Friday, April 9, 2010

ರುದ್ರಪ್ಪನ ಖಡ್ಗ

ಮಕ್ಕಳೊಂದಿಗೆ ರುದ್ರಪ್ಪನ ದಿನಚರಿ ಮೊನ್ನೆ ಇದ್ದಂತೆ ನಿನ್ನೆ ಇಲ್ಲ. ನಿನ್ನೆ ಇದ್ದಂತೆ ಇವತ್ತಿಲ್ಲ. ತುಂಬ ಬದಲಾಗಿದೆ. ಪೊಗದಸ್ತಾಗಿ ಊಟ ಮಾಡಿ ನೀಟಾಗಿ ಡ್ರೆಸ್ಸು ಮಾಡಿಕೊಂಡು ಅಂಗಳದ ಕಟ್ಟೆಗೆ ಕೂತು ಬೀದಿ ಉದ್ದಕ್ಕೂ ಕಣ್ಣು ಹರಿಬಿಟ್ಟು ಬೆಕ್ಕಿನಂತೆ ಹೊಂಚು ಹಾಕುತ್ತಾನೆ. ಆತನ ಕಣ್ಣಿಂದ ಯಾವುದೇ ಸಚರಾಚರ ತಪ್ಪಿಸುವುದು ಸಾಧ್ಯವಿಲ್ಲ. ಯಾರಾದರೂ ಸಿಕ್ಕರೆಂದರೆ ಮುಗಿಯಿತು.

ಅಯಸ್ಕಾಂತ ಸೆಳವಿಗೆ ಸಿಕ್ಕ ಕಬ್ಬಿಣದ ಚೂರಿನಂತೆ ತನ್ನ ಬಳಿಗೆ ಬಂದವರನ್ನು ಬರಮಾಡಿಕೊಳ್ಳುತ್ತಾನೆ. ಅವರ ಯೋಗ್ಯತೆಗೆ ತಕ್ಕ ಕಡೆ ಕೂಡ್ರಿಸಿ ಒಂದು ಬೀಡಿ ಒಗೆದು ಹಚ್ಚಿಕೊಳ್ಳಲು ಕಡ್ಡಿ ಪೊಟ್ಟಣವನ್ನೂ ಕೊಡುತ್ತಾನೆ. ಬುಸುಬುಸು ಹೊಗೆ ನಡುವೆ ಆತನ ದುಂಡು ಮುಖದ ನೀಳ ನಾಸಿಕ ಬೆಳ್ಳಿ ಚುಕ್ಕಿಯಂತೆ ಬೆಳಗಲಾರಂಭಿಸುತ್ತವೆ. ವಿಶಿಷ್ಟ ನಗೆಯ ಧ್ವನಿಯ ಸ್ವರೂಪ ಪಡೆಯದೆ ತುಟಿಗಳ ನಡುವೆ ನಂದಿಕೋಲು ಕುಣಿಯಲಾರಂಭಿಸುತ್ತದೆ. ಆತ ಎದೆಯ ಉಬ್ಬಿದ ಭಾಗ ಶ್ರೋತೃವಿಗೆ ಕಾಣಿಸಲೆಂಬಂತೆ ತೆಳುಗಾಳಿ ಕಣಗಿಲೆ ಪೊದೆ ಕಡೆಯಿಂದ ಬೀಸುತ್ತದೆ. ಆತನ ಧ್ವನಿಯ ಸ್ವರ ಲಾಲಿತ್ಯವನ್ನೇ ಮಾಂಸದ ಚೂರೆಂದು ಭ್ರಮಿಸಿ ಟೊಳಪನಾಯಿ ಆತನ ಮುಂದೆ ಕೂತು ಬಾಲ ಅಲ್ಲಾಡಿಸಲಾರಂಭಿಸುತ್ತದೆ. ಒಬ್ಬರಿಗೊಬ್ಬರಿಗೊಬ್ಬರು ಎಂಥ ಅನ್ಯೋನ್ಯ.

