Sunday, July 19, 2009

ಹಂದಿ, ಹಿಂಸೆ ಮತ್ತು ತಮಸ್
-ಮಲ್ನಾಡ್ ಮೆಹಬೂಬ್, ಸಕಲೇಶಪುರ
ತಮಸ್...
ಭೀಷ್ಮ ಸಾಹನಿ ರಚಿಸಿದ ಪ್ರಖ್ಯಾತ ಕಾದಂಬರಿ ‘ತಮಸ್’ ಜಗತ್ತಿಗೆ ಕೊಟ್ಟಿರುವ ಸಂದೇಶಗಳಲ್ಲಿ ಅದರಲ್ಲೂ, ಮುಸ್ಲಿಂ ಸಮಾಜಕ್ಕೆ ತಿಳಿಸಿರುವುದು ‘ಹಂದಿಯ ದೇಹ ನಿಮ್ಮ ಮಸೀದಿಗೆ ಯಾರಾದರೂ ಹಾಕಿದರೆ ಇದು ಕೋಮು ಹಿಂಸೆಗೆ ಬಳಸಲಾಗಿರುವ ತಂತ್ರ ಎಂಬುದನ್ನು ಅರ್ಥಮಾಡಿಕೊಳ್ಳಿ’ ಎಂದು ವಿವರಿಸಿದೆ.

ಹಂದಿಯ ಮೂಲಕ ನಡೆಯುವ ಕೋಮುಗಲಭೆಗಳ ಅಂತರಂಗವನ್ನು ಬಹಿರಂಗಗೊಳಿಸಿ, ಇಂದಿಗೂ ‘ತಮಸ್’ ಮನೆ ಮಾತಾಗಿದೆ.
೧೯೭೩ರಲ್ಲಿ ಮಹಾರಾಷ್ಟ್ರದ ಭೀವಂಡಿಯ ಹಿಂಸಾಚಾರ ನೋಡಿ ನೋಂದು ಭೀಷ್ಮ ಸಾಹನಿಯವರು, ೧೯೭೪ರಲ್ಲಿ ನಡೆದ ಪಂಜಾಬ್ ಪ್ರಾಂತ್ಯದ ಹಿಂಸಾಚಾರದ ವಾಸ್ತವಗಳನ್ನು ಅಕ್ಷರಗಳ ಮೂಲಕ ತೆರೆದಿಟ್ಟ ‘ದುರಂತ ಕಾವ್ಯ’ವಾಗಿದೆ ತಮಸ್.

ಧರ್ಮದ ಹೆಸರಿನಲ್ಲಿ ಗಲಭೆಗಳನ್ನು ಪ್ರಚೋದಿಸಿದಾಗ ಅಮಾಯಕ, ಮುಗ್ಧಗನ ಅನುಭವಿಸುವ ಸಂಕಷ್ಟಗಳ ಈ ಕಥೆ... ನೆಮ್ಮದಿ ಮತ್ತು ಶಾಂತಿಯಿಂದ ಇದ್ದ ಜನರನ್ನು, ಒಬ್ಬರು-ಮತ್ತೊಬ್ಬರ ಕತ್ತು, ಕತ್ತರಿಸುವಂತೆ ಮೂಡಿದ್ದು ಹೇಗೆ ಎಂಬುದನ್ನು ಈ ಕಥೆ ಹೇಳುತ್ತದೆ.

ಇದು ಕಲ್ಪನೆಯಲ್ಲ-ವಾಸ್ತವ, ರಾಷ್ಟ್ರ ಇದರ ಮೂಲಕ ಹಾದು ಹೋಗಿದೆ. ತಮ್ಮ ತಪ್ಪು ಏನೇನೂ ಇಲ್ಲದಿದ್ದರು ಬಹಳಷ್ಟು ಮಂದಿ ಈ ದುರಂತಕ್ಕೆ ಸಿಲುಕಿ, ಮತಾಂಧರ ಕೈಗೆ ಸಿಕ್ಕಿ ನಾಶ ಹೊಂದುತ್ತಾರೆ. ದೇವರಿಗೆ ಅಂಜುವ ನೆರೆ-ಹೊರೆಯವರಿಂದ ಬಹಳಷ್ಟು ಮಂದಿ ಬದುಕಿ ಉಳಿಯುತ್ತಾರೆ.

