Friday, July 24, 2009

ಒಂದು ಕೊಳಲಿನ ಕಥೆ

-ಸರ್ಜಾಶಂಕರ ಹರಳಿಮಠ
ಮಾತಿಗೆ ನಿಲುಕದ ಭಾವನೆಗಳು ಕೊಳಲ ದನಿಯಲ್ಲಿ ಜೀವ ಪಡೆದು ಬರುವಾಗ.. ಶುಭ್ರ ನೀಲಾಕಾಶದಲ್ಲಿ ಎತ್ತ ನೋಡಿದರೂ ಹಕ್ಕಿ-ಪಕ್ಷಿಗಳ ಸುಳಿವಿಲ್ಲ. ತಮ್ಮ ಹೊಟ್ಟೆಪಾಡಿಗಾಗಿ ಈಗಾಗಲೇ ಗೂಡು ಬಿಟ್ಟಿರಬೇಕಾಗಿದ್ದ ಪಕ್ಷಿ ಸಂಕುಲ ಹೊರ ಬಂದಿಲ್ಲ. ಹಸಿರು ಹೊದಿಕೆಯನ್ನು ಹೊದ್ದ ಗಿಡ ಮರಬಳ್ಳಿಗಳು ತುಟಿಬಿಚ್ಚದೆ ಮೌನವಾಗಿ ಕಂಡೂ ಕಾಣದಂತೆ ನಿಟ್ಟುಸಿರುಬಿಡುತ್ತಿವೆ. ಈ ಮುಂಜಾನೆ ಜೋಗಿಗುಡ್ಡದ ನೆತ್ತಿಯಲ್ಲಿ ನಿಂತು ತನ್ನ ಕಿರಣಗಳ ದಂತ ಪಂಕ್ತಿಯನ್ನು ಹೊರಚೆಲ್ಲಿ ನಗುಮೊಗದಿಂದ ಶುಭೋದಯ ಹೇಳುವ ರವಿಯೇಕೆ ಕಂಬನಿ ತುಂಬಿದ ಮೋಡಗಳ ಹಿಂದೆ ಮುಖಮುಚ್ಚಿ ಮರೆಯಾಗುತ್ತಿದ್ದಾನೆ.

ಯಾವುದದು ದನಿ? ಆ ಕೊಳಲದನಿ?

ಯಾವುದೋ ಅವ್ಯಕ್ತ ನೋವಿಗೆ ಅಭಿವ್ಯಕ್ತಿ ಕೊಡುವ ಕೊಳಲ ಸ್ವರ? ಇಡೀ ಹರಳಿಮಠವನ್ನು ದುಗುಡದ ಅಂಚಿನಲ್ಲಿ ಮುಳುಗಿಸುವ, ಹೃದಯ ವನ್ನು ತಟ್ಟಿ ತಟ್ಟಿ ಆರ್ದ್ರಗೊಳಿಸಿ ಕರಗಿ ನೀರಾ ಗಿಸುವ ದನಿ? ಕ್ಷಣಕಾಲ ಕೊಳಲ ನಿನಾದದ ಮನ ಕಲಕುವ ಲಯಕ್ಕೆ ಮಾರುಹೋದ ವೆಂಕಟೇಶನಿಗೆ ಕೊಳಲಿನೊಂದಿಗೆ ಬೆಸೆದುಕೊಂಡ ಕುಂಬಾರ ಸುಬ್ಬಣ್ಣ ನೆನಪಾಗಿ ಯಾಕೆ ಹೀಗೆ ಬೆಳಬೆಳಗೆ ಕೊಳಲು ಬಾರಿಸುತ್ತಿದ್ದಾನೆ ಎಂದು ತಲೆಕೆರೆದು ಕೊಂಡ. ತಲೆಕೆರೆದುಕೊಂಡಾಗ ವೆಂಕಟೇಶನಿಗೆ ಸಿಕ್ಕ ಕಾರಣ ಆತನ ಮದುವೆಯ ಹಗರಣ.