ರುದ್ರಪ್ಪ ತನ್ನ ತಾತನ ಕಾಲದ ಸುದ್ದಿ ಎತ್ತುತ್ತಲೆ ದನದ ಕೊಟ್ಟಿಗೆಯಲ್ಲಿ ಎತ್ತುಗಳ ಕಾಲ ಸಂದಿಯಲ್ಲಿ ಸೆಗಣಿ ಹೆಕ್ಕುವ ಕೆಲಸದಲ್ಲಿ ನಿರತಳಾಗಿರುವ ಮುದುಕಿ ಅರ್ಥಾತ್ ಆತಗೆ ಹೆಣ್ಣು ಕೊಟ್ಟು ನಿಂಗಜ್ಜಿ ಅಲಲಲಾ ಸೂರಾ ಪರಾಕ್ರಮಿ ಸುರು ಮಾಡಿಬಿಟ್ಟೆಯಾ ಪುರಾಣ. ಯೇಟು ದಿನಾದ್ವು ನೀವು ಹೊಲ್ದಾಗ ಕಾಲಿಡದೆ;ಯೋಟು ದಿನಾದ್ದು, ನೀನು ಎತ್ತುಗಳ್ಗೆ ನೀರು ಕುಡಿಸದೆ.. ಎಂದು ವಟವಟ ಉದುರಿಸಲಾರಂಭಿಸುತ್ತದೆ. ಅದಕ್ಕೆ ಅನುಪಲ್ಲವಿಯಾಗಿ ಅಡುಗೆ ಮನೆಯಲ್ಲಿ ಗೌರವ್ವ ಅರ್ಥಾತ್ ಆತನ ಹೆಂಡತಿ ಪಾತ್ರೆ ಪಗಡ ಎತ್ತೆತ್ತಿ ಇಟ್ಟು ತಾಳ ಕುಟ್ಟಲಾರಂಭಿಸುತ್ತಾಳೆ. ಮುರುಕು ತೊಟ್ಟಿಲಲ್ಲಿ ನೆತ್ತಿಗೆ ತಕ್ಕುದಾದ ಎಣ್ಣೆ ಬೆಣ್ಣೆ ಕಾಣದ ಕಂದಮ್ಮ ಚಿಟಾರನೆ ಚೀರಿ ಅಳಲಾರಂಭಿಸುತ್ತದೆ. ಹತ್ತಂಕಣದ ಭಾರಿ ಮನೆಯ ಮಾಡನ್ನೆ ಸಾಮ್ರಾಜ್ಯವನ್ನಾಗಿ ಮಾಡಿಕೊಂಡು ದಿನಕ್ಕೆರಡು ಮೂರು ಇಲಿಗಳನ್ನಾದರೂ ಗಬಕಾಯಿಸುತ್ತಿರುವ ಬೆಕ್ಕು ಮ್ಯಾವ್ ಗುಟ್ಟುತ್ತ ನಾಗಂದಿಗೆಯಿಂದ ಕೆಳಕ್ಕೆ ಜಿಗಿಯುತ್ತದೆ. ಆದರೂ ನೀರ ಮೇಲೆ ತೇಲುವ ತುಪ್ಪದಂಥ ರುದ್ರಪ್ಪ ತಾತನ ಪರಾಕ್ರಮಗಳಿಂದ ತನ್ನಪ್ಪನ ಪರಾಕ್ರಮಗಳಿಗೆ ಬಂದಿರುತ್ತಾನೆ. ಅಂಥ ಅಪ್ಪ ಯಾರಿಗೂ ಇರಲಿಕ್ಕಿಲ್ಲ ಎಂಬಂತೆ; ಆತನಿಗಿದ್ದ ಸೂಳೆಯರು ಅಮರಾವತಿಯ ಇಂದ್ರನಿಗೂ ಇರಲಿಕ್ಕಿಲ್ಲ ಎಂಬಂತಹ..ಆತನ ಗತ್ತು ಗೈರತ್ತುಗಳು ಗುಡೇಕೋಟೆ ಮರಾಜನಿಗೂ ಇರಲಿಕ್ಕಿಲ್ಲ ಎಂಬಂತಹ ಮಾತುಗಳ ಇಟ್ಟಿಗೆ ಪೇರಿಸಿಟ್ಟು ಶೋತೃವನ್ನು ಸಜೀವ ಸಮಾಧಿಗೆ ಸಿದ್ಧಗೊಳಿಸಿ ಅಪ್ಪಯ್ಯ ಮುಕ್ಕುಂದಿ ರಾಜಾರೆಡ್ಡಿಯನ್ನು ಹೆದರಿಸಿ ಓಡಿಸಿದ ಖಡ್ಗ ನೋಡೋ ಆಸೆ ಐತಾ ಎಂದು ಕೇಳುತ್ತಾನೆ. ಶ್ರೋತೃ ಹ್ಹೂ ಎಂಬಂತೆ ತಲೆ ಅಲ್ಲಾಡಿಸುತ್ತದೆ. ತಪ್ಪಿಸಿಕೊಳ್ಳದಂತೆ ಕೊರಳ ಪಟ್ಟಿ ಹಿಡಿದು ಪಡಸಾಲೆಗೆ ಕರೆದೊಯ್ಯುತ್ತಾನೆ. ಶ್ರೋತೃ ಇಲ್ಲಾಣ ಧೂಳು ಲೆಕ್ಕಿಸದೆ ಕಣ್ಣು ಬಾಯಿ ಏಕಕಾಲಕ್ಕೆ ತೆರೆದಿರಲು ರುದ್ರಪ್ಪ ತೊಲೆಜಂತಿ ಸಂದಿಯಿಂದ ತುಕ್ಕು ಹಿಡಿದು ಕಿಗ್ಗಲು ಮುಟ್ಟಿದ ಖಡ್ಗ ಹಿರಿದು ಹ್ಹ..ಹ್ಹ..ಹ್ಹ.. ಎಂದು ಗಹಗಹಿಸಿ ಮರು ಕ್ಷಣ ಅದರ ದುರವಸ್ಥೆಗೆ ಮುಖ ಬಿಗಿದು ‘ಯೇನ’ ಎಂದು ಹೆಂಡತಿಯನ್ನು ಕೂಗುತ್ತಾನೆ. ಬಂದ ಹೆಂಡತಿಯ ತುರುಬನ್ನು ಗಬಕ್ಕನೆ ಹಿಡಿದು ಇದನ್ನು ತಿಕ್ಕಿ ತೊಳ್ದಿಡು ಅಂದಿದ್ನೆಲ್ಲಾ ಯಾಕ ಮಾಡ್ಲಿಲ್ಲಾ ಎಂದು ಅಲ್ಲಾಡಿಸಿಬಿಡುತ್ತಾನೆ. ಗೌರವ್ವ ಅಯ್ಯಯ್ಯಪ್ಪೋ ಎಂದು ಬಾಯಿ ಬಾಯಿ ಬಡಿದುಕೊಳ್ಳಲು ಅಯ್ಯೋ ನಿನ್ ಕೈಯಿ ಸೇದಿಹೋಗ ಎಂದು ನಿಂಗಜ್ಜಿ ದನದ ಕೊಟ್ಟಿಗೆಯಿಂದ ಪಡಸಾಲೆಗೆ ಒಮ್ಮೆಗೆ ಕುಪ್ಪಳಿಸಿ ತನ್ನ ಮಗಳ ಸಹಾಯಕ್ಕೆ ಬರುತ್ತಾಳೆ. ಆಗ ಶ್ರೋತೃ ಒಮ್ಮೆಗೆ ವಾಸ್ತವಕ್ಕೆ ಮರಳಿ ಕಾಲಿಗೆ ಬುದ್ಧಿ ಹೇಳುತ್ತಾನೆ.

