಹೋಗುವುದೋ, ಶಾಪಿಂಗ್‌ಗೆ ಹೋಗುವುದೋ, ಹೊಟೇಲ್‌ಗೆ ಹೋಗುವುದೋ.. ಹೀಗೆ ಎಲ್ಲದರಲ್ಲೂ ನಾವು ಜತೆಯಾಗಿಯೇ ಇರುತ್ತಿದ್ದೆವಲ್ಲಾ. ನಿನ್ನ ಬಗ್ಗೆ ಏನಾದರೂ ತಿಳಿಯಬೇಕಿದ್ದರೆ ಸಹೋದ್ಯೋಗಿಗಳು ಮೊದಲು ಕೇಳುವುದೇ ನನ್ನಲ್ಲಾಗಿತ್ತು. ಈಗ ಯಾರಾದರೂ ಹಾಗೆ ಕೇಳಿದರೆ ನಾನು ಏನೆಂದು ಉತ್ತರಿಸಲಿ? ನಾವಿಬ್ಬರು ಸಿಟ್ಟುಮಾಡಿಕೊಂಡು ಮಾತು ಬಿಟ್ಟಿದ್ದೇವೆ ಎನ್ನಲೇ? ಹೇಳು, ನೀನೇ ಉತ್ತರ ಹೇಳು.

ನೀನು ಏಕಾ‌ಏಕಿ ಮೌನಿಯಾಗುವುದು ಇದೇನು ಹೊಸತಲ್ಲ. ಆದರೆ ನನ್ನಲ್ಲಿ ಮಾತು ಬಿಟ್ಟದ್ದು ಇದೇ ಮೊದಲು. ಮಾತು ಬಿಡುವುದು, ಕೋಪಿಸುವುದು.. ಇತ್ಯಾದಿ ನಮ್ಮಂಥವರಿಗೆ ಹೇಳಿದ್ದೇ? ಅದು ಅನಾಗರಿಕತೆ ಎಂದು ಭಾವಿಸಿದವ ನಾನು. ಅಪ್ತ ಸಂಬಂಧ ಬೇಡವಾದರೂ ಮುಖಮುಖ ನೋಡುವಾಗ ಒಂದುನಗು ಸೂಸಲು ಏನಾಗಬೇಕು ಹೇಳು. ಅದರಲ್ಲಿ ನೀನು ಕಳಕೊಳ್ಳುವುದಾದರೂ ಏನು?

ಕೋಪ ಮಾಡಿಕೊಳ್ಳುವುದು ಹೆಂಗಸರ ಕೆಲಸ, ಅವಿದ್ಯಾವಂತರ ಲಕ್ಷಣ ಎಂದೆಲ್ಲಾ ಭಾವಿಸಿದ್ದ ನಾನು, ಈಗ ಅದರ ಬಗ್ಗೆ ಮರಚುಚಿಂತನೆ ಮಾಡಬೇಕಾದ ಕಾಲ ಸನ್ನಿಹಿತವಾದಂತಿದೆ. ಅದಕ್ಕೆ ವೇದಿಕೆ ಒದಗಿಸಿಕೊಟ್ಟವನು ನೀನೇ. ಮೌನದಿಂದ ನೆಮ್ಮದಿ ಸಿಕ್ಕೋಲ್ಲ, ಸಮಸ್ಯೆ ಬಗೆಹರಿಯೋಲ್ಲ, ಆಫ್ತ ವಲಯ ಎಲ್ಲರಿಗೂ ಅಗತ್ಯ. ಆ ವಲಯದೊಂದಿಗೆ ನಗುತ್ತಾ ನಾಲ್ಕು ಮಾತಾಡಿದಾಗ ಮನಸ್ಸಿನ ಭಾರ ಇಳಿಯುತ್ತದೆ.

ಗೆಳೆಯಾ, ನೀನು ನನ್ನಲ್ಲಿ ಹೇಗೂ ಕೋಪಿಸಿಕೊಂಡಿದ್ದೀ. ಆದರೂ ನಾನು ನಿನ್ನಲ್ಲಿ ಕೋಪಿಸಿಕೊಂಡಿಲ್ಲ. ಯಾಕೆಂದರೆ ನಿನ್ನ ಬಗ್ಗೆ ನಾನು ಇದುವರೆಗೆ ಸಾಕಷ್ಟು ತಿಳಿದುಕೊಂಡಿದ್ದೇನೆ. ನಿನ್ನ ಮನಸ್ಸನ್ನು ಓದುವುದೂ ನನಗೆ ಸಾಧ್ಯವಾಗಿದೆ. ಈ ಓದಿನಲ್ಲಿ ಸಿಕ್ಕಿರುವ ಒಂದು ವಿಷಯವನ್ನು ನಿನಗೆ ಈ ಹೊತ್ತಿನಲ್ಲಿ ನಾನು ಹೇಳಬಹುಸತ್ತೆನೆ. ಸಂಕುಚಿತ ಮನಸ್ಸು ಸಂಶಯ ಪ್ರವೃತ್ತಿ ಯಾವತ್ತೂ ಒಳ್ಳೆಯದಲ್ಲ.

ಇದು ನಮಗೆ ಹಾನಿ ಮಾಡುವುದೇ ಹೆಚ್ಚು. ಒಂದು ವಿಷಯದ ಬಗ್ಗೆ ನಿರ್ದಾರ ಕೈಗೊಳ್ಳುವ ಮೊದಲು, ಇತರರ ಬಗ್ಗೆ ಸಂಶಯಿಸಲು ಆರಂಭಿಸುವ ಮೊದಲು ತುಂಬ ಚಿಂತಿಸಬೇಕು. ಒಂದು ಗಟ್ಟಿ ಸಾಕ್ಷ ಸಿಗದ ಹೊರತು ಹತ್ತಿರವಿದ್ದವರನ್ನು, ಆತ್ಮೀಯರನ್ನು ದೂರು ಮಾಡುವುದು ಒಳ್ಳೆಯದಲ್ಲ. ಆದರಲ್ಲೂ ಸಣ್ಣಪುಟ್ಟ ಕಾರಣಗಳಿಗಾಗಿ ದೀರ್ಘ ಕಾಲದ ಗೆಳೆತನವನ್ನು ಮುರಿಯುವುದು ಸರ್ವಥಾ ಸರಿಯಲ್ಲ. ಪರಸ್ಪರ ಹೊಂದಾನಿಕೆಯೂ ಬೇಕು. ಕ್ಷಮಿಸುವ ಗುಣವೂ ಬೇಕು. ವಿಶ್ವಾಸವಿಲ್ಲದಿದ್ದರೆ ಸ್ನೇಹ ಉಳಿಯುವುದಾದರೂ ಹೇಗೆ?

ಸಂಶಯ ಪ್ರವೃತ್ತಿಯೇ ನಿನಗೆ ಕೇಡು ಬಗೆಯುತ್ತಿದ.ಎ ನಿನ್ನ ವ್ಯಕ್ತಿತ್ವವನ್ನು ವಿರೂಪಗೊಳಿಸುತ್ತಿದೆ. ಜೊತೆಗೆ ಅತಿಯಾದ ಸಿಡುಕುತನವೂ ನಿನಗೆ ಹಾನಿ ಮಾಡುತ್ತಿದೆ. ಆಫ್ತನಾಗಿ, ಹಿತೈಷಿಯಾಗಿರುವ ಯಾರಾದರೂ ಹೇಳುವ ಮಾತನ್ನೂ ಸಂಶಯದಿಂದ ನೋಡುವುದನ್ನು ಬಿಟ್ಟು ಬಿಡು ಗೆಳೆಯಾ. ನಿನಗೆ ಯಾರಾದರೂ ಒಬ್ಬ ಹೊಸ ಗೆಳೆಯ ಸಿಕ್ಕಿದರೆ ನಿನ್ನಲ್ಲಿ ಈಗ ಇರುವ ಕೆಲವು ಹುಳುಕುಗಳನ್ನು ಬಿಟ್ಟು ಅವನೊಂದಿಗೆ ಸ್ನೇಹ ಬೆಳೆಸು, ಬೆಳೆಸಿದ ಸ್ನೇಹವನ್ನು ದೀರ್ಘಕಾಲ ಉಳಿಸು ಎಂದು ನಿನ್ನ ಓರ್ವ ಆಫ್ತನಾಗಿ ಹೇಳುತ್ತಿದ್ದೆನೆ. ನಾನು ನಿನಗೆ ಆಫ್ತನಲ್ಲದಿದ್ದರೂ, ನನ್ನ ಮನಸ್ಸಲ್ಲಿ ಈಗಲೂ ನಿನಗೆ ಆಫ್ತನ ಸ್ಥಾನಮಾನ ಇದ್ದೇ ಇದೆ. ಆದ್ದರಿಂದಲೇ ಈ ಮಾತು.

ಒಂದೇ ಕಚೇರಿಯಲ್ಲಿ ದುಡಿಯುವ ನಾವೂ ಈ ರೀತಿ ಮುಖ ಗಂಟಿಕ್ಕಿಕೊಳ್ಲುವ ಅಗತ್ಯವಾದರೂ ಏನಿದೆ ಹೇಳು? ಸಾಮಾನ್ಯವಾಗಿ ಅವಿದ್ಯಾವಂತರಲ್ಲಿ, ಯುವತಿಯರಲ್ಲಿ ಕಾಣ ಸಿಗುವ ಇಂಥ ವರ್ತನೆ ನಿನ್ನಲ್ಲಿ ಯಾಕೆ ಬೆಳೆಯುತ್ತಿದೆ ಎಂಬುದೇ ಗೊತ್ತಾಗುತ್ತಿಲ್ಲ. ನಾವು ಪರಸ್ಪರ ಆಫ್ತರಾಗಿದ್ದುದರಿಂದ ಕಳಕೊಂಡುದಾದರೂ ಏನು? ಈಗ ಕೋಪಿಸಿ ಮಾತು ಬಿಟ್ಟ ಬಳಿಕ ನಿನಗೆ ಸಿಕ್ಕಿರುವ ಲಾಭವಾದರೂ ಏನು? ನೀನು ಕೋಪಿಸಿಕೊಂಡಿರುವ ಕಾರಣವಾದರೂ ಯಾವುದು? ಆ ಕಾರಣದಲ್ಲಿರುವ ನಿಜಾಂಶದ ಪ್ರಮಾಣವಾದರೂ ಎಷ್ಟಿದೆ.. ಇತ್ಯಾದಿಗಳ ಬಗ್ಗೆ ನೀನು ಒಮ್ಮೆ ಚಿಂತಿಸಿ ನೋಡು.