ಈ ಕಥೆಯಲ್ಲಿ ‘ಹಂದಿ’ ಕೊಂದು ಪ್ರಾರ್ಥನಾ ಸ್ಥಳಕ್ಕೆ ಹಾಕಿದವನೂ ಪಾಪಪ್ರಜ್ಞೆಯಿಂದ ಪೀಡಿತನಾಗಿ ಸತ್ತು ಹೋಗುತ್ತಾನೆ. ಈತನ ಕೈಗೆ ೫ ರೂಪಾಯಿ ನೋಟು ಇಟ್ಟು ಗಲಭೆಗೆ ಕಾರಣನಾದವನು ‘ಶಾಂತಿ’ ಮಂತ್ರ ಹೇಳುತ್ತ ಗಣ್ಯವ್ಯಕ್ತಿಗಳೊಂದಿಗೆ ಸೇರಿಕೊಳ್ಳುತ್ತಾನೆ. ಹೀಗೆ ‘ತಮಸ್’ ಅಂದರೆ ‘ಕಗ್ಗತ್ತಲು’ ಕಾದಂಬರಿ ಮುಕ್ತಾಯವಾಗುತ್ತದೆ.

ಮೈಸೂರು ‘ಹಂದಿ’ಗಲಭೆ...

ಸ್ವಾತಂತ್ರ ಪೂರ್ವ ಹಾಗೂ ನಂತರವೂ ಈ ‘ಹಂದಿಯ ಹಿಂಸೆ’ ಮುಸ್ಲಿಮ್‌ರ ಸುತ್ತ ಸುತ್ತುತ್ತಲೇ ಇದೆ. ಇತ್ತೀಚೆಗೆ ನಡೆದ ಮೈಸೂರು ಗಲಭೆಯಲ್ಲಿ ೩ ಅಮಾಯಕರ ಸಾವು, ಅಸ್ತಿ-ಪಾಸ್ತಿ ನಷ್ಟ ಸಮಾಜದ ಮೂರ್ಖತನಕ್ಕೆ ಸಾಕ್ಷಿಯಾಗಿದೆ.

ಇಸ್ಲಾಂ ಏನೂ ಹೇಳುತ್ತೆ...

ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ್ ಪೈಗಂಬರರವರ ಅನುಮತಿ ಪಡೆದು ಅನ್ಯ ಧರ್ಮದ ವ್ಯಕ್ತಿಯೊಬ್ಬ, ರಾತ್ರಿ ಮಸೀದಿಯಲ್ಲಿ ತಂಗುತ್ತಾನೆ. ಬೆಳಗ್ಗೆ ಆತ ಮಸೀದಿಯಲ್ಲಿ ಹೇಸಿಗೆ ಮಾಡಿ ಹೋಗಿರುತ್ತಾನೆ. ಇದನ್ನು ಕಂಡ ಪ್ರವಾದಿಗಳು ತಮ್ಮ ಕೈಗಳಿಂದ ಹೇಸಿಗೆಯನ್ನು ಸ್ವಚ್ಚ ಮಾಡುತ್ತಾರೆ. ಇಂಥಹ ಸಂದರ್ಭದಲ್ಲಿ ‘ಹೀಗೆ ಮಾಡಬೇಕು’ ಎಂದು ಇದು ಪ್ರವಾದಿಯವರು ಸೂಚಿಸಿರುವ ಧರ್ಮ ಬದ್ಧ ಪರಿಹಾರವೆಂದು ಧರ್ಮಕ್ಕೆ ಸಂಬಂಧಿಸಿದ ‘ಗ್ರಂಥಗಳು’ ಹೇಳುತ್ತವೆ.

ಧರ್ಮ ಪಾಲಕರು ಮಾಡುತ್ತಿರುವುದು...