ಯೋನ್ಲೋ ಬಾಡ್ಕಾವ್ ಅಳಿಯಲ್ಲ ಮಗ ಅಂತ ತಿಳ್ಕೊಂಡು ಬೆಳೆಸಿದ್ಕೆ ಮೈಗೆ ಕೈ ಹಚ್ಚೀಯಾ. ಈ ಸೊಟ್ ಖಡ್ಗ ಬಿಟ್ರೆ ಯ್ಯೋನೈತೋ ನಿಮ್ಮಪ್ನಮನಿ ಆಸ್ತಿ ದುಡೀಲಿಲ್ಲಾ ದುಕ್‌ಪಡೀಲಿಲ್ಲ. ಬಂದೋರೆದ್ರೂಗೆ ಹೋಗೋರೆದ್ರೂಗೆ ಖಡ್ಗಾನ ವರ‍್ಣಸ್ತಾ ಕುಂಡ್ರುತಿಯಲ್ಲಾ ನೀನೊಬ್ಬ ಗಂಡುಸ್ನೇ ಎಂದದ್ದೇ ತಡ ಗಂಡನ ಬಿಗಿ ಮುಷ್ಠಿಯಿಂದ ತುರುಬು ಬಿಡಿಸಿಕೊಂಡವಳೇ ಗೌರವ್ವ. ‘ನನ ಗಂಡನ್ನ ಬಾಯ್ಗೆ ಬಂದಂಗ ಅಂದ್ರ ನಾನು ಸುಮ್ನಿರಾಕಿಲ್ಲ ನೋಡು.’ ಎಂದು ಎದುರಿಗೆ ಕುಪ್ಪಳಿಸಿ ನಿಂತಳು. ಅವರೀರ್ವರನ್ನು ಜಗಳ ಆಡಲು ಬಿಟ್ಟು ರುದ್ರಪ್ಪ ಖಡ್ಗವನ್ನು ಮೂಲಸ್ಥಾನದಲ್ಲಿಟ್ಟು ಮತ್ತೊಬ್ಬ ಶ್ರೋತೃವನ್ನು ಹುಡುಕಿಕೊಂಡು ಹೊರಹೊಂಟ.

ರುದ್ರಪ್ಪ ಮೊದಲು ಹೀಗಿರಲಿಲ್ಲ ಎಂಬುದನ್ನು ತಾಯಿ ಮಗಳಿಬ್ಬರೂ ಒಪ್ಪುತ್ತಾರೆ. ಆತ ಬದಲಾಗಿರುವುದು ಈಗ್ಗೆರಡು ತಿಂಗಳಿಂದ.

ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಪಡೆಯಲು ಕುರುಕೋಡಿಗೆ ಹೋಗಿ ತಾನೂ ಅಪ್ಪಗೆ ಹುಟ್ಟಿದ ಮಗನೆಂದು ವಾದ ಮಂಡಿಸಿದ್ದ ಒಡಹುಟ್ಟಿದ ರಾಚಪ್ಪನೆದುರು. ಆಸ್ತಿ ಏನೈತಿ ಗೆಂಡಿ ಅಂದು ರಾಚಪ್ಪ ಮುಷ್ಠಿಯಲ್ಲಿ ಬೀಡಿ ಹಚ್ಚಿಕೊಂಡಿದ್ದ. ಊರು ಆಡುವ ಗೌಡ ರುದ್ರಪ್ಪನನ್ನು ಮನೆಗೆ ಕರೆದೊಯ್ದು ಹಾಗಲಕಾಯಿ ಪಲ್ಯೆ ಬಿಳಿ ಜೋಳದ ರೊಟ್ಟಿ ಉಂಬಾಕಿಟ್ಟು ಲೇ ನಿಮ್ಮಪ್ಪ ನಾನೂ ಒಂದೇ ಗಂಗಾಳದಲ್ಲಿ ಉಂಬ್ತಿದ್ವಿ ಎಂದು ಆರಂಭಿಸಿ ಆಸ್ತಿ ಹೇಗೆ ಸೂಳೆಯರಿಗೂ ವಕೀಲರಿಗೂ ಸಮನಾಗಿ ಹಂಚಿಹೋಯ್ತು ಎಂದು ಸೋದಾರಣವಾಗಿ ವಿವರಿಸಿದ್ದ. ರುದ್ರಪ್ಪಗೆ ತನ್ನಪ್ಪನ ಬಗ್ಗೆ ಹೆಮ್ಮೆ ಮೂಡಿತು. ಎಂಥದಾದ್ರು ಅಪ್ಪನ ಗುರ‍್ತು ಕೊಡಿಸ್ರಿ. ಎಂದು ದುಂಬಾಲು ಬಿದ್ದಿದ್ದ. ಗೌಡರು ರಾಚಪ್ಪಗೆ ತಿಳಿಹೇಳಿ ಖಡ್ಗ ಕೊಡಿಸಿಕಳಿಸಿದ್ದರು.