ಆಡ್ವಾಣಿ ಮತ್ತು ವಾಜಪೇಯಿ ಅವರ ಸ್ನೇಹ ಸುಮಾರು ಆರೇಳು ದಶಕದ್ದು ಎಂದು ಹೇಳಲಾಗುತ್ತಿದ.ಎ ಅವರು ರಾಜಕೀಯದಲ್ಲಿ ಆ ಗೆಳೆತವನ್ನು ಅದೂ ಕೂಡ ಒಂದೇ ಪಕ್ಷದಲ್ಲಿಕೊಂಡು ಉಳಿಸಿಕೊಂಡು ಬರುವುದು ಸಾಧ್ಯವಾಗಿದ್ದರೆ, ಯಾವುದೇ ಅಧಿಕರ ಲಾಭವಿಲ್ಲದೆ, ಅಂಥ ನಿರೀಕ್ಷೆಯೂ ಇರದ ನಮಗೆ ಕೇವಲ ಒಂದು ಶುದ್ಧಸ್ನೇಹವನ್ನು ಯಾಕೆ ಉಳಿಸಿಕೊಂಡು ಹೋಗಲಾತುತ್ತಿಲ್ಲ ಎಂಬ ಪ್ರಶ್ನೆಗೆ ತ್ಠ್ತುರ ಸಿಕ್ಕೀತೇ ಗೆಳೆಯಾ?

ಮನೆಯ ಸಮಸ್ಯೆಯಿರಬಹುದು, ಕೆಲಸದ ಒತ್ತಡರವಿರಬಹುದು. ಹಾಗೆಂದು ಮಾತು ಬಿಟ್ಟು ಏಕಾಂಗಿಯಾಗಿ ಮೌನಿಯಾದ ಮಾತ್ರಕ್ಕೆ ನಿನಗೆ ಆಯೆಲ್ಲಾ ಸಮಸ್ಯೆಗಳಿಂದ ಮುಕ್ತಿ ಸಿಕ್ಕೀತೆ? ಒಂದೊಮ್ಮೆ ಸಿಕ್ಕಿದ್ದರೆ ನಾನು ಪ್ರೀತಿಯಿಂದ ನಿನ್ನ ಈ ವರ್ತನೆಯನ್ನು ಸ್ವಾಗತಿಸುತ್ತೆನೆ.

ಹಿರಿಯ ಒಂದು ಮಾತಿದೆ ಗೆಳೆಯಾ. ಚೆಲ್ಲುವುದನ್ನೂ ಅಳೆದು ಚೆಲ್ಲಬೇಕು ಎಂದು. ಹಾಗೆ ನೀನು ಕೋಪಿಸುವ ಮೊದಲು ಅದಕ್ಕೆ ಕಾರಣವಾದ ಘಟನೆಯ ಬಗ್ಗೆ ಒಂದು ಮಾತು ಹೇಳಿದ್ದರೆ ಚೆನ್ನಿತ್ತು. ಅಂಥ ಒಂದು ಕೊನೆ ಮಾತು ಹೇಳಿದ್ದರೆ ನೀನು ಕೋಪಿಸುವ ಅಗತ್ಯವೇ ಇರುತ್ತಿರಲಿಲ್ಲ. ಆದ್ದರಿಂದಲೆ ಹೇಳುತ್ತೇನೆ-ಸಂಶಯ ಸ್ವಭಾವ ಬಿಡು, ಮುಕ್ತವಾಗಿ ಮಾತಾಡು. ದೇವರು ನಮಗೆ ಮಾತಿನ ಶಕ್ತಿ ಕೊಟ್ಟದ್ದೇ ಅಭಿಪ್ರಾಯ ಹಂಚಿಕೊಳ್ಳುವುದಕ್ಕಲ್ಲಾ? ಅದನ್ನು ಬಳಸದಿದ್ದರೆ ಅದಿದ್ದು ಏನು ಪ್ರಯೋಜನ ಹೇಳು?

ಮಾತಿಗೆ ಸಿಕ್ಕದ ನಿನಗೆ ಇದೊಂದು ಪತ್ರದ ರೂಪದಲ್ಲಿ ನಾಲ್ಕು ಮಾತು ಹೇಳಿದ್ದೇನೆ. ಓದಿ ನಿನ್ನಲ್ಲಿ ಏನಾದರೂ ಬದಲಾವಣೆಯಾದರೆ ನನಗೆ ಖುಷಿಯಾದೀತು. ಅದಿಲ್ಲ, ನಿನ್ನದೇ ಸರಿ ಎಂದು ವಾದಿಸುವುದಾದರೆ ನಾನು ಏನೂ ಮಾಡಲಾಗದ ಅಸಹಾಯಕ.

ನನ್ನೊಂದಿಗೆ ಮಾತು ಬಿಟ್ಟುದಕ್ಕೆ ನನಗೆ ಬೇಸರವಾಗಿಲ್ಲ. ಅದರಿಂದ ನಿನಗೆ ನೆಮ್ಮದಿ ಸಿಗುವುದಾದರೆ ನನಗೆ ಅದರಲ್ಲಿ ಖುಷಿಯೇ. ಆದರೆ ನನ್ನಲ್ಲಿ ತೋರಿಸಿದ ಇಂಥ ವರ್ತನೆಯನ್ನು ಬೇರೊಬ್ಬ ಗೆಳೆಯನಲ್ಲಿ ತೋರಿಸಬೇಡ ಎಂದು ಹೇಳುತ್ತಾ ಈ ಪುಟ್ಟ ಪತ್ರಬರಹಕ್ಕೆ ಪೂರ್ಣವಿರಾಮ ಹಾಕುತ್ತೇನೆ.
-ಪದ್ಮಾ

ಬೊಳುವಾರು ದಾರಿಯಲ್ಲೊಂದು ಇಣುಕು...

ಬಿ.ಎಂ.ಬಶೀರ್

ಬೊಳುವಾರು!
ಅದು ಎಂಬತ್ತರ ದಶಕದ ದಿನಗಳು.

ಪುತ್ತೂರು, ಉಪ್ಪಿನಂಗಡಿ ಆಸುಪಾಸಿನಲ್ಲಿ ಮಾತ್ರವಲ್ಲ, ದಕ್ಷಿಣ ಕನ್ನಡಾದ್ಯಂತ ಬೊಳುವಾರು ಎನ್ನುವ ಪುಟ್ಟ ಊರಿನ ಕುಖ್ಯಾತಿ ಹರಡಿತ್ತು. ದಕ್ಷಿಣಕನ್ನಡದ ಸಂಘಪರಿವಾರದ ಬೀಜ ಮೊಳಕೆ ಯೊಡೆದು ಹಬ್ಬಿದ್ದು ಇದೇ ಬೊಳುವಾರಿನಲ್ಲಿ. ಪುತ್ತೂರು ಆಗ ಸಂಪೂರ್ಣ ಬಿಜೆಪಿ ಮತ್ತು ಆರೆಸ್ಸೆಸ್ ಕೈ ವಶವಾಗಿತ್ತು. ಉರಿಮಜಲು ರಾಮಭಟ್ಟರು ಪುತ್ತೂರಿನ ಶಾಸಕರಾಗಿದ್ದ ಕಾಲ ಅದು. ಬೊಳುವಾರಿನ ಸಂಘಪರಿವಾರದ ಹುಡು ಗರ ‘ಗ್ಯಾಂಗ್‌ವಾರ್’ಗಳು ಸುತ್ತಲಿನ ಪರಿಸರದಲ್ಲಿ ಕುಖ್ಯಾತಿಯನ್ನು ಪಡೆದಿದ್ದವು.

ಉಪ್ಪಿನಂಗಡಿ ಆಸುಪಾಸಿನ ಮುಸ್ಲಿಮರು ಪುತ್ತೂರಿಗೆ ಕಾಲಿಡಲು ಅಂಜುತ್ತಿದ ದಿನಗಳದು. ಇಂತಹ ಸಂದರ್ಭದಲ್ಲೇ ಮುತ್ತಪ್ಪ ರೈ ಮತ್ತು ಆತನ ಹುಡುಗರ ಪ್ರವೇಶ ವಾಯಿತು. ವಿನಯಕುಮಾರ್ ಸೊರಕೆ ಎಂಬ ಯುವ ತರುಣ ರಾಜಕೀಯಕ್ಕೆ ಕಾಲಿಟ್ಟರು. ಉರಿಮಜಲು ರಾಮಭಟ್ಟರಿಂದ ಪುತ್ತೂರು ತಾಲೂಕಿನ ಜನ ಅದೆಷ್ಟು ಬೇಸತ್ತು ಹೋಗಿದ್ದ ರೆಂದರೆ, ಸೊರಕೆ ಹೆಸರು ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಂಚಿನ ಸಂಚಾರವನ್ನೇ ಮಾಡಿತು. ಆ ಚುನಾವಣೆಯಲ್ಲಿ ಭಾರೀ ಬಹು ಮತದಿಂದ ವಿನಯಕುಮಾರ್ ಎನ್ನುವ ಅಮುಲ್ ಬೇಬಿ ಆಯ್ಕೆಯಾದರು. ಈ ಗೆಲುವು ಪುತ್ತೂರಿನ ಮೇಲೆ ಅದೆಷ್ಟು ಪರಿಣಾಮ ಬೀರಿ ತೆಂದರೆ, ನಿಧಾನಕ್ಕೆ ಕೋಮುಗಲಭೆ, ಗ್ಯಾಂಗ್ ವಾರ್‌ಗಳ ಸದ್ದಡಗಿತು. ಆರೆಸ್ಸೆಸ್‌ನ ಅಧಿನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರ ಬಾವ ಉರಿಮಜಲು ರಾಮಭಟ್ಟರು ಶಾಶ್ವತ ಮೂಲೆ ಸೇರಿದರು. ನಿಧಾನಕ್ಕೆ ‘ಬೊಳವಾರ’ನ್ನು ಜನ ಮರೆಯತೊಡಗಿ ದರು.