ಕೋಮು ಹಿಂಸಾಚಾರ ನಡೆಸಲು ಹಿಂದಿನಿಂದಲೂ ಬಳಸುತ್ತಿರುವ ಹಳಸಲು, ಸವಕಲು ತಂತ್ರಗಳಲ್ಲಿ ಒಂದು ‘ಹಂದಿ ದೇಹವನ್ನು ಮುಸ್ಲಿಂ ಪ್ರಾರ್ಥನ ಸ್ಥಳಗಳಲ್ಲಿ ಹಾಕುವುದು’ ಇದನ್ನು ಕಂಡ ಮುಸ್ಲಿಂರು ರೊಚ್ಚಿಗೆದ್ದು ಬೀದಿಗಿಳಿಯುವುದು, ಕೋಮುವಾದಿಗಳ ಯೋಜನೆಯನ್ನು ಸಫಲಗೊಳಿಸುವುದು, ಪ್ರಾಣ, ಆಸ್ತಿ-ಪಾಸ್ತಿ ಹಾಗೂ ನೆಮ್ಮದಿ ಕಳೆದುಕೊಳ್ಳುತ್ತಿರುವುದು.

ಅರ್ಥವಾಗದದ್ದು...

ಸಮಾಜದ ಶಾಂತಿಯನ್ನು ಕದಡುವ ಉದ್ದೇಶದಿಂದಲೇ ಮುಸ್ಲಿಂಮರನ್ನು ಪ್ರಚೋದಿಸಿ, ಕೋಮುಗಲಭೆ ಸೃಷ್ಟಿಸಿ, ಶಾಂತಿ ಪ್ರಿಯರ ಪ್ರಾಣ, ಆಸ್ತಿ-ಪಾಸ್ತಿ ನಷ್ಟ ಮಾಡಲು ಕಾರ್ಯತಂತ್ರ ರೂಪಿಸಿ ‘ಪ್ರಾರ್ಥನ ಸ್ಥಳಗಳಲ್ಲಿ ಹಂದಿ ದೇಹದ ಮಾಂಸ ಹಾಕಲಾಗುತ್ತದೆ ಎಂಬ ಈ ಸತ್ಯ ಇಡೀ ಸಮಾಜಕ್ಕೆ ತಿಳಿದಿದ್ದರು, ಇಂಥಹ ಸಂದರ್ಭದಲ್ಲಿ ಕಿಡಿಗೇಡಿಗಳ ಕಾರ್ಯತಂತ್ರಕ್ಕೆ ತಕ್ಕಂತೆ, ಮುಸ್ಲಿಂ ಜನಾಂಗದ ಕೆಲವರು ವರ್ತಿಸುವುದು ಏಕೆ? ಎಂಬುದು ಅರ್ಥವಾಗುವುದಿಲ್ಲ.

ಗಮನಿಸಬೇಕಾದ ಅಂಶ...

ಏಕ ದೇವನನ್ನು ನಂಬುವ, ಮಹಮ್ಮದ್ ಪೈಗಂಬರ್‌ರವರ ಜೀವನ ಕ್ರಮವನ್ನು ತಮ್ಮ ಜೀವನದ ದಿನಿತ್ಯದ ಬದುಕಿನಲಲಿ ಅಳವಡಿಸಿಕೊಂಡು ಬದುಕಿ, ಮುಕ್ತಿಕಾಣಲು ಬಯಸುವ ಮುಸ್ಲಿಂಮರು ‘ಮಸೀದಿಗೆ ಮಲಿನ ಪ್ರಾಣಿಯ ದೇಹದ ಮಾಂಸ ಹಾಕಿದಾಗ’ ಪ್ರವಾದಿಯ ನಡೆ-ನುಡಿಯನ್ನು ಏಕೆ? ಪಾಲಿಸುವುದಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದ್ದು, ಇದು ತರ್ಕಕ್ಕೆ ಸಿಗದಂತಾಗಿದೆ.

ಪ್ರಮುಖ ಅಂಶ...

ಇಂಥಹ ಅನೇಕ ಘಟನೆಗಳು ‘ಈ ಹಿಂದೆ ನಡೆದಿದ್ದು’ ಇದರಿಂದಾಗಿ ಆಗಿರುವ ಪರಿಣಾಮದ ಬಗ್ಗೆ ತಿಳಿದಿದ್ದರು, ಪದೇ ಪದೇ ಮೂರ್ಖತನಕ್ಕೆ, ಮೋಸಕ್ಕೆ, ಕುತಂತ್ರಕ್ಕೆ ಒಳಗಾಗುವುದು ಏಕೆ? ಎಂಬುದು ಅರ್ಥವಾಗದ ಪ್ರಮುಖ ಅಂಶವಾಗಿದೆ.

ಅರ್ಥಮಾಡಿಕೊಳ್ಳಬೇಕಾಗಿರುವುದು...