ಆ ಖಡ್ಗ ತಂದ ಮೇಲೆಯೇ ರುದ್ರಪ್ಪ ಸಂಪೂರ್ಣ ಬದಲಾಗಿದ್ದು. ಖಡ್ಗ ಕುರಿತು ಯಾರಾದರೊಬ್ಬರಿಗೆ ಹೇಳಿಕೊಳ್ಳದ ಹೊರತು ಊಟ ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲ ಗ್ರಾಮದ ಕೆಲವು ಪ್ರತಿಷ್ಟರನ್ನು ಮನೆಗೆ ಕರೆತಂದು ಉಪ್ಪಿಟ್ಟು ಮಾಡು ಚಾ ಮಾಡು ಎಂದು ಹೆಂಡತಿಯನ್ನು ಜೀವ ತಿನ್ನುವುದು ಮಾಮೂಲಾಗಿತ್ತು. ತಿನ್ನುವುದಕ್ಕೂ ಕುಡಿಯುವುದಕ್ಕೂ ಜೋಡಿಸಲು ತಾಯಿ ಮಗಳೂ ಗಂಡಸರಂತೆ ದುಡಿಯುತ್ತಿದ್ದರು.

ತಾಯಿ ಮಗಳು ಇಡೀ ರಾತ್ರಿ ಎಲೆ ಅಡಿಕೆ ಜಮಡುತ್ತ ಕೂತು ರುದ್ರಪ್ಪ ಮೊದಲಿನಂತಾಗಬೇಕಾದರೆ ಖಡ್ಗವನ್ನು ಮಾಯಮಾಡಬೇಕೆಂಬ ತೀರ್ಮಾನಕ್ಕೆ ಬಂದರು. ಅಲ್ಲದೆ ತೀರ್ಮಾನವನ್ನು ಬೆಳಗಿನ ಜಾವದಲ್ಲಿಯೇ ಕಾರ್ಯ ರೂಪಕ್ಕೆ ತಂದರು.

ಕದದ ಹಿಂದೆ ನೆಲ ಅಗೆದು ಖಡ್ಗವನ್ನು ಹುಗಿದು ಅದರ ಮೇಲೆ ಜೋಳದ ಗುಮ್ಮಿಯನ್ನು ಸರಿಸಿಬಿಟ್ಟರು. ರುದ್ರಪ್ಪ ಉಡುಪಿ ಹೋಟ್ಲಲ್ಲಿ ದೋಸೆ ಹೊಯ್ಯುವ ಭಟ್ಟರನ್ನು ಮನೆಗೆ ಕರೆದುಕೊಂಡು ಬಂದು ನೋಡುತ್ತಾನೆ. ಖಡ್ಗ ಇಲ್ಲ. ಹೆಂಡತಿಯ ತುರುಬಿಗೆ ಕೈ ಹಚ್ಚಿ ಎಲ್ಲಿಟ್ರಿ ಹೇಳ್ರೆ ಎಂದು ಎಳೆದಾಡಿದ. ಒಪ್ಪಂದದಂತೆ ಆಕೆ ಗಂಡನ ಯಾವ ಹಿಂಸೆಗೆ ಬಾಯಿ ಬಿಡಲಿಲ್ಲ. ಕೊನೆಗೆ ರುದ್ರಪ್ಪನು ಹೇಗೋ ಪತ್ತೆ ಮಾಡಿ ಖಡ್ಗವನ್ನು ಹೊರ ತೆಗೆದು ಖಬರ್ದಾರ್ ಎಂದು ಅತ್ತೆ ಮತ್ತು ಹೆಂಡತಿಯನ್ನು ಎಚ್ಚರಿಸುತ್ತಲೇ ಅವರು ಹಾಯ್ ಶಿವನೆ ಎಂದು ಉದ್ಗರಿಸಿದರು.

ತಾಳಿ ಕಟ್ಟಿದ ಹೆಂಡತಿಗೆ ಸೋಡಾ ಚೀಟಿ ಕೊಟ್ಟವನಂತೆ ರುದ್ರಪ್ಪ ಕೆಲವು ದಿನ ಖಡ್ಗದೊಂದಿಗೆ ಇದ್ದ. ತನ್ನನ್ನು ಯಾರೂ ಹತ್ತಿರ ಬಿಟ್ಟುಕೊಳ್ಳುತ್ತಿಲ್ಲ ಎಂದು ಹೆಮ್ಮೆಯಿಂದ ಆತ ಎಷ್ಟು ದಿನ ಬೀಗುತ್ತಿರಲು ಸಾಧ್ಯ! ಮನೆಯೊಳಗೇ ಖಡ್ಗಕ್ಕೊಂದು ಸ್ಥಾನ ಕಲ್ಪಿಸಿ ತನ್ನ ಕಣ್ಣುಗಳೆಂಬ ಏಳು ಹೆಡೆ ಸರ್ಪಗಳನ್ನು ಅದಕ್ಕೆ ಕಾವಲಿಟ್ಟು ನಿಶ್ಚಿಂತೆಯಿಂದ ಇದ್ದ.