ಇದೇ ಹೊತ್ತಲ್ಲಿ, ಇನ್ನೊಂದು ಭಿನ್ನ ಕಾರಣಕ್ಕಾಗಿ ಬೊಳುವಾರು ನನ್ನಲ್ಲಿ ಕುತೂಹಲವನ್ನು ಹುಟ್ಟಿ ಸಿತ್ತು. ಅಪರೂಪಕ್ಕೆಂದು ಪುತ್ತೂರು ಬಸ್ಸು ಹತ್ತಿದರೆ, ಇನ್ನೇನು ಪುತ್ತೂರು ತಲು ಪಬೇಕು ಎನ್ನುವಷ್ಟರಲ್ಲಿ ಕಂಡಕ್ಟರ್ “ಯಾರ್ರೀ... ಬೊಳುವಾರು...ಇಳೀರಿ...” ಎನ್ನುತ್ತಿದ್ದ. ನಾನು ತಡೆಯ ಲಾರದ ಕುತೂಹಲ ದಿಂದ, ಕಿಟಕಿಯ ಮೂಲಕ ಬೊಳುವಾರನ್ನು ನೋಡಲೆಂದು ಇಣುಕು ತ್ತಿದ್ದೆ. ಯಾರೋ ನನ್ನ ಪರಿಚಿತರನ್ನು ಹುಡುಕು ವವನಂತೆ ಕಣ್ಣಾಡಿಸು ತ್ತಿದ್ದೆ. ಅಲ್ಲೇ ಎಲ್ಲೋ ಮುತ್ತುಪ್ಪಾಡಿ ಎನ್ನುವ ಹಳ್ಳಿ ಇರಬೇಕೆಂದು...ಜನ್ನತ್ ಕತೆಯಲ್ಲಿ ಬರುವ ಮೂಸಾ ಮುಸ್ಲಿಯಾರರು ಅಲ್ಲೇ ಎಲ್ಲೋ ಬಸ್‌ಗಾಗಿ ಕಾಯುತ್ತಿರಬಹುದೆಂದು...ಅಥವಾ ಆ ರಿಕ್ಷಾ ಸ್ಟಾಂಡ್‌ನಲ್ಲಿ ಕಾಯುತ್ತಿರುವ ಹಲವು ಗಡ್ಡಧಾರಿಗಳಲ್ಲಿ ಒಬ್ಬರು ಬೊಳುವಾರು ಮುಹಮ್ಮದ್ ಕುಂಞಿ ಎನ್ನುವ ನನ್ನ ಮೆಚ್ಚಿನ ಕತೆಗಾರರಾಗಿರಬಹುದೆಂದು ನನಗೆ ನಾನೇ ಕಲ್ಪಿಸಿಕೊಳ್ಳುತ್ತಿದ್ದೆ. ಕಂಡಕ್ಟರ್ ‘ರೈಟ್’ ಎಂದು ಹೇಳುವವರೆಗೂ ಆ ಬೊಳುವಾರನ್ನು ಅದೇನೋ ಅದ್ಭುತವನ್ನು ನೋಡುವಂತೆ ನೋಡುತ್ತಿದ್ದೆ. ಯಾರೋ ಕೆತ್ತಿಟ್ಟ ಚಿತ್ರದಂತೆ ಒಂದು ಕಾಲ್ಪನಿಕ ಬೊಳುವಾರು ನನ್ನಲ್ಲಿ ಗಟ್ಟಿಯಾಗಿ ನಿಂತಿತ್ತು.

ಬೊಳುವಾರಿನ ಹುಡುಗರ ‘ಗ್ಯಾಂಗ್‌ವಾರ್’ನ ಕಾಲದಲ್ಲೇ ಬೊಳುವಾರು ಮುಹಮ್ಮದ್ ಕುಂಞಿ ಯವರ ಕತೆಗಳು ತರಂಗ, ಉದಯವಾಣಿ ಯಲ್ಲಿ ಪ್ರಕಟವಾಗಲಾ ರಂಭಿಸಿದವು. ಆಗ ನಾನು ಬಹುಶಃ ಎಂಟನೆ ತರಗತಿಯಲ್ಲಿ ದ್ದಿರಬೇಕು. ಮನೆಗೆ ಅಣ್ಣ ತರಂಗ ತರುತ್ತಿದ್ದ. ಬಳಿಕ ಗೊತ್ತಾಯಿತು. ಅವನು ತರಂಗ ತರುತ್ತಿದ್ದದ್ದೇ ಅದರಲ್ಲಿರುವ ‘ಜಿಹಾದ್’ ಧಾರಾ ವಾಹಿಯನ್ನು ಓದುವು ದಕ್ಕಾಗಿ. ಬೊಳುವಾರರ ಕತೆಗಳನ್ನು, ಕಾದಂಬರಿ ಯನ್ನು ಓದುತ್ತಿದ್ದ ಹಾಗೆ ನನಗೊಂದು ಅಚ್ಚರಿ. ಅರೆ...ಇಲ್ಲಿರುವ ಹೆಸರುಗಳೆಲ್ಲ ನಮ್ಮದೇ. ಮೂಸಾ ಮುಸ್ಲಿಯಾರ್, ಖೈಜಮ್ಮ, ಸುಲೇಮಾನ್ ಹಾಜಿ, ಮುತ್ತುಪ್ಪಾಡಿ...ಇವನ್ನೆಲ್ಲ ಕತೆ ಮಾಡ್ಲಿಕ್ಕೆ ಆಗ್ತದಾ...! ಎಲ್ಲಕ್ಕಿಂತ ಅವರು ಬಳಸುವ ಕನ್ನಡ ಭಾಷೆ. ನಾವು ಬ್ಯಾರಿ ಭಾಷೆ ಮಾತನಾಡಿ ದಂತೆಯೇ ಕೇಳುತ್ತದೆ. ನನ್ನ ಸುತ್ತಮುತ್ತ ನಾನು ಕಾಣುತ್ತಿರುವ, ಹೆಚ್ಚೇಕೆ ನನ್ನ ಮನೆಯೊಳಗಿನ ಮಾತುಕತೆಗಳೆಲ್ಲ ಅವರ ಕತೆ ಯೊಳಗೆ ಸೇರಿತ್ತು. ಅಣ್ಣನಂತೂ ಬೊಳುವಾರಿನ ಕತೆಗಳ ಮೋಡಿಗೆ ಸಿಲುಕಿ ಸಂಪೂರ್ಣ ಕಳೆದು ಹೋದದ್ದನ್ನು, ನಾನೂ ಬಾಲ್ಯದಲ್ಲಿ ತಂದೆ ತಾಯಿಗಳ ಪಾಲಿಗೆ ‘ದಾರಿತಪ್ಪಿ’ದ್ದನ್ನು ಈಗ ನೆನೆದರೆ ನಗು, ನಿಟ್ಟುಸಿರು!

ಜಿಹಾದ್ ಕಾದಂಬರಿ ಪುಸ್ತಕವಾಗಿ ಬಂದಾಗ ಅಣ್ಣ ಅದರ ಪ್ರತಿಯನ್ನು ತಂದಿದ್ದ. ಬಹುಶಃ ಆ ಕಾದಂಬರಿಯನ್ನು ಅವನು ತನಗೆ ತಾನೇ ಆವಾ ಹಿಸಿಕೊಂಡಿದ್ದನೇನೋ ಅನ್ನಿಸು ತ್ತದೆ. ಅದಕ್ಕೊಂದು ಕಾರಣ ವಿತ್ತು. ಅದರಲ್ಲಿ ಬರುವ ಕತಾ ನಾಯಕನ ಪಾತ್ರದ ಹೆಸರೂ, ಇವನ ಹೆಸರೂ ಒಂದೇ ಆಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಆ ಕಾದಂಬರಿಯಲ್ಲಿ ಬರುವ ಕ್ರಿಶ್ಚಿಯನ್ ಹೆಣ್ಣು ಪಾತ್ರಗಳಾದ ಸಲೀನಾ, ರೋಸಿಯಂತಹ ಒಳ್ಳೆಯ ಕ್ರಿಶ್ಚಿಯನ್ ಸ್ನೇಹಿತೆಯರು ಅವನಿಗೂ ಸ್ಕೂಲಲ್ಲಿದ್ದರು. ಅವನಾಗ ಪಿಯುಸಿ ಕಲಿಯುತ್ತಿದ್ದ. ಕಾಲೇಜಲ್ಲಿ ಅವನೊಂದು ಕೈಬರಹ ಪತ್ರಿಕೆ ಯನ್ನು ಸಂಪಾದಿಸುತ್ತಿದ್ದ (ಅವನೇ ಅದರ ಕಲಾವಿದನೂ ಆಗಿದ್ದ). ‘ಸ್ಪಂದನ’ ಅದರ ಹೆಸರು.