ಕುಂಬಾರ ಸುಬ್ಬಣ್ಣ ನಮ್ಮೂರಿನ ಹಿರಿತಲೆ. ಒಣ ಗಿದ ನುಗ್ಗೇಕಾಯಿಯಂತಹ ದೇಹ, ಆಳಕ್ಕಿಳಿದ ಕಣ್ಣು, ಕುರುಚಲು ಗಡ್ಡ, ಕಾಲೆಂಬ ಎರಡು ಕಡ್ಡಿಗಳೊಂದಿಗೆ ಊರುಗೋಲಾಗಿ ಒಂದು ಕೋಲು, ಸ್ವಲ್ಪವೇ ಬಾಗಿದ ಬೆನ್ನು. ಯಾವಾಗಲೂ ಎಲೆಯಡಿಕೆ ಜಗಿಯುವ ಬೊಚ್ಚುಬಾಯಿ. ಇವು ಸುಬ್ಬಣ್ಣನ ಚಹರೆಗಳು. ತೋಳಿರದ ಕಪ್ಪು ಬನಿಯನ್ ಅಥವಾ ಅಂಗಿಯೊಂದಿಗೆ ಮಂಡಿಯ ತನಕ ಮಾತ್ರ ಪಂಚೆಯುಟ್ಟ ಒಂದೇ ಲಯದಲ್ಲಿ ಹೆಜ್ಜೆ ಹಾಕುವ ವ್ಯಕ್ತಿ. ಹರಳಿಮಠ, ಸಸಿತೋಟ, ನೀರುಳ್ಳಿ, ಗೆರಸ, ದೇವರಕೊಪ್ಪ, ಕಂಕಳೆ ಸುತ್ತಮುತ್ತ ಅಷ್ಟೇಕೆ ತೀರ್ಥಹಳ್ಳಿಯಲ್ಲಿ ಕಂಡರೂ ಕೂಡ ಅದು ಸುಬ್ಬಣ್ಣನೇ ಎಂದು ಸುಲಭವಾಗಿ ಗುರುತಿಸುವಷ್ಟು ಸುಬ್ಬಣ್ಣನದು ವಿಶಿಷ್ಟ ವ್ಯಕ್ತಿತ್ವ. ಸುಬ್ಬಣ್ಣನಿಗೆ ವಯಸ್ಸೆಷ್ಟು ಎಂದು ಯಾರಿಗೂ ಸ್ಪಷ್ಟವಾಗಿ ತಿಳಿದಿಲ್ಲ. ಎಪ್ಪತ್ತೈದು ವರ್ಷ ವಯಸ್ಸಿನ ಯುವಕ ಹಿರಿಯಣ್ಣ ಭಟ್ಟರೇ ಸುಬ್ಬ ನನಗಿಂತ ಹಿರಿಯವ ಎಂದು ಸುಬ್ಬಣ್ಣನ ಮಾತು ಬಂದಾಗ ಹೇಳುವುದುಂಟು.

ಇಂತಹ ಕುಂಬಾರ ಸುಬ್ಬಣ್ಣನಿಗೆ ಮದುವೆಯಾ ಗುವ ಬಯಕೆ ಉಂಟಾಗಿದೆಯೆಂದು ಊರ ತುಂಬಾ ಸುದ್ದಿ ಹರಡಿ ಹಳೆತಲೆಗಳ ಬೊಚ್ಚು ಬಾಯಲ್ಲೂ ನಗೆಯುಕ್ಕಿ ಹೈಕಳುಗಳೆಲ್ಲ ರೋಮಾಂಚಿತರಾಗಿ ಸುಬ್ಬಣ್ಣನ ರಸಿಕತನದ ತೆವಲಿಗೆ ತಮ್ಮದೇ ಉಪ್ಪು ಖಾರ ಸೇರಿಸಿ ಮನ ರಂಜನೆ ಪಡೆಯಹತ್ತಿದ್ದು ಸ್ವಲ್ಪ ಸ್ವಾರಸ್ಯವೇ..!

ಸುಬ್ಬಣ್ಣನಿಗೆ ಮದುವೆಯ ಬಯಕೆಯಾಗಿದೆ ಎಂದರೆ ಅವರಿಗೆ ಮದುವೆಯಾಗಿಲ್ಲವೇ, ಮಕ್ಕಳಿ ಲ್ಲವೇ ಎಂಬ ಪ್ರಶ್ನೆ ಸಹಜ. ಸುಬ್ಬಣ್ಣನಿಗೆ ಒಂದಲ್ಲ ಎರಡು ಮದುವೆಯಾಗಿತ್ತು. ಮೊದಲ ಹೆಂಡತಿ ಎರಡು ಮೂರು ಮಕ್ಕಳಾಗಿ ಸುಬ್ಬಣ್ಣನಿಗೂ ಅವರಿಗೂ ಸರಿ ಬರದೇ ಅವರೆಲ್ಲಾ ಗಡಿಕಲ್ಲಿನ ಮಕ್ಕಿ ಮನೆಯಲ್ಲಿದ್ದಾರೆಂಬ ಸುದ್ದಿ ಊರವರಿಗೆ ಗೊತ್ತಿತ್ತೇ ವಿನಃ ಅವರ ಪರಿಚಯ ಯಾರಿಗೂ ಇರಲಿಲ್ಲ. ಸುಬ್ಬಣ್ಣನ ಎರಡನೆ ಹೆಂಡತಿ ರುಕ್ಕಕ್ಕ ಮಾತ್ರ ಸುಬ್ಬಣ್ಣನಷ್ಟೇ ಖ್ಯಾತಿ ಪಡೆದ ಹೆಂಗಸಾಗಿದ್ದಳು.

ರುಕ್ಕು ಮತ್ತು ಸುಬ್ಬಣ್ಣನ ಪ್ರೀತಿ ಆರಂಭವಾದದ್ದು ಸಾವ್ಕಾರ್ರ ಮನೆಯ ಅಡಿಕೆ ಗೊನೆ ಹೊರುವಾಗ. ಸಾವ್ಕಾರ್ರ ಮನೆಯ ಮೇಲಿನ ಬಾಲ್ತೋಟ, ಕೆಳಗಿನ ಬಾಲ್ತೋಟಗಳಿಗೆ ಗಾಡಿ ಹೋಗುವುದಿಲ್ಲವಾದ್ದ ರಿಂದ ಅಲ್ಲಿ ಕಿತ್ತ ಅಡಿಕೆಗೊನೆಗಳನ್ನು ತಲೆ ಹೊರೆ ಯಲ್ಲಿಯೇ ಒಬ್ಬರಿಂದ ಒಬ್ಬರಿಗೆ ಬದಲಾಯಿಸಿ ಕೊಳ್ಳುತ್ತಾ ಮನೆಗೆ ತರಬೇಕು.