‘ಅಲಲಲಾ.. ಬಂಗಾರ‍್ದಂತ ನನ್ನಳೀಯ್ನೀಗೆ ಕಡ್ಗ ಕೊಟ್ಟೊನೆಂಥೋನು, ಕೊಡಿಸಿದೊನೆಂಥೋನು.. ಕಡ್ಗ ನಂ ರುದ್ರನ್ನ ಅದ್ಯೇನು ಮಳ್ಳು ಮಾಡೈತೋ ಸಿವ್ನೇ..ಕಡ್ಗಕ್ಕೆ ಬೆಂಕಿ ಹಚ್ಚಾ; ಕಡ್ಗಕ್ಕೆ ಕರಿನಾಗ್ರಾವ್ ಕಡಿಯಾ’ ಎಂದು ನಿಂಗಜ್ಜಿ ಅಂಗಲಕ್ಕೇರಮೇವವಾಗಿ ನಿಂತು ಎದೆ ಎದೆ ಬಡಿದುಕೊಳ್ಳಲು ಓಣಿಯ ಒಂದಿಬ್ರು ಗೊಳ್ಳನೆ ನಕ್ಕರು.

‘ಬೇ.. ಮುದ್ಕೀ ಕಡ್ಗ ಮಳ್ಳು ಮಾಡಿರೋದು ರುದ್ರಪ್ಗಲ್ಲ.. ನಿನ್ಗೆ.. ಇನ್ನೆಂಟು ದಿನದಾಗ ನಿನ್ಗೆ ಉಂಡಕೂಳು ಹೊಟ್ಗೆ ಹತ್ತಾಕ್ಕಿಲ್ಲ ನೋಡ್ತಿರು ಆಮಟಿ ನಗಾಡಿದ ಕಾಲಜ್ಞಾನಿಯಂತೆ. ಆ ಮಾತು ಮೈಯ ತೊಗಲಿಗಿಂತ ಬಲವಾಗಿ ಅಂಟಿಕೊಂಡು ಬಿಡಲು ನಿಂಗಜ್ಜಿ ಹಿಂಡನಗಲಿದ ಕರುವಿನಂತೆ ಒದ್ದಾಡಿತು. ‘ಗೌರೀ ಹಾಳಾದ ಕಡ್ಗಕ್ಕೆ ಗತಿ ಕಾಣಿಸದಾವರ‍್ತು ನನ್ ಜೀವಕ್ಕೆ ಸಮಾಧಾನಿಲ್ಲಲೇ” ಎಂದು ಕಣ್ಣು ತುಂಬಿಕೊಂಡು ತಾಯಿಯನ್ನು ಅವುಚಿಕೊಂಡು ‘ಯವ್ವೋ..ನನ್ ಕಥಿಯ್ಯೋನು ಹೇಳ್ಲಿ.. ನನ್‌ಗಿಂದ ಆತ್ಗೆ ಕಡ್ಗನೆ ಯಚ್ಚಾಗೈತೆ ಯವ್ವೋ’ ಎಂದು ಲಬ್‌ಗುಟ್ಟಿ ಅತ್ತಳು.

ಅವರಿಬ್ಬರೂ ಹಗಲಿರುಳು ಯೋಚಿಸಿ ಒಂದು ತೀರ್ಮಾನಕ್ಕೆ ಬಂದರು. ತಮ್ಮಿಬ್ಬರನ್ನೂ ಆ ರುದ್ರಪ್ಪ ಕುತ್ಗೆ ಹಿಚುಕಿ ಸಾಯಿಸಿದರೂ ಸರಿಯೇ ಅದನ್ನೊಯ್ದು ಕನ್ನೀರವ್ವನ ಬಾವಿಗೆ ಹಾಕಿ ಬಿಡುವುದಂದು ನಿರ್ಧರಿಸಿದರು. ದೆವ್ವ ಪಿಶಾಚಿ ಭೇತುಳ ಕಾಳೋರಗಗಳಿಗೆ ಹೆಸರಾದ ಹಾಗೂ ತಳವೇ ಪತ್ತೆ ಇಲ್ಲದ ಪ್ರಾಚೀನ ಕಾಲದ ಕನ್ನೀರವ್ವನ ಬಾವಿ ಬಳಿಗೆ ರಾತ್ರೋ ರಾತ್ರಿ ಹೋಗಿ ಖಡ್ಗವನ್ನು ಹಾಕಲು ಬಾವಿಯು ಗಳುಂ ಎಂದು ನುಂಗಿತು.

ಮರುದಿನ ಬೆಳಗಾಗೆ ಖಡ್ಗ ಕಾಣದಿರಲು ರುದ್ರಪ್ಪ ‘ಏನು ಮಾಡಬಿದರಬೇ ನಿಮ್ಮವ್ನ’ ಎಂದು ತಾರಕ ಸ್ವರ ತೆಗೆಯಲು ಓಣಿಯೇ ಹೋಹೋ ಎಂದಿತು. ‘ನಮ್ ಪಿರಾಣ ಹೋದ್ರೂ ಹೇಳಾಕಿಲ್ಲ ಖೊಲ್ಲೋಖೊಲ್ಲು ಎಂದು ಕುಬುಸದ ಗುಂಡಿಬಿಚ್ಚಿ ಅವನಿಗಡ್ಡ ಮಲಗಿದರು. ಸಾಯಲಿಕ್ಕೆ ಸಿದ್ದರಾದವರ ಮುಖಗಳಿಗೆ ಥೂ ನಿಮ ಬಾಯಾಕ. ಎಂದು ಉಗುಳಿದ ರುದ್ರಪ್ಪ ಅತಳ ವಿತಳ ರಸಾತಳ ಪಾತಾಳದಲ್ಲಿ ಬಚ್ಚಿಟ್ಟಿದ್ದರೂ ಪತ್ತೆ ಮಾಡದೆ ಬಿಡೆನು ಎಂದು ಭೀಕರ ಪ್ರತಿಜ್ಞೆ ಮಾಡಿದನು.