ಅದರಲ್ಲಿ ಏನೇನೋ ಬರೆದು ಯಾರ‍್ಯಾರದೋ ನಿಷ್ಠುರ ಕಟ್ಟಿಕೊಂಡು, ಮೇಷ್ಟ್ರ ಕೈಯಲ್ಲಿ ಬೆನ್ನು ತಟ್ಟಿಸಿಕೊಂಡು ತನ್ನದೇ ಒಂದು ಬಳಗದ ಜೊತೆಗೆ ಓಡಾಡುತ್ತಿದ್ದ. ಅಲ್ಲೆಲ್ಲಾ ನಾನು ಬೊಳುವಾರು ಮುಹಮ್ಮದ್ ಕುಂಞಿ ‘ಫಿತ್ನ’ಗಳನ್ನು ಕಾಣು ತ್ತಿದ್ದೆ. ತನ್ನ ಪಿಯುಸಿ ಕಾಲದಲ್ಲಿ ಬೊಳುವಾರರ ತರಹ ಕತೆ ಗಳನ್ನು ಬರೆಯಲು ಪ್ರಯತ್ನಿಸು ತ್ತಿದ್ದ. ಆದರೆ ಬಳಿಕ, ಬೊಳು ವಾರು, ಫಕೀರರ ಪ್ರಭಾವ ದಿಂದ ಸಂಪೂರ್ಣ ಹೊರ ಬಂದು ಅವನದೇ ಭಾಷೆ, ಶೈಲಿ, ಸ್ವಂತಿಕೆಯುಳ್ಳ ಕೆಲವೇ ಕೆಲವು ಕತೆಗಳನ್ನು ಬರೆದು ಹೊರಟು ಹೋದ ಎನ್ನುವುದು ಬೇರೆ ವಿಷಯ. ಆದರೆ ನಾನು ಬೊಳು ವಾರರ ಕತೆಗಳಿಗೆ ಹತ್ತಿರವಾಗು ವುದಕ್ಕೆ ಅಣ್ಣನೇ ಕಾರಣ. ಅವನ ಪುಸ್ತಕಗಳ ಕಾಪಾಟು ನನ್ನ ಪಾಲಿಗೆ ಆಗ ಚಂದಮಾಮ ಕತೆಗಳಲ್ಲಿ ಬರುವ ಅಮೂಲ್ಯ ವಜ್ರ ವೈಢೂರ‍್ಯಗಳಿರುವ ತಿಜೋರಿ ಯಾಗಿತ್ತು. ಅದನ್ನು ಯಾವಾಗಲೂ ಅಣ್ಣ ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದ.

ಒಂದು ರೀತಿಯಲ್ಲಿ ಬೊಳುವಾರು ನನ್ನಲ್ಲಿ ಮಾತ್ರವಲ್ಲ, ನನ್ನ ಮನೆಯೊಳಗೇ ಒಂದು ಅರಾಜಕತೆಯನ್ನು ಸೃಷ್ಟಿ ಮಾಡಿ ಹಾಕಿದರೋ ಅನ್ನಿಸುತ್ತದೆ. ಅಣ್ಣನಲ್ಲಾದ ಬದಲಾವಣೆ ಮನೆ ಯೊಳಗೆ ಸಣ್ಣ ಪುಟ್ಟ ಗದ್ದಲಗಳನ್ನು ಸೃಷ್ಟಿಸತೊಡ ಗಿತು. “ಅಷ್ಟು ಚೆನ್ನಾಗಿ ನಮಾಜು ಮಾಡುತ್ತಿದ್ದ ಹುಡುಗನಿಗೆ ಇದೇನಾಯಿತು...?” ಎಂಬ ಅಣ್ಣನ ಮೇಲಿನ ಸಿಟ್ಟನ್ನು ತಾಯಿ ನನ್ನ ಮೇಲೆ ತೀರಿಸುತ್ತಿದ್ದರು. ಸೊಗಸಾಗಿ ಕಿರಾ‌ಅತ್‌ಗಳನ್ನು ಓದುತ್ತಾ, ಮೀಲಾದುನ್ನೆಬಿಯ ಸಮಯದಲ್ಲಿ ಹತ್ತು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುತ್ತಾ ಇದ್ದ ನಾನು ಕೆಲವೊಮ್ಮೆ ‘ಅಧಿಕ ಪ್ರಸಂಗ’ ಮಾತನಾಡುವುದು ತಾಯಿಗೆ ಸಿಟ್ಟು ತರಿಸುತ್ತಿತ್ತು. ಬೊಳುವಾರು ತಮ್ಮ ಕತೆಗಳಲ್ಲಿ ಎತ್ತಿದ ಪ್ರಶ್ನೆಗಳನ್ನು ನಾನು ಸಮಾಜದೊಳಗೆ ಎತ್ತಬೇಕು ಎನ್ನುವ ತುಡಿತ. ಒಂದು ರೀತಿ ಹುಚ್ಚು ಅನುಕರಣೆ. ಆ ಕಾಲ, ವಯಸ್ಸು ಅದಕ್ಕೆ ಕಾರಣ ಇರಬಹುದು. ಆದರೆ ನಿಧಾನಕ್ಕೆ ಬೊಳುವಾರು ತಮ್ಮ ಕತೆಗಳಲ್ಲಿ ಇನ್ನಷ್ಟು ಬೆಳೆಯುತ್ತಾ ಹೋದರು. ನಾವೂ ಬೆಳೆಯುತ್ತಾ ಹೋದೆವು.

ಆರಂಭದ ಬೊಳುವಾರರ ಕತೆಗಳಲ್ಲಿ ಅಸಾಧಾ ರಣ ಸಿಟ್ಟಿತ್ತು. ಬೆಂಕಿಯಿತ್ತು. ಆಗಷ್ಟೇ ಬೆಂಕಿಯ ಕುಲುಮೆಯಿಂದ ಹೊರ ತೆಗೆದ ಸಲಾಖೆಯಂತೆ ಧಗ ಧಗ ಹೊಳೆಯುತ್ತಿತ್ತು. ಬಹುಶಃ ನಮ್ಮ ಹದಿ ಹರೆಯಕ್ಕೆ ಆ ಕಾರಣದಿಂದಲೇ ಅದು ತುಂಬಾ ಇಷ್ಟವಾಗಿರಬೇಕು. ‘ದೇವರುಗಳ ರಾಜ್ಯದಲ್ಲಿ’ ಕಥಾಸಂಕಲನದಲ್ಲಿ ಇಂತಹ ಕತೆಗಳನ್ನು ಗುರುತಿಸಬಹುದು. ವ್ಯವಸ್ಥೆಯ ವಿರುದ್ಧ ಕಥಾನಾಯಕನ ಹಸಿ ಹಸಿ ಬಂಡಾಯ. ಬೊಳುವಾರರ ಆರಂಭದ ಎಲ್ಲ ಕತೆಗಳಲ್ಲೂ ಇದನ್ನು ಕಾಣಬಹುದು. ಆದರೆ, ‘ಆಕಾಶಕ್ಕೆ ನೀಲಿ ಪರದೆ’ಯ ಕತೆಗಳು ಅವರ ಕತಾ ಬದುಕಿನ ಎರಡನೆ ಹಂತ. ಇಲ್ಲಿ ಬೊಳುವಾರು ಮಹಮ್ಮದ್ ಕುಂಞಿವರ ಅದ್ಭುತ ಕಲೆಗಾರಿಕೆಯನ್ನು ಗುರುತಿಸಬಹುದು. ಬೊಳುವಾರರನ್ನು ಆರಂಭದಿಂದಲೇ ಓದಿಕೊಂಡು ಬಂದವರಿಗೆ ಈ ಬದಲಾವಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ತನ್ನ ಕತೆಯನ್ನು ಹೇಳಲು ಅದ್ಭುತವಾದ ರೂಪಕಗಳನ್ನು ಬಳಸುತ್ತಾರೆ. ವ್ಯಂಗ್ಯ, ತಮಾಷೆಗಳ ಕುಸುರಿಗಾರಿಕೆಯಿಂದ ಕತೆಯನ್ನು ಇನ್ನಷ್ಟು ಚಂದ ಕಾಣಿಸುತ್ತಾರೆ. ಅಂತಹದೊಂದು ಅದ್ಭುತ ಕತೆಗಳಲ್ಲಿ ‘ಇಬಾದತ್’ ಕೂಡ ಒಂದು.

‘ಪವಾಡ ಪುರುಷ’ರೆಂಬ ಜನರ ಮುಗ್ಧ ನಂಬಿಕೆಯ ನಡುವೆಯೇ ಮಿಠಾಯಿ ಅವುಲಿಯಾ ಆ ಊರಿನಲ್ಲಿ ಮಾಡುವ ಸಾಮಾಜಿಕ ಕ್ರಾಂತಿ, ದೇವರನ್ನು ತಲುಪುವ ಮನುಷ್ಯನ ಪ್ರಯತ್ನಕ್ಕೆ ಅವರು ತೋರಿಸುವ ಹೊಸ ದಾರಿ, ಜವುಳಿ ಹಾಜಿಯವರನ್ನು ‘ಯಾ ಸಿದ್ದೀಕ್’ ಎಂದು ಹಾಜಿಯವರೊಳಗಿನ ಭಕ್ತನನ್ನು ಕಂಡು ಮೂಕ ವಿಸ್ಮಿತ ರಾಗುವ ರೀತಿ ಎಲ್ಲವೂ ಕನ್ನಡಕ್ಕೆ ಹೊಸತು. ‘ಆಕಾಶಕ್ಕೆ ನೀಲಿ ಪರದೆ’ಯಲ್ಲಿ ಕತೆಗಾರನ ಸಿಟ್ಟು ತಣ್ಣಗಾಗಿದೆ. ವಿವೇಕ ಜಾಗೃತವಾಗಿದೆ. ಕುಲುಮೆಯಿಂದ ಹೊರ ತೆಗೆದ ಸಲಾಖೆಯನ್ನು ಬಡಿದು, ತಣ್ಣಗೆ ನೀರಿಗಿಳಿಸಲಾಗಿದೆ.