ಗೊನೆ ತುಂಬಿದ ಬುಟ್ಟಿಯನ್ನು ಬದಲಾಯಿಸಿ ಕೊಳ್ಳುವಾಗ ಸುಬ್ಬಣ್ಣನಿಗೂ ರುಕ್ಕುವಿಗೂ ನಡುವೆ ಕೇವಲ ಕೂದಲೆಳೆಯ ಅಂತರ. ಒಬ್ಬರ ಉಸಿರು ಇನ್ನೊಬ್ಬರ ಉಸಿರಿನೊಂದಿಗೆ ಬೆರೆಯುವಷ್ಟು ಸನಿಹ. ರುಕ್ಕುವಿನ ಮಿನುಗುವ ಕಣ್ಣುಗಳು, ಅಡಿಕೆಯ ಹಿಂಗಾರದಂತೆ ನಳನಳಿಸುವ ಮುಖ, ಕೇದಿಗೆಯ ಹೂ ಮುಡಿದ ಕೇಶರಾಶಿ ಸುಬ್ಬನನ್ನು ಸಮ್ಮೋಹನಗೊಳಿಸಿದ್ದರೆ, ಸುಬ್ಬಣ್ಣನ ಪ್ರೀತಿ ತುಂಬಿದ ಕಣ್ಣುಗಳು, ತುಂಟತನ ತೋರುವ ಆಕರ್ಷಕ ಮೀಸೆ, ಲವಲವಿಕೆಯ ಮಾತುಗಳು ಸುಬ್ಬಣ್ಣನನ್ನು ಒಂದು ನಿಮಿಷವೂ ಬಿಟ್ಟಿರಲಾರದಂತೆ ರುಕ್ಕುವನ್ನು ಕಟ್ಟಿಹಾಕಿ ಬಿಟ್ಟವು.

ಅಡಿಕೆ ಗೊನೆ ತುಂಬಿದ ಬುಟ್ಟಿ ಬದಲಾ ಯಿಸಿಕೊಳ್ಳುವಾಗ ಆರಂಭವಾದ ಸುಬ್ಬಣ್ಣನ ಪ್ರೇಮ ಪ್ರಕರಣ ಕಲಾನಾಥೇಶ್ವರ ದೇವಸ್ಥಾನದಲ್ಲಿ ಮದುವೆ ಯಾಗುವುದರೊಂದಿಗೆ ಸಮಾಜದ ಅಂUಕಾರ ಪಡೆಯಿತು.

ಮದುವೆಯಾಗುತ್ತಿದ್ದಂತೆಯೇ ಕೈಯಲ್ಲೊಂದಿಷ್ಟು ಕಾಸು ಮಾಡೋಣವೆಂದು ತನ್ನ ಕುಲಕಸುಬು ಕುಂಬಾರಿಕೆಯನ್ನು ಸುಬ್ಬಣ್ಣ ಆರಂಭಿಸಿದರೂ ಅದು ನಷ್ಟದ ಬಾಬಾಗತೊಡಗಿದಂತೆ ಪುನಃ ಸಾವ್ಕಾರ್ರ ಮನೆಯ ಕೆಲಸಕ್ಕೇ ಸೇರಿಕೊಂಡನು.

ರುಕ್ಕು-ಸುಬ್ಬಣ್ಣನ ಜೋಡಿಯನ್ನು ಊರಿನಲ್ಲಿ ನೋಡುವುದೇ ಒಂದು ಸೊಗಸೆನಿಸುತ್ತಿತ್ತು. ಕಟ್ಟಿಗೆಗೇ ಹೋಗಲಿ, ಸೊಪ್ಪಿಗೇ ಹೋಗಲಿ, ಅಥವಾ ಸೋಮವಾರ ಸಂತೆಗೇ ಹೋಗಲಿ, ರುಕ್ಕು ಮತ್ತು ಸುಬ್ಬಣ್ಣ ಒಟ್ಟಿಗೆ ಹೋಗಬೇಕು. ಕಟ್ಟಿಗೆ ತರುವಾಗ ಸುಬ್ಬಣ್ಣ ಸ್ವಲ್ಪ ಜೋರಾಗಿ ಹೆಜ್ಜೆ ಹಾಕಿ ಮುಂದೆ ಸಾಗುತ್ತಿದ್ದರೆ ಹ್ವಾಯ್.. ನಿಂತ್ಕಾಣಿ ಮಾರಾಯ್ರೆ.. ಎಂದು ರುಕ್ಕು ಹುಸಿಕೋಪ ತೋರುವಳು. ಆಗ ಸುಬ್ಬಣ್ಣ ಬೇಗ ಬರುಕಾತಿಲ್ಲೆ.. ಏನ್..ಒಳ್ಳೆ ಬಸ್ರಿ ಹೆಂಗ್ಸಿನಂಗೆ ಕಾಲಾಕ್ತಿ.. ಎಂದು ಪ್ರೀತಿಯಿಂದ ಗದರಿ ರುಕ್ಕು ಮತ್ತೆ ತನ್ನೊಡನೆ ಜೊತೆಗೂಡಿದ ನಂತರವೇ ಮುಂದೆ ಸಾಗುತ್ತಿದ್ದ.