ಉಸಿರಾಟವನ್ನೂ ಮರೆತು ಪತ್ತೆ ಕಾರ್ಯಕ್ಕಿಳಿದ ರುದ್ರಪ್ಪನನ್ನು ಊರಮ್ಮನಗುಡಿಯ ಬಳಿ ಕೊಟ್ರನೆಂಬುವ ಚಾಡಿಕೋರ ಸಂದಿಸಿ ವಂದು ಸೀಕರೇಟು ಕಡ್ವಸ್ತೀಯಾ ವಂದ್ ಸುದ್ದಿ ಯೋಳ್ತಿನಿ ಎನ್ನಲು ಆತಗೆ ನಿಧಿ ಸಿಕ್ಕಷ್ಟು ಸಂತಸವಾಯಿತು. ಅಲ್ಲಲೇ ಒಂದ್ಯಾಕ ಒಂದು ಪ್ಯಾಕೇ ಕೊಡಿಸ್ತೀನಿ ಎಂದದ್ದಲ್ಲದೆ ಕೊಡಿಸಿಯೂ ಬಿಟ್ಟನು. ಇಡೀ ಒಂದು ಸಿಗರೇಟು ಸೇದಿ ಆದ ಮೇಲೆ ಮೊನ್ನೆ ರಾತ್ರಿ ಮುದುಕಿ ಗವುರವ್ವನ ಸಂಗಾಟ ಕನ್ನೀರವ್ವನ ಬಾವಿಕಡೆ ವೋಗಿದ್ದು ನೋಡ್ದೆ ಎಂದವನೆ ಟಣಕೂ ಟಣಕೂ ಜಿಕ್ಕೋತ ಓಡಿ ಮರೆಯಾದನು.

“ಹ್ಹಾ.. ಹ್ಹಾ ಕನ್ನೀರವ್ವನ ಬಾವ್ಯಾಗಾ ಹಾಕಿರೇನ್ರೇ ನನ ಖಡ್ಗಾ” ಎಂದು ಅಂಗಳವನ್ನು ದೊಪ್ಪನೆ ತುಳಿದು ಕೂಗು ಹಾಕಲು ಗೌರವ್ವ ಹಡದವ್ವನನ್ನು ಗಟ್ಟಿಯಾಗಿ ಅವುಚಿಕೊಂಡು ಬಿಟ್ಟಳು. ನಿಂಗಜ್ಜಿ ಆಕೆಯಿಂದ ಬಿಡಿಸಿಕೊಂಡು ಅಂಗಳಕ್ಕೆ ನೆಗೆದು ಹಾಕೀವಲೋ ಹಾಕೀವಿ ಅದ್ಯೇನು ಹರ‍್ಕಂತಿಯೋ ಹರ‍್ಕ ಎಂದು ಪರಿಶೈಪೈಕಿ ಪೈಲ್ವಾನಳಂತೆ ನಿಂತಿತು.

“ಸರೆ ಆ ಕನ್ನೀರವ್ನ ಬಾವಿ ಅದೇಟು ಗಡುತರ ನೋಡೇಬಿಡ್ತೀನಿ” ಎಂದವನೇ ಅಂಗಿ ಬಿಚ್ಚಿ ಇಟ್ಟು ಬಾವಿಕಡೆ ಹೆಜ್ಜೆ ಹಾಕುತ್ತಲೇ ಓಣಿ ಎಂಬೋ ಓಣಿಯೇ ಅಯ್ಯೋ ಬ್ಯಾಡ ಅಯ್ಯೋಬ್ಯಾಡ ಎಂದು ಆತನ ಹಿಂದೆ ಹೆಜ್ಜೆ ಹಾಕಿತು. ಅಯ್ಯೋ ನನಗಂಡ ಕನ್ನೀರವು ಬಾವಿಗೆ ವಂಟಾನ ನನ ಸೋಭಾಗ್ಯ ವುಳಿಸ್ರಪೊ ಎಂದು ಗೌರವ್ವನೂ ಅಯ್ಯೋ ನನಮಗಳ ಸೋಭಾಗ್ಯವೇ ಎಂದು ನಿಂಗಜ್ಜಿಯೂ ಮುಂಚೂಣಿಯಲ್ಲಿದ್ದರು.

‘ಬ್ಯಾಡಪೋ ಬ್ಯಾಡ ಅದರಲ್ಲೀಜಿದವರಾರು ಬದುಕಿ ಬಂದುದನ್ನು ಕಾಣೆ ನನ್ನ ನೂರು ವರುಷದ ಆಯಾಮದಾಗೆ’ ಎಂದು ಶತಾಯುಷಿಯೂ ಒಂದು ಕಾಲದಲ್ಲಿ ನಿಂಗಜ್ಜಿಯ ಕಳ್ಳ ಪ್ರೇಮಿಯೂ ಆದ ಕಾಳಜ್ಜ ನೂರು ದೃಷ್ಟಾಂತಗಳ ಸಹಿತ ಹೇಳಿದರೂ ಕಿವಿ ಮೇಲೆ ಹಾಕಿಕೊಳ್ಳದೆ ರುದ್ರಪ್ಪ ಸಿಂಹ ವಿಗ್ರಹದ ನೆತ್ತಿ ಮೇಲೆ ಕಾಲೂರಿ ಹಸಿರು ಬಣ್ಣದ ನೀರಿಗೆ ದುಡುಮ್ಮನೆ ಧುಮುಕಲು ಜನ ಹೋ ಹೋ ಎಂದಿತು.