೯೦ರ ದಶಕದ ನಂತರ ಬೊಳುವಾರರದು ಇನ್ನೊಂದು ಹಂತ. ಇದು ಅವರ ಮೂರನೆಯ ಹಂತ. ಬಾಬರಿ ಮಸೀದಿ ವಿವಾದ ತುತ್ತ ತುದಿಗೇರಿದ ಸಂದರ್ಭದಲ್ಲಿ ಅವರ ಕತೆಗಳು ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುವುದನ್ನು ನಾವು ಕಾಣಬಹುದು. ಈ ಸಂದರ್ಭದಲ್ಲೇ ಅವರು ಬರೆದ ಸ್ವಾತಂತ್ರದ ಓಟ, ಒಂದು ತುಂಡು ಗೋಡೆ ಕತೆಗಳು ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗುಳಿವ ಕತೆಗಳು. ದೇಶದಲ್ಲಿ ಹೆಡೆಯೆತ್ತಿರುವ ಕೋಮುವಾದ, ಇಂತಹ ಸಂದರ್ಭದಲ್ಲಿ ಮುಸ್ಲಿಮನೊಬ್ಬ ಎದುರಿಸಬೇಕಾದ ದೇಶಪ್ರೇಮದ ಸವಾಲುಗಳನ್ನು ತಮ್ಮ ಕತೆಗಳಲ್ಲಿ ಅದ್ಭುತವಾಗಿ ಕಟ್ಟತೊಡಗಿದರು. ಬಾಬರಿ ಮಸೀದಿ ಧ್ವಂಸಗೊಂಡ ಸಂದರ್ಭದಲ್ಲಿ ಬರೆದ ಒಂದು ತುಂಡು ಗೋಡೆ, ಕೋಮುವಾದ ಹೇಗೆ ಹಳ್ಳಿ ಹಳ್ಳಿಗೂ ಕಾಲಿಟ್ಟು ಅಲ್ಲಿನ ಮುಗ್ಧ ಬದುಕಿಗೆ ಸವಾಲನ್ನು ಒಡ್ಡ ತೊಡಗಿವೆ ಎನ್ನುವುದನ್ನು ಹೇಳುತ್ತದೆ.

ಬೊಳುವಾರರು ಬರೆದ ‘ಸ್ವಾತಂತ್ರದ ಓಟ’ ನೀಳ್ಗತೆಯ ಓಟ ಇನ್ನೂ ನಿಂತಿಲ್ಲ. ಅದೀಗ ತನ್ನ ಓಟವನ್ನು ಮುಂದುವರಿಸಿದೆ. ನೀಳ್ಗತೆ ಸಾವಿರಾರು ಪುಟಗಳ ಕಾದಂಬರಿಯಾಗುತ್ತಿದೆ ಎನ್ನುವ ‘ಗುಟ್ಟ’ನ್ನು ಬೊಳುವಾರರು ಬಹಿರಂಗಪಡಿಸಿದ್ದಾರೆ. ಬೊಳುವಾರರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಿಕ್ಕಿದ್ದಕ್ಕಿಂತಲೂ ದೊಡ್ಡ ಸಿಹಿ ಸುದ್ದಿ ಕನ್ನಡಿಗರಿಗೆ ಸಿಕ್ಕಿದೆ. ಬೊಳುವಾರರು ಏನು ಬರೆದರೂ ಅದು ಹೃದಯ ತಟ್ಟುವಂತೆಯೇ ಇರುತ್ತದೆ ಎನ್ನುವುದು ಕನ್ನಡಿಗರಿಗೆ ಗೊತ್ತಿದ್ದದ್ದ್ದೇ. ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಎನ್ನುವ ಮಕ್ಕಳ ಪದ್ಯಗಳ ಸಂಪಾದನೆಯನ್ನು ಹೊರತಂದರು. ಮಕ್ಕಳ ಪಾಲಿಗೆ ಅದೊಂದು ನಿಧಿಯೇ ಆಯಿತು. ಮಕ್ಕಳು ಮಾತ್ರವಲ್ಲ, ಹಿರಿಯರೂ ಅದನ್ನು ಚಪ್ಪಾಳೆ ತಟ್ಟುತ್ತಾ ಸ್ವಾಗತಿಸಿದರು. ಗಾಂಧೀಜಿ ಯನ್ನು ಮತ್ತೆ ಹೊಸದಾಗಿ, ಮುಗ್ಧವಾಗಿ ಕಟ್ಟಿಕೊಟ್ಟರು. ‘ಈ ಪಾಪು ಯಾರು?’ ಎಂದು ನಾವು ಕೆನ್ನೆ ಹಿಂಡಿ ನೋಡಿದರೆ, ಇದು ನಮ್ಮ ನಿಮ್ಮ ಬಾಪು!

ಇತ್ತೀಚೆಗೆ ಬೊಳುವಾರರು ಕತೆ ಬರೆಯುವುದನ್ನು ನಿಲ್ಲಿಸಿಯೇ ಬಿಟ್ಟರಲ್ಲ ಎಂಬ ಕೊರಗು ಕಾಡುತ್ತಿತ್ತು. ನಾನಂತೂ ಪ್ರತಿ ದೀಪಾವಳಿಯನ್ನು ಕಣ್ಣಲ್ಲಿ ಹಣತೆ ಹಚ್ಚಿ ಕಾಯುತ್ತಿದ್ದೆ. ಯಾಕೆಂದರೆ ಬೊಳುವಾರು ದೀಪಾವಳಿ ವಿಶೇಷಾಂಕಕ್ಕೆ ಮಾತ್ರ ಬರೆಯುತ್ತಿದ್ದರು. ಆದರೆ ಕೆಲವರ್ಷಗಳಿಂದ ಅದೂ ಇಲ್ಲ. ಇಂತಹ ಸಂದರ್ಭದಲ್ಲಿ, ತಾನು ಈವರೆಗೆ ಬರೆಯದೇ ಇದ್ದುದಕ್ಕೆ ಪಶ್ಚಾ ತ್ತಾಪವೋ ಎಂಬಂತೆ, ನಮ್ಮೆಲ್ಲರ ಆಸೆಯನ್ನು ಈಡೇರಿಸುವುದಕ್ಕೆ ‘ಬೃಹತ್ ಕಾದಂಬರಿ’ಯನ್ನು ನೀಡುವುದಾಗಿ ಹೇಳಿದ್ದಾರೆ.

ಅಕ್ಟೋಬರ್ ೩೦ರಂದು ಅದು ಬಿಡುಗಡೆಯಾಗುತ್ತದೆ ಎಂದೂ ಘೋಷಿಸಿದ್ದಾರೆ. ಅಂದೇ ಏಕೆ ಬಿಡುಗಡೆ ಎಂದು ಕೇಳಿದರೆ ಅವರು ತಣ್ಣಗೆ, ಆ ದಿನ ನಾನು ವೃತ್ತಿಯಿಂದ ನಿವೃತ್ತನಾಗುತ್ತೇನೆ ಎನ್ನುತ್ತಾರೆ. ಬೊಳುವಾರು ವೃತ್ತಿಯಿಂದ ನಿವೃತ್ತರಾಗಲಿ. ಆದರೆ ಪ್ರವೃತ್ತಿಯಿಂದ ದೂರ ಸರಿಯದಿರಲಿ. ಬದಲಿಗೆ ಇನ್ನಷ್ಟು ಹತ್ತಿರವಾಗಲಿ. ಅವರಿಂದ ಇನ್ನೂ ಕತೆ, ಕಾದಂಬ ರಿಗಳು ಹುಟ್ಟಿ ಬರಲಿ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಗಾಗಿ, ಹೊಸ ಕಾದಂಬರಿಯನ್ನು ಬರೆಯುತ್ತಿರುವುದಕ್ಕಾಗಿ ಅವರಿಗೆ ವಾರ್ತಾಭಾರತಿ ಪತ್ರಿಕೆಯ ಹಾರ್ದಿಕ ಅಭಿನಂದನೆಗಳು.

ಅದ್ದುವಿನ ‘ನೋಂಬು’ ಹಾರೈಸುವ ಒಳಿತಿನ ಬೆಳಕು

-ಜ್ಯೋತಿ ಗುರುಪ್ರಸಾದ್

‘ನೋಂಬು’ ಎಂಬ ಪಕೀರ್ ಮುಹಮ್ಮದ್ ಕಟಪಾಡಿಯವರು ಬರೆದಿರುವ ಕಥೆ ನನ್ನ ಇಷ್ಟದ ಕಥೆಗಳಲ್ಲಿ ಒಂದು. ಈ ಕಥೆ ಅದ್ದು ಎಂಬ ಹುಡುಗನ ಮುಗ್ಧ ಮನಸ್ಸಿನ ಮೂಲಕ ಲೋಕವನ್ನು ನೋಡುವ ಸತ್ಯ-ಧರ್ಮದ ನಿಜ ಎಳೆಗಳನ್ನು ಸರಳವಾಗಿ ಬೆಸೆಯುವ ಮಹತ್ವದ ಸಾಂಸ್ಕೃತಿಕ ಕೊಂಡಿಯಾಗಿ ಕಾಣುತ್ತದೆ.