ಸುಬ್ಬಣ್ಣ ರುಕ್ಕುವಿಗೆ ಬಸ್ರಿ ಹೆಂಗ್ಸಿನಂಗೆ ಎನ್ನುತ್ತಿ ದ್ದಂತೆ ರುಕ್ಕುವಿಗೆ ಹೊಟ್ಟೆ ಕಿವುಚಿದಂತಾಗುತ್ತಿತ್ತು. ಈ ಜೋಡಿ ಮದುವೆಯಾಗಿ ಹತ್ತಾರು ವರ್ಷವಾದರೂ ಇವರಿಗೆ ಮಕ್ಕಳ ಭಾಗ್ಯವಿರಲಿಲ್ಲ. ಪಂಡಿತರ ಔಸುತಿ, ಸ್ಥಳಕ್ಕೆ ಕೊಟ್ಟ ಹರಕೆ, ಕೊನೆಗೆ ತೀರ್ಥಹಳ್ಳಿ ಡಾಕುಟರ ಬಳಿಗೆ ಹೋಗಿ ಬಂದರೂ ಪ್ರಯೋ ಜನವಾಗಿರಲಿಲ್ಲ. ಬಸ್ರಿ ಹೆಂಗ್ಸಿನಂಗೆ ಅಂತ ಸುಬ್ಬಣ್ಣ ಹೇಳಿದರೂ ಕೂಡ ಅದನ್ನು ತಮಾಷೆಗೆ ಮಾತ್ರ ಹೇಳುತ್ತಿದ್ದನೇ ವಿನಃ ಅದರಲ್ಲಿ ವ್ಯಂಗ್ಯವಿರಲಿಲ್ಲ.

ತನ್ನ ಮಾತು ರುಕ್ಕುವಿಗೂ ಬೇಸರ ತರಿಸಿದೆ ಎಂದು ಗೊತ್ತಾದ ಕೂಡಲೇ ರುಕ್ಕು, ತಮಾಷೆಗೆ ಕೆಂಡೇ ಕಣೆ. ಅಲ್ಲೇ, ಎಷ್ಟೆಷ್ಟೋ ಜನ ಮಕ್ಕಳು- ಮರಿ ಇದ್ದೂ, ವಯಸ್ಸಾದರೂ ದಾರಿ ಮೇಲಿಲ್ಲ. ಮಕ್ಕಳಿಲ್ಲ ಅದ್ಕಂಡ್ ನೀನ್ಯಾಕೆ ಏಚ್ನೆ ಮಾಡ್ತಿ. ತಿಮ್ಮಿ, ಸೋಮಿ, ಟಾಮಿ, ಬುಡ್ಡ, ಬೋಳಿ, ಮಳ್ಳ ಎಲ್ಲಾ ನಮ್ ಮಕ್ಕಳಲ್ವ...? ಎಂದು ಸಮಾಧಾನ ಹೇಳು ತ್ತಿದ್ದ. ಮಕ್ಕಳಿಲ್ಲದ ರುಕ್ಕು-ಸುಬ್ಬಣ್ಣರಿಗೆ ಅವರು ಸಾಕಿದ್ದ ಮೂಕ ಪ್ರಾಣಿಗಳೇ ಮಕ್ಕಳಾಗಿದ್ದವು. ನಾಯಿ ಟಾಮಿ, ಎಮ್ಮೆ ತಿಮ್ಮಿ, ಹಸು ಸೋಮಿ, ಬೆಕ್ಕು ಮಳ್ಳ, ಹುಂಜ ಬುಡ್ಡ, ಹ್ಯಾಟಿ ಬೋಳಿ ಸುಬ್ಬಣ್ಣನ ಸಾಕು ಮಕ್ಕಳು. ಎಮ್ಮೆ, ಹಸು, ನಾಯಿ, ಬೆಕ್ಕುಗಳಿಗೆ ಹೆಸರಿಟ್ಟು ಕರೆಯುವುದು ಸಾಮಾನ್ಯವಾದರೂ ಕೋಳಿಗಳಿಗೂ ಸುಬ್ಬಣ್ಣ ಹೆಸರಿಟ್ಟು ಕರೆಯುವುದು ಎಲ್ಲರಿಗೂ ಮೋಜಿನದಾಗಿತ್ತು.

ಸುಬ್ಬಣ್ಣನಿಗೆ ಈಗ ಉಳಿದಿರುವುದು ಈ ಮಕ್ಕಳು ಮಾತ್ರ. ರುಕ್ಕು ಕೇವಲ ನೆನಪು. ತನ್ನ ಪ್ರಿಯತಮ, ಸಾಕು ಮಕ್ಕಳೊಂದಿಗೆ ಶಾಂತವಾಗಿ ಹರಿಯುವ ತುಂಗೆಯಂತೆ ಯಾರಿಗೂ ತೊಂದರೆ ಕೊಡದೆ ಜೀವನ ಸಾಗಿಸುತ್ತಿದ್ದ ರುಕ್ಕುವಿನ ಅಂತ್ಯ ಹಾಗಾಗ ಬಾರದಾಗಿತ್ತು.