‘ಅಯ್ಯೋ ನನ್ನ ಮಾಂಗಲ್ಯದ ಋಣ ತೀರಿತೇ, ನನ್ನ ಕಂದಯ್ಯಗಿನ್ನಾರು ದಿಕ್ಕು’ ಎಂದು ಎದೆಗೂ ನೆಲಕ್ಕೂ ಏಕಾಗಿ ಬಡಿದುಕೊಳ್ಳತೊಡಗಿದರು. ‘ಅದಕ್ಯಾಕ ಅಳ್ತೀಯೇ.. ಹರೇದಾಗ ರಂಡ್ಯಾಗಿ ನಾನು ಬದುಕಿಲ್ಲೇನು’ ಎಂದು ನಿಂಗಜ್ಜಿ ಮಗಳನ್ನು ಗಟ್ಟಿಯಾಗಿ ಅವುಚಿಕೊಂಡಿತು. ರುದ್ರಪ್ಪನ ಹೆಣ ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ತೇಲಬಹುದೆಂದು ಚಾತಕಪಕ್ಷಿಗಳಂತೆ ಓಣಿಯ ಸಮಸ್ತರೇ ಕಾಯುತ್ತಿರಲು ಅಸೀಮ ಸಾಹಸಿ ರುದ್ರಪ್ಪನು ತೇಲಿ ಈಜಿ ದಡ ತಲುಪಿದನು. ಏಕಮೇವ ಪಿತ್ರಾರ್ಜಿತ ಆಸ್ತಿಯಾದ ಖಡ್ಗದೊಂದಿಗೆ. ಅಯ್ಯೋ ನನ ಸೌಭಾಗ್ಯವೇ ಮರಳಿ ಬಂದೆಯಾ ದೇವರು ದೊಡ್ಡವನೆಂದು ಗೌರವ್ವ ಓಡಿ ಹೋಗಿ ಗಂಡನನ್ನು ಗಟ್ಟಿಯಾಗಿ ಅವುಚಿಕೊಂಡಳು.

ಕನ್ನೀರವ್ವನ ಬಾವ್ಯಾಗ ಯ್ಯೋಳು ಕೊಪ್ಪರಿಗಿ ಬಂಗಾರೈತಲ್ಲಾ; ಕಂಡಿತೇನು ಎಂದು ಪ್ರಶ್ನೆಗಳ ಮಳೆ ಸುರಿಸಲಾರಂಭಿಸಿದ ವರುಣರಿಂದ ಬಿಡಿಸಿಕೊಂಡು ಮನೆ ತಲುಪುವಷ್ಟರಲ್ಲಿ ರುದ್ರಪ್ಪಗೆ ಸಾಕುಸಾಕಾಗಿ ಹೋಯಿತು.

ನಾನು ಮನಿ ಬಿಟ್ಟು ಹೊಂಡೋಗ್ತೀನೆಂದು ರುದ್ರಪ್ಪನೂ ಅದೆಂಗಬಿಟ್ ಹೋಗ್ತಿ ನೋಡೇಬಿಡ್ತಿನಿ ಎಂದು ನಿಂಗಜ್ಜಿಯೂ ಪಂಚಾಯ್ತಿ ಎರಡು ದಿನ ಪರ್ಯಂತರ ನಡೆಯಿತು. ಹೋದರೆ ಪಿತ್ರಾರ್ಜಿತ ಎಂಬುದು ಒಂಚೂರು ಹೊಲ ಉಂಟಾ, ನೆರಳುಂಟಾ ಕೊನೆಗೆ ಓಣಿ ದೈವಸ್ಥರ ಮಾತಿಗೆ ಮನ್ನಣೆ ಕೊಟ್ಟು ಅತ್ತೆಯ ನೆರಳಿಗೆ ಶರಣಾಗತನಾದನು.

ತನ್ನ ಪೂರ್ವಜರ ಪರಾಕ್ರಮಕ್ಕೆ ಕಿರೀಟವಿಟ್ನಂತೆ ತಾನು ಅಜೇಯ ಕನ್ನೀರವ್ವನ ಬಾವಿಗೆ ಧುಮುಕಿ ಖಡ್ಗ ತಂದದ್ದು ಎಂದು ತನ್ನನ್ನು ತಾನೇ ಮೋಹಿಸಿಕೊಂಡುಬಿಟ್ಟ ರುದ್ರಪ್ಪ ತೆಪ್ಪಗೆ ಬಾಯಿ ಮುಚ್ಚಿಕೊಂಡು ಎಷ್ಟು ದಿನ ಪಡಸಾಲೆಯ ಮೂಲೆಯಲ್ಲಿ ಕೂತಿರಲು ಸಾಧ್ಯ?ವಾಕಿಂಗ್ ಹೋಗಿ ದಿನಕ್ಕೆ ಐದಾರು ಮಂದಿಯನ್ನಾದರೂ ಮನೆಗೆ ಕರೆದು ತರಲಾರಂಭಿಸಿದನಲ್ಲದೆ ತುಸು ಏರು ದನಿಯಲ್ಲಿಯೇ ಹೆಂಡತಿಗೆ ಸತ್ಕಾರ ಕುರಿತು ಆಜ್ಞೆ ವಿಧಿಸತೊಡಗಿದನು. ಅವರೀರ್ವರೂ ನಂತರ ಅತಿಥಿಗಳು ಅತ್ತ ಹೋಗುತ್ತಲೇ ಇತ್ತ ನಿಂಗವ್ವ ‘ಅಲಲಲಾ’ ಎಂದು ಹೂಂಕರಿಸುವುದು ಮೊದಲಾಯಿತು.