‘ನೋಂಬು’ ಎಂದರೆ ಉಪವಾಸ ವ್ರತ. ಮುಖ್ಯವಾಗಿ ‘ರಮಝಾನ್’ ತಿಂಗಳಲ್ಲಿ ಇರುವ ಉಪವಾಸ ವ್ರತದ ಆಚರಣೆ. ಮುಂಜಾನೆ ಹಾಗೂ ಕತ್ತಲಾದ ನಂತರ ತೆಗೆದುಕೊಳ್ಳುವ ಉಪಹಾರ ಬಿಟ್ಟರೆ ಈ ನಡುವೆ ಮತ್ತೇನನ್ನೂ ಆಹಾರವಾಗಿ ಸ್ವೀಕರಿಸದೆ ಅಲ್ಲಾಹನ ಧ್ಯಾನದಲ್ಲಿ ಕಟ್ಟು ನಿಟ್ಟಾಗಿ ಆಚರಿಸುವ ಮನಃಶುದ್ಧಿಯ ಉಪವಾಸ ವ್ರತ. ಈ ಉಪವಾಸ ವ್ರತದ ಉದ್ದೇಶ ಒಳಿತಿನ ಹಾರೈಕೆ. ಈ ಒಳಿತಿನ ಕಲ್ಪನೆ ಹೇಗಿದೆ ಎಂದರೆ ಹಸಿವಿನ ಕಷ್ಟ ಅರ್ಥ ಮಾಡಿಕೊಂಡು ಉಳ್ಳವರು ಇಲ್ಲದವರಿಗೆ (ಬಡವರಿಗೆ) ಕೈಲಾದಷ್ಟು ದಾನ ಮಾಡುವ ಅಭ್ಯಾಸ ಬೆಳೆಸಿಕೊಂಡು ವ್ರತವನ್ನು ಆಚರಿಸಿದರೆ ಅವರ ಇಷ್ಟಾರ್ಥ ಫಲಿಸುವ ಸ್ವರ್ಗ ಸುಖ ಅವರಿಗೆ ಲಭಿಸುತ್ತದೆ ಎಂಬ ಸಂತಸದ ಸಂದೇಶವನ್ನು ರವಾನಿಸುವ ರೂಪಕ.

ಈ ರೂಪಕವನ್ನು ‘ನೋಂಬು’ ಕಥೆಯ ಅದ್ದು ಎಂಬ ಬಡವರ ಮನೆಯ ಹುಡುಗ ನಮಗೆ ಎಷ್ಟು ಚೆನ್ನಾಗಿ ಕಣ್ಮುಂದೆ ಬರಿಸುತ್ತಾ ನೆಂದರೆ ಧ್ಯಾನದಲ್ಲಿ ಓದುವ ನಾವು ಕೂಡ ‘ನೋಂಬು’ ಆಚರಿಸಿದ ಸಂಭ್ರಮಕ್ಕೆ ಒಳಗಾಗು ತ್ತೇವೆ. ಕಥೆ ಇಬ್ಬರು ಎಳೆಯ ಗೆಳೆಯರ ಮನೆಗಳ ನಡುವೆ ನಡೆಯುತ್ತದೆ. ಅದ್ದು ಮತ್ತು ಕಾಸಿಂ ಎಂಬ ಹೆಸರಿನ ಪುಟ್ಟ ಮಕ್ಕಳು ಅವರು. ಅದ್ದು ಬೀಡಿ ಕಟ್ಟಿ ಜೀವನ ಸಾಗಿಸುವ ಅನಿವಾರ್ಯತೆ ಇರುವ ಬಡ ಅಪ್ಪ ಅಮ್ಮನ ಮಗನಾದರೆ, ಕಾಸಿಂ ತನ್ನ ಮನೆಯಲ್ಲಿ ಐಹಿಕವಾದ ಎಲ್ಲಾ ಸುಖ ಸಂಪತ್ತು ಉಳ್ಳ ಶ್ರೀಮಂತರ ಮನೆಯ ಹುಡುಗ. ಅದ್ದುವಿಗೆ ‘ನೋಂಬು’ ಹೇಗಿರುತ್ತದೆ ಎಂದು ತಿಳಿದು ಕೊಳ್ಳುವ ಅದಮ್ಯ ಹಂಬಲ. ಅವನ ಮನೆಯಲ್ಲಿ ಅವನ ಅಪ್ಪ-ಅಮ್ಮ ನೋಂಬನ್ನು ಕೈಗೊಂಡಿದ್ದಾರೆ. ತನ್ನ ಗೆಳೆಯ ಕಾಸಿಂನನ್ನು ‘ನೋಂಬು ಹೇಗಿರುತ್ತದೋ?’ ಎಂದು ಕೇಳುತ್ತಾನೆ. ಅವನಿಗೂ ನೋಂಬಿನ ಅನುಭವವಿರುವುದಿಲ್ಲ! ಮಕ್ಕಳಿಗೆ-ಕೈಲಾಗದ ದುರ್ಬಲರಿಗೆ ನೋಂಬಿನ ಕಡ್ಡಾಯವಿರುವು ದಿಲ್ಲ. ತನಗೆ ತನ್ನ ಅಮ್ಮನಿಂದ ತಿಳಿದಷ್ಟನ್ನು ಮಾತ್ರ ಹೇಳುತ್ತಾನೆ. ‘ಈ ರಮಝಾನ್ ತಿಂಗಳಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದಂತೆ. ಈ ರಮಾಝಾನ್ ತಿಂಗಳಲ್ಲಿ ಖುರಾನ್ ಇದೆಯಲ್ಲ, ಅದು ಭೂಮಿಗೆ ಬಂದಿತ್ತಂತೆ ನೋಂಬು ಮಾಡಿದವರೆಲ್ಲ ಸ್ವರ್ಗಕ್ಕೆ ಹೋಗುತ್ತಾ ರಂತೆ’. ‘ಈ ಸ್ವರ್ಗ ಅನ್ನೋದು ಸತ್ತ ನಂತರ ಸಿಗೋದು ಅಲ್ವಾ ಕಾಸಿಂ? ಬದುಕಿರೋವಾಗ ನಮಗೆ ಸಿಕ್ಕಿದ್ರೆ ಎಂಥ ಗಮ್ಮತ್ತು ಆಗ್ತಿತ್ತಲ್ವಾ?’ ಎನ್ನುತ್ತಾನೆ ಅದ್ದು. ‘ಭೂಮಿಯಲ್ಲಿ ಹರಾಮ್ ಆದದ್ದು ಕೂಡ ಸ್ವರ್ಗದಲ್ಲಿ ಹಲಾಲ್ ಆಗಿರುತ್ತ ದಂತೆ’ ಎನ್ನುತ್ತಾನೆ ಕಾಸಿಂ. ‘ಹೌದು ಅಲ್ಲಿ ಸುಖ ಸಂಪತ್ತು ಎಲ್ಲ ಇರ‍್ತದಂತೆ, ಹೊಟ್ಟೆ ತುಂಬ ಊಟ ಇರ‍್ತದಂತೆ, ಮೂಸಂಬಿ, ಸೇಬು, ದ್ರಾಕ್ಷಿ ಹಣ್ಣುಗಳಿರ‍್ತವಂತೆ. ದಿನವೂ ಮಾಂಸದ ಅಡುಗೆ, ತುಪ್ಪದ ಅನ್ನ, ಗರಿ ಗರಿ ಇಸ್ತ್ರೀ ಮಾಡಿದ ಸಿಲ್ಕ್ ಅಂಗಿ, ಜರಿಯ ಟೊಪ್ಪಿ ಎಲ್ಲ ಇರ‍್ತದಂತೆ’ ಎಂದು ಅದ್ದು ತನ್ನ ಜ್ಞಾನದ ಬಗ್ಗೆ ಹೇಳುತ್ತಾನೆ. ‘ಅಯ್ಯೋ ಇದೆಲ್ಲ ಬೇಕಾದ್ರೆ ಸ್ವರ್ಗಕ್ಕೆ ಹೋಗ್ಬೇಕಾ? ನಮ್ಮ ಮನೆಯಲ್ಲಿ ಅದೆಲ್ಲಾ ಇರ‍್ತದೆ’ ಎಂದು ಕಾಸಿಂ ನಗುತ್ತಾನೆ. ತನ್ನ ಬಡ ಅಪ್ಪ ಅಮ್ಮನ ಬೀಡಿ ಕಟ್ಟುವ ಕಷ್ಟ-ಅವರ ಕೆಮ್ಮು-ಹೊಟ್ಟೆಗಿಲ್ಲದ ಉಪವಾಸದ ದಿನಗಳು ಇವೆಲ್ಲದರ ಅನುಭವ ವಿದ್ದ ಅದ್ದು ಕಾಸಿಂನ ಈ ಮಾತನ್ನು ಕೇಳಿ ಪೆಚ್ಚಾ ಗುತ್ತಾನೆ. ‘ಹಾಗಾದ್ರೆ ಕಾಸಿಂನ ಮನೆಯೆಂದರೆ ಸ್ವರ್ಗವೇ ಇರಬೇಕು’ ಎಂದುಕೊಂಡು ಅದ್ದು ಕುತೂಹಲದಿಂದ ಗೆಳೆಯ ಕಾಸಿಂನ ಮನೆಗೆ ಕಾಲಿಡುತ್ತಾನೆ. ಅಲ್ಲಿ ಅವನಿಗೆ ಕಾಸಿಂನ ಶ್ರೀಮಂತ ಮನೆಯ ಸುಖ-ಸುಪ್ಪತ್ತಿಗೆಯ ಜೊತೆಗೆ ಕಾಸಿಂನ ಅಪ್ಪ ಅಮ್ಮ ಅಕ್ಕ ಭಾವ ಎಲ್ಲರ ಪರಿಚಯದ ಅನುಭವನೂ ಆಗ ತೊಡಗುತ್ತದೆ. ಕಾಸಿಂನೊಡನೆ ಅದ್ದುವಿಗೂ ಪ್ರೀತಿಯಿಂದ ರೊಟ್ಟಿ ಮಾಡಿ ಕೊಡುವ ಕಾಸಿಂನ ಅಮ್ಮನ ಮೂಲಕ ‘ನೋಂಬಿ’ನ ಬಗೆಗಿನ ಕಥೆಯೊಂದು ಅದ್ದುವಿನ ಮನೋಭೂಮಿಕೆಯಲ್ಲಿ ಅಚ್ಚಳಿಯದೆ ಕಾಡುತ್ತಾ ಉಳಿದು ಬಿಡುತ್ತದೆ.