ಸುಬ್ಬಣ್ಣನಿಗೆ ಆ ತಿಂಗಳು ಇನ್ನೂ ಗೌರ‍್ನ್‌ಮೆಂಟ್ ನಿಂದ ಐವತ್ತು ರೂಪಾಯಿ ಬಂದಿರಲಿಲ್ಲ. ಮನೆಯಲ್ಲಿ ಅಕ್ಕಿ ಕಾಳು ಇರಲಿಲ್ಲ. ಕಷ್ಟ ಎಂದಾಗ ಕಾರಣ ಕೇಳದೆ ಕಾಸು ಕೊಡುತ್ತಿದ್ದ ಅಹ್ಮದಣ್ಣನ ಬಳಿ ಒಂದತ್ತು ರೂಪಾಯಿ ತರೋಣ ಎಂದು ಸುಬ್ಬಣ್ಣ ಅವರ ಮನೆಗೆ ತೆರಳಿದ್ದ. ಸುಬ್ಬಣ್ಣ ಅಹ್ಮದಣ್ಣನ ಮನೆ ಬಾಗಿಲು ತಟ್ಟುವುದಕ್ಕೂ ರುಕ್ಕುವಿನ ಬೊಬ್ಬೆ ಕೇಳುವುದಕ್ಕೂ ಸರಿಹೋಯಿತು. ಬೊಬ್ಬೆಗೆ ಬೆಚ್ಚಿದ ಸುಬ್ಬಣ್ಣ ಒಂದೇ ಉಸಿರಿಗೆ ಮನೆಗೆ ತೆರಳಿದ. ಸುಬ್ಬಣ್ಣ ಬಂದಾಗ ರುಕ್ಕುವಿನ ಬೊಬ್ಬೆ ನಿಂತಿತ್ತು. ಸುಬ್ಬಣ್ಣನಿಗೆ ಕೇಳಿದ ಬೊಬ್ಬೆ ರುಕ್ಕು ಚಡಪಡಿಸಿ ನರನರಳಿ ಕೂಗಿದ ಕೊನೆಯ ಬೊಬ್ಬೆಯಾಗಿರ ಬೇಕು. ರುಕ್ಕುವಿನ ಮೈಮೇಲೆ ಅಳಿದುಳಿದ ಸೀರೆ ತುಂಡುಗಳಿಂದ ಹೊಗೆ ಎದ್ದೇಳುತ್ತಿತ್ತು.

ಒಲೆಯ ಮೇಲೆ ಹಾಲನ್ನಿಟ್ಟು ಒಲೆಗೆ ಬೆನ್ನು ಹಾಕಿ ಎಲೆಯಡಿಕೆ ಹಾಕಲು ಅಣಿಯಾಗುತ್ತಿದ್ದ ರುಕ್ಕುವಿಗೆ ತನ್ನ ಸೆರಗು ಒಲೆಯ ಬಳಿ ಬಿದ್ದದ್ದು ತಿಳಿಯಲಿಲ್ಲ. ಬೆಂಕಿ ತನ್ನ ನಾಲಿಗೆ ಚಾಚಿತು. ಅದು ಅರಿವಿಗೆ ಬಂದ ತಕ್ಷಣ ಸೀರೆ ಜಾರಿಸಲು ನೋಡಿದ ರುಕ್ಕು ಸೀರೆಯನ್ನು ಬಿಗಿಯಾಗಿ ಗಂಟು ಹಾಕಿ ಉಟ್ಟು ಕೊಂಡಿದ್ದರಿಂದ ಕಳಚಲಾಗಲಿಲ್ಲ. ಈ ಸುದ್ದಿ ಮಿಂಚಿನ ವೇಗದಲ್ಲಿ ಸಾವ್ಕಾರ್ರ ಮನೆಗೆ ತಿಳಿದು ಸಾವ್ಕಾರ್ರು ಜೀಪಿನಲ್ಲಿ ಬಂದು ಆಸ್ಪತ್ರೆ ಸೇರಿಸಿದರು. ಆದರೆ ರುಕ್ಕುವಿನ ಭೂಮಿಯ ಮೇಲಿನ ಪಯಣ ಮುಗಿದಿತ್ತು.

ಸುಬ್ಬಣ್ಣನ ರೋದನ ಮುಗಿಲು ಮುಟ್ಟಿತು. ಕೊಟ್ಟಿಗೆಗೆ ಹೋಗಿ ತಿಮ್ಮಿ-ಸೋಮಿಯರನ್ನು ನೇವ ರಿಸಿ, ಅವುಗಳ ಬೆನ್ನ ಮೇಲೆ ತಲೆಯಿಟ್ಟು ಅತ್ತ. ಮಳ್ಳ ಟಾಮಿಯರನ್ನು ತಬ್ಬಿಕೊಂಡು ನಿಟ್ಟುಸಿರಿಟ್ಟ. ಬುಡ್ಡ ಬೋಳಿಯರನ್ನು ಅವುಚಿಕೊಂಡು ಆಲಾಪಿಸಿದ. ಅತ್ತೂ ಅತ್ತೂ ಪ್ರಜ್ಞೆ ತಪ್ಪಿದಂತಾಗಿ ಕೊಟ್ಟಿಗೆಯಲ್ಲಿ ಬಿದ್ದ.