ಯ್ಯೋನು ಮಾಡುವುದಪ್ಪಾ ಖಡ್ಗವನ್ನು ಎಂದು ನಿಂಗಜ್ಜಿ ಓಣಿಯ ಹಲವರ ಬಳಿ ಅಳಲು ತೋಡಿಕೊಂಡಳು. ‘ಅಂಥಾ ಕನ್ನೀರವ್ವನ ಬಾವಿಗೆ ಹಾಕಿದ್ರೇ ಬಿಡ್ಲಿಲ್ಲ ನಿನ್ನಳಿಯಾ’ ಎಂದು ಸೋಗುಟ್ಟಿದರು.

ಮರುದಿನ ಬೆಳಗಾಗೆ ಕೊಟ್ಟೂರಿನ ಬೆಣ್ಣೆ ಬಸವರಾಜನ ತಂಡದ ಸಮಾಳನಾದನದ ಸದ್ದು ಕಿವಿಗೆ ಬೀಳುತ್ತಲೆ ಹೋಗಿ ನೋಡುತ್ತಾಳೆ ಗುಗ್ಗುಳ ಧಗಧಗ ಕೆನ್ನಾಲಿಗೆ ಚಾಚಿ ಹೊಂಟಿರುವುದೂ ಕಾಸಿ ಅಯ್ನೋರು ತಮ್ಮ ನಾಲಗೆಗಳಿಗೆ ಫಳ ಫಳ ಸೂತ್ರ ಸಿಕ್ಕಿಸಿಕೊಂಡು ರಾವೇಶದಿಂದ ನರ್ತಿಸುತ್ತಿರುವುದೂ. ಸೂತ್ರಕ್ಕೆ ಮದುಮಗ ಗದಗದ ನಡುಗುತ್ತಿರುವುದೂ ಕಂಡಿತು.

ಹ್ಹಹ್ಹ ರ ನಮ್ಮ ಕರಿರಭದ್ರ ದೇವರು ಖಡ್ಗ ಹಿಡಿದುಕೊಂಡು ದಕ್ಷನನ್ನು ಕೊಲ್ಲಲು ಹ್ಯಾಗೆ ಬರುತ್ತಿದ್ದಾರೆಂದರೆ.. ಹಿಂದೆಯೇ ಒಡಪು ಹೇಳುತ್ತಿರುವುದೂ ಕಿವಿಗೆ ಬಿತ್ತು. ಆ ಕ್ಷಣ ನಿಂಗಜ್ಜಿಗೆ ಏನು ಹೊಳೆಯಿತೋ ಏನೋ! ಸರಸರನೆ ಬಂದವಳೆ ಖಡ್ಗವನ್ನು ಸೀರೆಯಲ್ಲಿ ಬಚ್ಚಿಟ್ಟುಕೊಂಡು ಸರಸರನೆ ಕೋಟೆ ರಭದ್ರ ಗುಡಿಗೆ ಹೋಗಿ ದೇವ್ರ ಈ ಖಡ್ಗ ನಿನ್ನತ್ರ ಇಟ್ಕಾ ಎಂದು ದೀರ್ಘ ಪ್ರಣಾಮ ಸಲ್ಲಿಸಿ ಮರಳಿದಳು.

ಖಡ್ಗ ಕಾಣದಾಗಲು ರುದ್ರಪ್ಪಗೆ ಎಂದಿನಂತೆ ಸಿಟ್ಟು ಬಂದು ‘ಏನ್ರೇ’ ಎಂದು ಗರ್ಜಿಸಲು ನಿಂಗಜ್ಜಿ ಅದನ್ನೋಯ್ದು ಯೀರ್‌ಬದ್ರರದ್ಯಾವ್ರು ಕ್ವಟ್ ಬಂದೀನಿ ಗಂಡಸಾಗಿದ್ರೆ ತಕ್ಕಂಬಾ ವೋಗೋ ಹ್ಹ...ಹ್ಹ...ಎಂದು ನಗಾಡಿತು.

ಅತುಲ ಪರಾಕ್ರಮದಿಂದ ಗುಡಿಗೆ ಹೋದ ರುದ್ರಪ್ಪಗೆ ಖಡ್ಗ ತರಲು ಸಾಧ್ಯವಾಗಲೇ ಇಲ್ಲ. ಮಾತು, ಪಿತ್ರಾರ್ಜಿತ ಪರಾಕ್ರಮ ಕಳೆದುಕೊಂಡವನಂತೆ ಮನೆಯ ಕಟ್ಟೆಗೆ ಕುಂತಿರುತ್ತಾನೆ.

4 comments:

  1. ಸರ್ ನನಗೆ ರುದ್ರಪ್ಪನ ಖಡ್ಗ ನೋಟ್ಸ್ ಕಳಿಸಿ

    ReplyDelete
  2. Pls send all kannada chapter notes sir🙏

    ReplyDelete
  3. Good morning sir/madam rudrappana khadga important questions Kalsi sir/madam

    ReplyDelete