ಆ ಕಥೆ ಹೀಗಿದೆ-‘ಒಂದೂರಿನಲ್ಲಿ ಒಬ್ಬ ಏಳು ವರ್ಷದ ಹುಡುಗನಿದ್ದ ನಿಮ್ಮ ಹಾಗೆ...’ ಎನ್ನುತ್ತಾ ರೊಟ್ಟಿ ಸುಡುವ ಜೊತೆಗೆ ಕಾಸಿಂನ ಅಮ್ಮ ಕಥೆ ಹೇಳತೊಡಗುತ್ತಾಳೆ. ಹುಡುಗ ತಾಯಿಯೊಂದಿಗೆ ಹಠ ಹಿಡಿದು ಉಪವಾಸ ಮಾಡಿದ್ದು, ಸಂಜೆಯಾಗುತ್ತಲೇ ಮುಖ ಬಾಡಿ, ಮೈ ಒಣಗುತ್ತಾ ಬಂದು ಅವನು ಸತ್ತು ಹೋದದ್ದು, ಆಗ ಅಲ್ಲಾಹನ ಧೂತನೊಬ್ಬ ಪಕೀರನ ವೇಷದಲ್ಲಿ ಬಂದು ಅಲ್ಲಾಹನ ದಯೆಯಿಂದ ಬದುಕಿಸಿದ್ದು, ಮತ್ತೇ ಅವನು ತನ್ನ ತಂದೆ-ತಾಯಿಗಳ ಜೊತೆಗೆ ಸುಖವಾಗಿ ಬಾಳಿದ್ದು. ಕಥೆ ಕೇಳುತ್ತಾ ರೋಮಾಂಚನಗೊಂಡ ಅದ್ದು ತಾನೂ ಅಮ್ಮನೊಂದಿಗೆ ಹಠ ಹಿಡಿದು ಮಾರನೆ ದಿನ ನೋಂಬನ್ನು ಆರಂಭಿಸುತ್ತಾನೆ. ‘ತಾನು ಸತ್ತರೆ ಅಲ್ಲಾಹನ ಧೂತ ಬಂದು ಬದುಕಿಸುತ್ತಾನೆ ಉಪವಾಸ ಮಾಡಿದಾಗ ದುವಾ ಮಾಡಿದರೆ ಅಲ್ಲಾಹ್ ಕೇಳಿದ್ದೆಲ್ಲ ಕೊಡುತ್ತಾನಂತೆ. ನಮ್ಮ ಅಪ್ಪ ಅಮ್ಮನಿಗೆ ಕಷ್ಟ ಕೊಡಬೇಡ ಅಂತ ಅಲ್ಲಾಹನಲ್ಲಿ ಬೇಡಿಕೊಳ್ಳಬೇಕು. ನಮಗೆ ಕೂಡ ಕಾಸಿಂನವರಿಗಿರುವಂತಹ ‘ಜನ್ನತುಲ್ ಫಿರ್ದೌಸು’ ನಂತಹ ಮನೆ, ಚೆಂದದ ಬಟ್ಟೆ ಬರೆ ಕೊಡು’ ಎಂದು ಅಲ್ಲಾಹನಲ್ಲಿ ಕೇಳಬೇಕೆಂಬುದು ಅದ್ದುವಿನ ನೋಂಬಿನ ಉದ್ದೇಶ.

ನೋಂಬಿನಲ್ಲಿರುವವರು ಸುಳ್ಳು ಹೇಳಬಾರದು, ಮೋಸ ಮಾಡಬಾರದು, ದುಶ್ಚಟಗಳಲ್ಲಿ ಬೀಳಬಾರದು ಎಂಬುದು ಅದ್ದುವಿಗಿದ್ದ ನಂಬಿಕೆ. ಅದು ಅವನಿಗೆ ಅವನ ಮನೆಯ ವಾತಾವರಣದಿಂದಲೂ ಲಭಿಸಿರುತ್ತದೆ. ಆದರೆ ಕಾಸಿಂ ಮನೆಯಲ್ಲಿ ಅವನ ನಂಬಿಕೆಗೆ ತದ್ವಿರುದ್ದವಾದ ಘಟನೆಗಳೇ ನಡೆಯುತ್ತಾ ದೊಡ್ಡವರ ಕಪಟ ಆಚರಣೆಯ ಬಗ್ಗೆ ಅದ್ದುವಿನ ಕೋಮಲವಾದ ಮನಸ್ಸು ಘಾಸಿಗೊಳ್ಳುವ ಪ್ರಸಂಗಗಳು ಎದುರಾಗುತ್ತದೆ. ಮದುವೆಯಾಗಿ ವರ್ಷದ ಮೊದಲ ಹಬ್ಬಕ್ಕಾಗಿ ಮಾವನ ಮನೆಗೆ ಬಂದಿರುವ ಕಾಸಿಂನ ಭಾವ ನೋಂಬಿನಲ್ಲಿರುವ ಅದ್ದುವನ್ನು ಯಾರಿಗೂ ತಿಳಿಯದಂತೆ ತನಗೆ ಸಿಗರೇಟು ತಂದುಕೊಡಬೇಕೆಂದು ಹೇಳುತ್ತಾನೆ. ನೋಂಬಿನ ಬಗೆಗೆ ಪ್ರಶ್ನೆ ಆಗಲಿಂದ ಅದ್ದುವಿನ ಪುಟ್ಟ ತಲೆಯಲ್ಲಿ ಆರಂಭವಾಗುತ್ತದೆ. ‘ಸಿಗರೇಟು ಸೇದಿದ್ರೆ ನೋಂಬು ಹೋಗುತ್ತದೆ..’ ಎನ್ನುತ್ತಾನೆ ಅದ್ದು. ‘ನನಗೇ ಬುದ್ದಿ ಹೇಳ್ತಿಯೇನೋ ಹುಡುಗ’ ಎಂದು ಕಾಸಿಂನ ಭಾವ ಗದರಿದ ತಕ್ಷಣ ಅದ್ದು ಅಲ್ಲಿಂದ ಕಂಬಿಕೀಳುತ್ತಾನೆ. ಸೂರಪ್ಪನ ಅಂಗಡಿಯಿಂದ ಸಿಗರೇಟು ತರುವಾಗ ಅದ್ದುವಿಗೆ ಸಿಗುವ ಇಸ್ಮಾಲಿ ಹಾಜಿಯವರು ಮಾತಾಡಲೇ ಬಿಡದಂತೆ ಆ ಸಿಗರೇಟು ಅದ್ದುವಿನ ಅಪ್ಪನಿಗೆ ಇರಬೇಕೆಂದು ತಪ್ಪು ಊಹೆ ಮಾಡಿ ‘ಅದಕ್ಕೆ ನೀವು ಬಡವರಾಗಿರೋದು’ ಎಂದು ಚುಚ್ಚು ಮಾತನ್ನಾಡಿ ಅದ್ದುವನ್ನು ನೋಯಿಸುತ್ತಾರೆ. ‘ಅಪ್ಪ-ಅಮ್ಮ ನೋಂಬು-ನಮಾಝ್ ಎರಡನ್ನೂ ಎಂದೂ ತಪ್ಪಿಸಿದವರಲ್ಲ ಆದರೂ ನಾವು ಯಾಕೆ ಬಡವರಾಗಿಯೇ ಉಳಿದಿದ್ದೇವೆ?’ ಎಂಬ ಪ್ರಶ್ನೆ ಅದ್ದುವಿಗೆ ಏಳುತ್ತದೆ. ನಂತರ ಕಾಸಿಂನ ಒಳ್ಳೆಯ ಅಕ್ಕ ಜಮೀಲಾಳ ಮೇಲೆ ಕಾಸಿಂನ ಭಾವ ಹಣಕ್ಕಾಗಿ ದಬ್ಬಾಳಿಕೆ ಮಾಡುವುದನ್ನು ನೋಡಿ ಅಲ್ಲಿಂದ ಓಡೋಣವೆನಿಸುತ್ತದೆ. ‘ನಾನು ಹೇಳಿದ ಹಾಗೆ ಕೇಳ್ಬೇಕು. ತಪ್ಪು ಎದುರು ಮಾತಾಡಿದ್ರೆ ಸೊಡ್ಡಿಗೆ ಜಪ್ಪುತ್ತೇನೆ’ ಎನ್ನುತ್ತಾ ಹೆಂಡತಿ ಜಮೀಲಾಳಿಗೆ ಕಾಸಿಂನ ಭಾವ ಜೋರು ಮಾಡುತ್ತಾನೆ. ‘ಅದೆಷ್ಟು ಹಣ ನಿಮ್ಗೆ ಅಪ್ಪನಿಂದ ಕೊಡ್ಸೋದು? ನೀವೇನಾದ್ರು ಸಂಪಾದನೆ ಮಾಡದಿದ್ರೆ ಹೇಗೆ? ಅಪ್ಪ ಎಷ್ಟೂಂತ ಕೊಟ್ಟಾರು?’ ಇದು ಜಮೀಲಕ್ಕನ ಸ್ವರ. ಪಟಾರನೆ ಅವಳ ಕೆನ್ನೆಗೆ ಕಾಸಿಂನ ಭಾವ ಹೊಡೆವ ಪೆಟ್ಟು. ಆಗ ಅದ್ದು ಗಡಗಡನೆ ನಡುಗುತ್ತಾನೆ. ನಂತರ ಮನೆಯ ಹೊರಗೆ ಅಲ್ಲೇ ನಿದ್ದೆಯಿಂದೆದ್ದ ಕಾಸಿಂನ ತಂದೆ ಬೇಡಲು ಬಂದಿದ್ದ ಒಬ್ಬ ಹುಚ್ಚನನ್ನು ಗಟ್ಟಿಯಾಗಿ ಗದರುವುದು ಕೇಳುತ್ತದೆ. ಮಸೀದಿಯ ಮುಂದೆ ಹರಕು ಬಟ್ಟೆ ತೊಟ್ಟು ಯಾವಾಗಲೂ ಬೇಡುತ್ತಾ ನಿಲ್ಲುವ ಹುಚ್ಚನನ್ನು ‘ ನಿಂಗೆ ನೋಂಬಿನ ದಿನ ಗೊತ್ತುಂಟ ಇಲ್ವಾ? ಊಟ ಹಾಕಿ ಅಂತಾ ಕೇಳ್ತಿಯಲ್ವಾ ನಾಚಿಕೆ ಇಲ್ಲದವನೆ! ಅದಕ್ಕಾಗೇ ಅಲ್ಲಾಹ್ ನಿನಗೆ ಹೀಗೆ ಹುಚ್ಚನನ್ನಾಗಿ ಮಾಡಿಟ್ಟಿದ್ದಾನೆ ನಡಿಯಾಚೆ...’ ಎಂದು ಕಾಸಿಂನ ಅಪ್ಪ ಗದರಿಸಿದಾಗ ಆ ಹುಚ್ಚ ಒಂಥರಾ ನಕ್ಕು ಅಲ್ಲಿಂದ ಓಡಿರುತ್ತಾನೆ. ಕಾಸಿಂನ ತಂದೆಯ ಮುಖದ ಮೇಲೆ ಹುಚ್ಚನಿಗೆ ಜೋರು ಮಾಡಿದ ಸಿಟ್ಟನ್ನು ಅದ್ದು ಗಮನಿಸುತ್ತಾನೆ. ಸರಿದು ನಿಲ್ಲುತ್ತಾನೆ.‘ಇರ‍್ಲಿ ಈ ಹುಚ್ಚನಿಗೂ ಹೀಗೆ ಒಂದು ದಿನ ನೋಂಬು’ಎಂದು ಒಳಗೊಳಗೆ ಅದ್ದು ನಗುತ್ತಾನೆ. ಮುಂದೆ ಕಾಸಿಂ ಅಕ್ಕ ಜಮೀಲಾ ಯಾರಿಗೂ ಹೇಳದಂತೆ ತನಗೆ ಹೊಳೆಯ ಬದಿಯಿಂದ ಎರಡು ತೆಂಬೆ ಕಾಯಿ ಕೊಯ್ದು ತಂದು ಕೊಡ್ತಿಯಾ ಎಂದು ಅದ್ದುವನ್ನು ಕೇಳುತ್ತಾಳೆ. ಅದೆಷ್ಟು ಸುಲಭದ ಕೆಲಸವೆನಿಸಿ ಆ ಮರವನ್ನು ಹತ್ತಿ ಆ ಕಾಯಿಯನ್ನು ಅದ್ದು ಜಮೀಲಕ್ಕನಿಗೆ ತಂದು ಕೊಡುತ್ತಾನೆ. ಆದರೆ ನಂತರ ಅದು ವಿಷದ ಕಾಯಿ ಎಂದು ತಾಯಿಯಿಂದ ತಿಳಿದ ತಕ್ಷಣ ಯಾರಿಗೂ ಹೇಳುವುದಿಲ್ಲವೆಂದು ಜಮೀಲಕ್ಕಳಿಗೆ ಮಾಡಿದ ಆಣೆಯನ್ನು ಮುರಿದು ತಾಯಿಗೆ ಸತ್ಯ ಹೇಳುತ್ತಾನೆ. ತಕ್ಷಣ ಅದ್ದುವಿನ ತಾಯಿ ಕಾಸಿಂ ಮನೆಗೆ ಸುದ್ದಿ ಮುಟ್ಟಿಸಲು ಓಡುವವರೆಗೆ ಜಮೀಲ ವಿಷದ ಕಾಯಿಯನ್ನು ತಿಂದು ನಿಸ್ತೇಜವಾಗಿ ಇನ್ನೂ ಉಳಿದಿರುವ ಪ್ರಾಣದಿಂದ ನರಳುತ್ತಿರುತ್ತಾಳೆ. ಜಮೀಲಳ ತಾಯಿ ಅಂತಹ ಕೆಟ್ಟ ಗಂಡನಿಗೆ ತನ್ನ ಮುತ್ತಿನಂತಹ ಮಗಳನ್ನು ಮದುವೆ ಮಾಡಿಕೊಟ್ಟಿದ್ದಕ್ಕೆ ಪಶ್ಚಾತ್ತಾಪ ಪಡುತ್ತಾ ಅಳುತ್ತಿರುತ್ತಾಳೆ.