ಇಲ್ಲಿ ಓಟಿಗಾಗಿ ದೇವರು ಧರ್ಮವನ್ನು ಬೀದಿಗೆ ತಂದು ಬೆತ್ತಲೆಗೊಳಿಸುವ ‘ಖಾದಿ’ದಾರಿಗಳಿದ್ದಾರೆ. ‘ಖಾಕಿ’ಯೊಳಗೆ ಬಚ್ಚಿಟ್ಟುಕೊಂಡಿರುವ ಕೋಮುವಾದಿಗಳಿದ್ದಾರೆ. ಒಂದು ಕೋಮಿನ ಕರಿ ಕೋಟು ಧರಿಸಿರುವ ಕಾನೂನು ಪಾಲಕರಿದ್ದಾರೆ. ಕೋಮುವಾದಿಗಳನ್ನು ಹಾಗೂ ವ್ಯವಸ್ಥೆಯನ್ನು ಪ್ರತಿನಿಧಿಸುವ ಆಡಳಿತ ರಾಜ್ಯದಲ್ಲಿ ಜಾರಿಯಲ್ಲಿದೆ. ಇವರ ಮುಂದೆ ಪ್ರಾಮಾಣಿಕವಾಗಿ ನಮ್ಮ ತಲೆ ಕಡಿದು ಅವರ ‘ಪಾದದ ಮೇಲಿಟ್ಟರು, ಇದು ಎಳೇನೂರು ಚಿಪ್ಪು’ ಎಂದು ವಾದಿಸುವವರ ಮುಂದೆ ಜಾಗೃತರಾಗಿ ಬದುಕುವುದನ್ನು ಹಾಗೂ ಒಂದು ಪ್ರಾಣಿಯ ದೇಹದಿಂದ ಯಾವುದೇ ಧರ್ಮವು ಅಧರ್ಮವಾಗುವುದಿಲ್ಲ. ಧರ್ಮದ ಹೆಸರಿನಲ್ಲಿ ಜನರು ಸಮಾಜದಲ್ಲಿ ನೀಚ ಕೆಲಸ ಮಾಡಿದರೆ ಆಗಮಾತ್ರ ಧರ್ಮ ಮಲಿನವಾಗುತ್ತದೆ’ ಅರ್ಥಮಾಡಿಕೊಳ್ಳಬೇಕು.

ಏನೂ ಮಾಡಬೇಕು?

ಮಲೀನ ಪ್ರಾಣಿಯ ದೇಹದ ಮಾಂಸವನ್ನು ಮಸೀದಿಗೆ ಹಾಕಿದಾಗ ಪೊಲೀಸರಿಗೆ ವಿಷಯ ತಿಳಿಸಬೇಕು. ಶ್ವಾನದಳ ಬೆರಳಚ್ಚು ತಜ್ಞರು ಸ್ಥಳ ಪರಿಶೀಲಿಸುವವರೆಗೆ ಯಾರು ಹತ್ತಿರಕ್ಕೆ ಹೋಗದಂತೆ ಈ ಬಗ್ಗೆ ಎಚ್ಚರಿಕೆ ವಹಿಸುವುದು. ಪೊಲೀಸರ ಮಾರ್ಗದರ್ಶನದಂತೆ ನಡೆದುಕೊಂಡು ಮಸೀದಿ ಸ್ವಚ್ಚಗೊಳಿಸುವುದು, ಮಾಧ್ಯಮದವರಿಗೆ ವಿಷಯ ತಿಳಿಸುವುದು ಮುಖ್ಯವಾಗಿದೆ. ಇಂಥಹ ವಿಷಯಗಳಿಂದ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ‘ತಮ್ಮ ಮಾನಸಿಕ ಹಾಗೂ ಧಾರ್ಮಿಕ ವಿಚಾರಧಾರೆಗಳ ಮೂಲಕ ಗಟ್ಟಿತನದ’ ಹೇಳಿಕೆ ನೀಡುವುದು. ಪೊಲೀಸರ ಆಶ್ರಯದಲ್ಲಿ ಸೌಹಾರ್ದ ಸಭೆಯನ್ನು ವಿಶಾಲವಾದ ಸಭಾಂಗಣದಲ್ಲಿ ನಡೆಸುವುದು, ಘಟನೆಯ ಬಗ್ಗೆ ಊರಿನ ಎಲ್ಲ ವರ್ಗದ ಜನರು ಸೇರಿ ಖಂಡಿಸುವುದು, ಪ್ರಾಮಾಣಿಕವಾದ ಚರ್ಚೆ ನಡೆಸುವುದು. ಜಾತ್ಯತೀತ ಶಕ್ತಿಗಳ ಧ್ವನಿಯನ್ನು ಗಟ್ಟಿಗೊಳಿಸುವುದಕ್ಕೆ ಒತ್ತು ನೀಡಬೇಕಾಗಿದೆ.