ಎಚ್ಚರವಾದಾಗ ಮತ್ತೆ ರೋದಿಸಿದ. ಮಡಿದ ಮಡದಿಯ ಶೋಕದಲ್ಲಿ ಸುಬ್ಬಣ್ಣ ಊಟ-ತಿಂಡಿ ಗಳನ್ನೇ ಮರೆತ. ರುಕ್ಕು ಗತಿಸಿ ವಾರವಾದರೂ ಸುಬ್ಬಣ್ಣ ಹೊಟ್ಟೆಗೆ ಏನೂ ತೆಗೆದುಕೊಳ್ಳದಿದ್ದುದನ್ನು ನೋಡಿ ಊರವರು ದಿಗಿಲು ಗೊಂಡರು. ಸುಬ್ಬಣ್ಣ ನಿಗೆ ಹರಳಿಮಠದ ಪ್ರತಿ ಮನೆಯಿಂದಲೂ ಊಟ -ತಿಂಡಿಗಳು ಬರತೊಡಗಿದವು. ಸುಬ್ಬಣ್ಣ ಕಂಡೂ ಕಾಣದಂತೆ ನಿರ್ಲಿಪ್ತನಾದ. ತಿಮ್ಮಿ, ಸೋಮಿಯರಿಗೆ ಮುರಾ ತರಲು ಸಾವ್ಕಾರ್ರ ಮನೆಯ ತೋಟಕ್ಕೆ ಹೋಗುತ್ತಿದ್ದ ಸುಬ್ಬಣ್ಣನನ್ನು ನಯವಾಗಿ ಸಮಾಧಾನ ಗೊಳಿಸಿದ ಗಾಯಿತ್ರಮ್ಮ ಆತನಿಗೆ ಎರಡು ಇಡ್ಲಿ ತಿನ್ನಿಸುವುದರಲ್ಲಿ ಯಶಸ್ವಿಯಾದರು.

ಎರಡು ಇಡ್ಲಿಗಳನ್ನು ತಿಂದ ಸುಬ್ಬಣ್ಣ ಉಳಿದ ಮೂರ‍್ನಾಲ್ಕು ಇಡ್ಲಿಗಳನ್ನು ತೆಗೆದುಕೊಂಡು ಶ್ಮಶಾನಕ್ಕೆ ಹೋಗಿ ರುಕ್ಕು ಭಸ್ಮಗೊಂಡ ಜಾಗದಲ್ಲಿ ಇಟ್ಟು ಅತ್ತು ಬಂದ.

ರುಕ್ಕುವಿನ ಸಾವು ಸುಬ್ಬಣ್ಣನ ಜೀವನಗತಿಯನ್ನೇ ಮಂಕಾಗಿ ಸಿತು. ರುಕ್ಕುವನ್ನು ಮರೆಯಲು ಯತ್ನಿಸಿದಂತೆಲ್ಲಾ ಆಕೆಯ ನೆನಪು ಸುಬ್ಬಣ್ಣನಿಗೆ ಮತ್ತೆ ಮತ್ತೆ ಮರುಕಳಿಸಿ ಬರುತ್ತಿತ್ತು.

ಒಂದು ಮಧ್ಯಾಹ್ನ ಸುಬ್ಬಣ್ಣ ದಣಿದು ಮನೆಗೆ ಬಂದು ನೋಡುತ್ತಾನೆ... ತಿಮ್ಮಿ ಆಂಯ್ಗರೆಯುತ್ತಿದೆ, ಬುಡ್ಡ ಬೋಳಿ ಯರು ಪಿಳಿ ಪಿಳಿ ಕಣ್ಣು ಬಿಡುತ್ತಾ ಅನಾಥರಂತೆ ಕುಳಿತಿವೆ. ಸೋಮಿಯ ಕಣ್ಣಲ್ಲಿ ನೀರು, ಟಾಮಿ ತನ್ನ ಯಜ ಮಾನನ ಹಿಂದೆ ತಿರುಗಾಡಿ ಸುಸ್ತಾಗಿ ಮಂಡಿ ಯೂರಿ ಕುಳಿತಿದೆ. ರುಕ್ಕು ಕಣ್ಮರೆಯಾದ ನಂತರ ಸುಬ್ಬಣ್ಣ ತನ್ನ ಊಟ ತಿಂಡಿಯ ಬಗ್ಗೆಯೇ ಗಮನ ಕೊಟ್ಟಿರಲಿಲ್ಲ. ತನ್ನ ಮಕ್ಕಳಂತೆ ಸಾಕಿದ ಈ ಪ್ರಾಣಿಗಳ ಕಡೆ ನಾನು ನೋಡದಾದೆ ನಲ್ಲ ಎಂದು ಸುಬ್ಬಣ್ಣ ಈಗ ವ್ಯಥೆಪಟ್ಟ. ಹಿಂದೆ ಕೊಟ್ಟಿಗೆಗೆ ಬಂದು ನೋಡಿದರೆ ಅಲ್ಲಿ ಹುಲ್ಲಿನ ಒಂದು ಎಸಳೂ ಇರಲಿಲ್ಲ. ಸಪ್ಪಿನ ಹಗ್ಗ ಮತ್ತು ಕತ್ತಿಗೆ ಕಡಿ ಮಾಡಿನ ಗಳಕ್ಕೆ ಹಿಡಿದ ವರಲೆ ತನ್ನ ನಾಲಿಗೆ ಚಾಚಿತ್ತು. ಕತ್ತಿಗೆ ಮತ್ತು ಹಗ್ಗಕ್ಕೆ ಹಿಡಿದ ವರಲೆಯನ್ನೂ, ಜೇಡರ ಬಲೆಯನ್ನೂ ಕೊಡವಿದ ಸುಬ್ಬಣ್ಣ ಅಣ್ಣೇಚಾರರ ಗದ್ದೆಗೆ ಹೋಗಿ ಅಂಚಿನ ಲ್ಲಿದ್ದ ಹುಲ್ಲು ಕತ್ತರಿಸಿ ತಂದು ತಿಮ್ಮಿ ಸೋಮಿಯರ ಮೈದಡವಿ ಹುಲ್ಲು ನೀಡಿದ. ಬುಡ್ಡ ಬೋಳಿಯರನ್ನು ಕರೆದು ಕಾಳು ಹಾಕಿದ. ಬೆಳಗ್ಗೆಯೇ ಬೇಯಿ ಸಿಟ್ಟ ಗಂಜಿಯನ್ನು ಮೂರು ತಟ್ಟೆಗೆ ಬಗ್ಗಿಸಿಕೊಂಡು ತನ್ನೊಂದಿಗೆ ಟಾಮಿ, ಮಳ್ಳರನ್ನು ಕರೆದು ಊಟಕ್ಕೆ ಕುಳಿತುಕೊಂಡ. ಊಟ ಮಾಡುತ್ತಿದ್ದ ಸುಬ್ಬಣ್ಣ ತನ್ನ ಈ ಮಕ್ಕಳನ್ನೆಲ್ಲ ಸರಿಯಾಗಿ ನೋಡಿಕೊಳ್ಳಲು ಒಂದು ಸಮಕಟ್ಟು ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದ.