ಆ ನಂತರ ಸಂಜೆಯಾಗುತ್ತಾ ಬಂದಂತೆ ಕಾಸಿಂನ ಮನೆಯ ಹತ್ತಿರವಿದ್ದ ಹುಚ್ಚ ಅದ್ದುವಿನ ಮನೆಗೆ ಬೇಡಲು ಬರುತ್ತಾನೆ. ಅದ್ದುವಿನ ಮನೆಯಲ್ಲಿ ಅವನಿಗೆ ಅದ್ದುವಿನ ಪಾಲಿಗಿಟ್ಟಿದ್ದ ಮಮತೆಯಿಂದ ಕೊಡುವ ಅನ್ನ ಸಿಗುತ್ತದೆ. ಹುಚ್ಚ ಅದನ್ನು ಗಬಗಬನೆ ತಿನ್ನುತ್ತಾನೆ. ‘ಇವನೇ ಆ ಕಥೆಯಲ್ಲಿ ಬಂದ ದೇವಧೂತನ?’ ಎಂದು ಅದ್ದುವಿಗೆ ಪ್ರಶ್ನೆ ಬರುತ್ತದೆ. ಆದರೆ ಹುಚ್ಚ ತಲೆಯೆತ್ತಿ ಅದ್ದುವಿನತ್ತ ನೋಡಿ ಗೇಲಿ ಮಾಡುವವನಂತೆ ಪುಸ ಪುಸನೆ ನಗುತ್ತಾನೆ. ಇದರಿಂದ ಪೆಚ್ಚಾದ ಅದ್ದು ‘ನೋಂಬಿದಲ್ಲವ ಇವ ದೇವಧೂತ ಹೇಗಾದನು?’ ಎಂದುಕೊಳ್ಳುತ್ತಾನೆ. ಕೊನೆಗೆ ಕಾಸಿಂನ ಅಮ್ಮ ಹೇಳಿದ ಕಥೆಯಲ್ಲಿ ಬರುವ ಹುಡುಗ ಒಂದೇ ದಿನದ ನೋಂಬಿನಲ್ಲಿ ಹೇಗೆ ಸತ್ತ? ನಾನ್ಯಾಕೆ ಸಾಯಲಿಲ್ಲ ಎಂಬ ಪ್ರಶ್ನೆಗಳು ಅದ್ದುವನ್ನು ಕಾಡ ತೊಡಗುತ್ತದೆ. ಸೂರ್ಯ ಮುಳುಗಿದ ನಂತರ ಮಸೀದಿಯಿಂದ ಮಗ್ರಿಬ್ ನಮಾಝಿನ ಬಾಂಗ್ ಕೇಳಿ ಬರುವ ಹೊತ್ತು ಅದ್ದು ಮೌನವಾಗಿರುವುದನ್ನು ನೋಡಿ ಅವರಮ್ಮ ಕೇಳುತ್ತಾಳೆ- ‘ಹೇಗಾಯ್ತು ಮಗು ನೋಂಬು?’ ಎನ್ನುತ್ತಾಳೆ. ‘ಅರೆ! ನೋಂಬಂದ್ರೆ ಇದೇಯೇನಮ್ಮಾ? ಹೀಗೆ ನಾವು ತುಂಬಾ ಸಲ ಇದ್ದೇವಲ್ಲಾ..! ಆ ದಿನ ನೋಡು, ಅಪ್ಪ ಆಸ್ಪತ್ರೆಯಲ್ಲಿ ಇದ್ದಾಗ ನೀನು ಬೀಡಿ ಕಟ್ಟುವ ದಿನ.. ಅನ್ನ ಮಾಡದೆ ಹೀಗೆಯೇ ನೋಂಬಿನಂತೆಯೇ ಇತ್ತಲ್ಲ..?’ ಎನ್ನುತ್ತಾನೆ ಅದ್ದು . ಅಮ್ಮ ಅಪ್ಪನ ಮುಖ ನೋಡುತ್ತಾಳೆ. ‘ನಮ್ಮ ಮಗ ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತಾನೆ’ ಎಂದು ಅದ್ದುವಿನ ತಂದೆ ಹೇಳುವುದರೊಂದಿಗೆ ಕಥೆ ಮುಗಿಯುತ್ತದೆ.

ಆದರೆ ‘ನೋಂಬು’ವಿನ ನಿಜವಾದ ಅರ್ಥ ನಮ್ಮ ಎದೆಯೊಳಗೆ ಸಂಚರಿಸಲಾರಂಭಿಸುತ್ತದೆ-ಸಮಾನತೆ-ಶಾಂತಿ ಎಲ್ಲದರ ನಿಷ್ಕಪಟ ಆಚರಣೆಯಾಗಿ. ಅಲ್ಲಿ ರಮಝಾನ್‌ಚಂದ್ರ-ಚೌತಿಚಂದ್ರ ಒಟ್ಟಾಗಿ ಕಾಣಲಾರಂಭಿಸುತ್ತಾರೆ. ಅದ್ದುವಿನೊಳಗೆ ಸಮೂಹ ಹಿತವನ್ನು ಬಯಸುವ ಗಣೇಶ ಚತುರ್ಥಿಯ ಮೂರ್ತಿಯಾದ ಗಣೇಶನೂ ಇರುವನೆಂದು ಹೇಳಿದರೆ ನನ್ನ ಮಾತು ಸುಳ್ಳಲ್ಲ ಅಲ್ಲವೇ?
ಇಂಥಹ ಕಥೆಯನ್ನು ಬರೆದು ನಮ್ಮೊಳಗೆ ನಿಜವಾದ ‘ನೋಂಬ’ನ್ನು ತಂದ ಕಟಪಾಡಿಯವರಿಗೆ ನಮಸ್ಕಾರಗಳು.