ಬದುಕಲು ಸಮಾಜದಲ್ಲಿ ‘ಶಾಂತಿ ಸೌಹಾರ್ದತೆ’ ಎಷ್ಟು ಮುಖ್ಯವಾಗಿದೆ ಎಂಬುದನ್ನು ಸಮಾಜಕ್ಕೆ ತಿಳಿಸುವುದು, ಕಿಡಿಗೇಡಿಗಳು ಯಾವುದೇ ಧರ್ಮದವರಾಗಲಿ, ಅವರ ಕುತಂತ್ರಕ್ಕೆ ಬಲಿಯಾಗದಂತಹ ವಾತಾವರಣ ನಿರ್ಮಿಸುವುದು ಮುಖ್ಯವಾಗಿದೆ. ಈ ಬಗ್ಗೆ ಧಾರ್ಮಿಕ ಮುಖಂಡರ ಚರ್ಚೆ, ಸಂವಾದ ನಡೆಸಿ ಯುವಕರಿಗೆ ಅರಿವು ಮೂಡಿಸಲು ಯತ್ನಿಸಬೇಕು. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನಾತ್ಮಕ ಹಾದಿಯಲ್ಲಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಿಂಸೆಗೆ ಯಾರು ಬಲಿಯಾಗದಂತೆ ಎಚ್ಚರವಹಿಸಬೇಕು.

ಪರಿಹಾರ

ಶೋಷಿತರು, ದೌರ್ಜನ್ಯಕ್ಕೆ ಒಳಗಾದವರು ತಮ್ಮ ‘ಹನಿ ಹನಿ ಕಣ್ಣೀರನ್ನು, ದುಃಖವನ್ನು, ಆಕ್ರೋಶವನ್ನು ತಮ್ಮೊಡಲೊಳಗೆ ಶೇಖರಿಸಿ ಸಾಗರದ ಸುನಾಮಿ ಅಲೆಯಾಗಿಸಿಕೊಳ್ಳಬೇಕು’, ‘ಹೆದರಿಕೆಯ ಎದೆ ಬಡಿತದ ಸದ್ದನ್ನು ಅದುಮಿ ಕೂಡಿಟ್ಟು ಗಂಡೆದೆಯ ಗುಡುಗಾಗಿಸಿ’ ಮುಂದಿನ ಚುನಾವಣೆಯಲ್ಲಿ ಬ್ಯಾಲೆಟ್ ಮೇಲೆ ಪ್ರಯೋಗಿಸಬೇಕು. ಈ ವ್ಯವಸ್ಥೆಯನ್ನು ಬದಲಾಯಿಸಿ ಪ್ರಾಮಾಣಿಕ ವ್ಯಕ್ತಿಗಳಿಂದ ಕೂಡಿದ ‘ಜನತಂತ್ರ’ ವ್ಯವಸ್ಥೆ ಆಡಳಿತಕ್ಕೆ ಬರುವಂತೆ ಮಾಡಿದಾಗ ಮಾತ್ರ ‘ನ್ಯಾಯ ಪಡೆಯಲು ಸಾಧ್ಯ’. ಬೀದಿಯಲ್ಲಿ ಕೂಗಾಡುವುದರಿಂದ ‘ಏನೂ ಸಾಧಿಸಲು ಸಾಧ್ಯವಿಲ್ಲ’ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಸಮಾಜವನ್ನು ಹಂದಿಯ ಸುತ್ತ ಗಿರಕಿ ಹೊಡೆಯಲು ಬಿಡದೆ ಪರಿಹಾರದ ಪರಿವರ್ತನೆಯತ್ತ ಸಾಗಬೇಕಾಗಿದೆ.

No comments:

Post a Comment