ರುಕ್ಕುವಿರಬೇಕಾದರೂ ಅಷ್ಟೆ, ಸುಬ್ಬಣ್ಣ ದಿನದ ಬಹುಭಾಗ ಹೊರಗೆ ಕಳೆಯುತ್ತಿದ್ದನು. ಸುಬ್ಬಣ್ಣನಿಗೆ ಕೆಲವು ಕಾಯಿಲೆಗಳಿಗೆ ಔಸುತಿ ಕೊಡುವುದು ಗೊತ್ತಿತ್ತು. ಇದಕ್ಕಿಂತ ಹೆಚ್ಚಾಗಿ ಉಳುಕಿಸಿಕೊಂಡವರಿಗೆ ಸುಬ್ಬಣ್ಣ ಎಣ್ಣೆ ಹಚ್ಚಿ ತಿಕ್ಕಿದನೆಂದರೆ ನೋವು ನಾಪತ್ತೆಯಾಗಿ ಬಿಡುತ್ತಿತ್ತು. ಹರಳಿಮಠ ಸುತ್ತ, ಮುತ್ತ ಸುಮಾರು ಹಾರೋಗೊಳಿಗೆ, ಕಡಿದಾಳು ಇತ್ತ ಗೆರಸ, ಹಲಸಿನಹಳ್ಳಿಯವರೆಗೆ ಮೈ, ಕೈ ಸೊಂಟ ಉಳುಕಿಸಿಕೊಂಡವ ರೆಲ್ಲಾ ಸುಬ್ಬಣ್ಣನಿಗೆ ಆಹ್ವಾನ ನೀಡುತ್ತಿದ್ದರು. ತೋಟ ಗದ್ದೆಯ ಕೆಲಸ ಮಾಡುತ್ತ್ತಾ ಕುತ್ತಿಗೆ, ರಟ್ಟೆ ಉಳುಕಿಸಿಕೊಂಡವರು, ರಾತ್ರಿ ನಿಶೆ ಜಾಸ್ತಿಯಾಗಿ ಜಾರಿ ಬಿದ್ದು ಮೈಕೈ ಉಳುಕಿಸಿಕೊಂಡವರು, ಕೊನೆಗೆ ದೀಪಾವಳಿ ದಿನ ಬೂರಿ ಹಾಯಲು ಹೋಗಿ ತೆಂಗಿನ ಮರದಿಂದ ಉರುಳಿಬಿದ್ದು ಉಳುಕಿಸಿಕೊಂಡವರೆಲ್ಲಾ ಗುಪ್ತವಾಗಿ ಸುಬ್ಬಣ್ಣನಿಗೆ ಕರೆ ಕಳಿಸುತ್ತಿದ್ದರು. ಅಲ್ಲಿಗೆಲ್ಲ ನಡೆದೇ ಹೋಗುತ್ತಿದ್ದ ಸುಬ್ಬಣ್ಣ ಬರುವಾಗ ಕಡಿಮೆಯೆಂದರೂ ರೇಡಿಯೋದಲ್ಲಿ ಕನ್ನಡ ವಾರ್ತೆ ಬರುತ್ತಿತ್ತು.

ತನ್ನ ಮೂಕ ಮಕ್ಕಳೊಂದಿಗೆ ಸುಬ್ಬಣ್ಣನಿಗೆ ಆಪ್ತವಾದ ಇನ್ನೊಬ್ಬ ಗೆಳೆಯ ರೇಡಿಯೋ. ರೇಡಿಯೋಗೂ ಸುಬ್ಬಣ್ಣನಿಗೂ ಗೆಳೆತನ ಆರಂಭವಾದದ್ದು ಕೊಳಲಿನ ಮಧ್ಯಸ್ಥಿಕೆಯಿಂದ. ಕೊಳಲು ಬಾರಿಸುವುದೆಂದರೆ ಸುಬ್ಬಣ್ಣನಿಗೆ ಎಲ್ಲಿ ಲ್ಲದ ಖುಷಿ. ಸುಬ್ಬಣ್ಣನ ಕೊಳಲ ನಿನಾದಕ್ಕೆ ಮಾರು ಹೋಗದವರಿಲ್ಲ. ಪ್ರತಿವರ್ಷ ದಸರಾಕ್ಕೂ ಮೈ ಕೈಗೆಲ್ಲಾ ಕಪ್ಪು ಮಸಿ ಬಳಿದುಕೊಂಡು ಕಿವಿಗೆ ವಾಸ್ತೇವಯ್ಯನ ಮನೆಯ ಚಕ್ಕುಲಿ ಸಿಕ್ಕಿಸಿಕೊಂಡು ಮನೆ ಮನೆಗೆ ತೆರಳಿ ಕೊಳಲು ಬಾರಿಸುವುದು ಸುಬ್ಬಣ್ಣನಿಗೆ ಖುಷಿ ಕೊಡುವ ಹವ್ಯಾಸ. ಸುಬ್ಬಣ್ಣನ ಮೈಕೈಗೆ ರುಕ್ಕುವೇ ತೆಂಗಿನ ಗರಿಯಿಂದ ಕರಿಮಾಡಿ ಎಣ್ಣೆಯಲ್ಲಿ ಬೆರೆಸಿ ಮಸಿ ಹಚ್ಚುತ್ತಿದ್ದಳು. ಹೀಗೆ ಕೊಳಲು ಬಾರಿಸುತ್ತಿದ್ದ ಸುಬ್ಬಣ್ಣ ರೇಡಿಯೋದಲ್ಲಿ ಬರುತ್ತಿದ್ದ ಕೊಳಲು ವಾದನಕ್ಕೆ ಮೈ ಸೋತು ತಾನು ಒಂದು ರೇಡಿಯೋ ಖರೀದಿಸಿ ದಿನಂಪ್ರತಿ ಕೊಳಲು ವಾದನ ಆಲಿಸುತ್ತಿದ್ದ. ಸುಬ್ಬಣ್ಣನಿಗೆ ಕಿವಿ ಸ್ವಲ್ಪ ದೂರ. ಅದಕ್ಕಾಗಿ ಸುಬ್ಬಣ್ಣನ ರೇಡಿಯೋ ಊರವರಿಗೆ ಸದಾ ಕೇಳುತ್ತಲೇ ಇರಬೇಕು. ಒಮ್ಮೊಮ್ಮೆ ರೇಡಿಯೋ ಜೋರಾಗಿ ಹಾಡುತ್ತಿದ್ದರೂ ಸುಬ್ಬಣ್ಣನಿಗೆ ಅದು ಕೇಳದೇ ತಾನು ರೇಡಿಯೋವನ್ನು ಬಂದ್ ಮಾಡಿದ್ದೇ ನೆಂದು ತಿಳಿದು ಮಲಗಿ ಬಿಡುತ್ತಿದ್ದ. ಮಧ್ಯರಾತ್ರಿಯವರೆಗೂ ರೇಡಿಯೋ ದನಿಯಿಂದ ನಿದ್ದಗೆಟ್ಟ ಅಕ್ಕಪಕ್ಕದ ಮನೆಯ ಶೇರೆ ಗಾರ್ ನಾಗರಾಜ, ಅಹ್ಮದಣ್ಣನ ಮನೆಯವರೆಲ್ಲಾ ಮರುದಿನ ಗದರಿದಾಗಲೇ ಮುಂದಿನ ನಾಲ್ಕಾರು ದಿನ ಸುಬ್ಬಣ್ಣ ಎಚ್ಚರ ವಹಿಸುತ್ತಿದ್ದ.

ಇತ್ತೀಚೆಗಂತೂ ಸುಬ್ಬಣ್ಣನ ಕಿವಿ ತುಂಬಾ ದುರ್ಬಲವಾಗಿತ್ತು. ರೇಡಿಯೋ ಸರಿಯಾಗಿ ಮಾತನಾಡುತ್ತಿದ್ದರೂ, ಅದರಿಂದ ಕೇಳಿಸಿಕೊಳ್ಳಲಾಗದ ಸುಬ್ಬಣ್ಣ ರೇಡಿಯೋ ಕೆಟ್ಟಿದೆ ಎಂದು ಅದರ ತಲೆಯ ಮೇಲೆ ಹೊಡೆದೂ ಹೊಡೆದೂ ರೇಡಿಯೋ ನಿಜವಾಗಿಯೂ ಕೆಟ್ಟುಹೋಗಿ ಬಿಡುತ್ತಿತ್ತು. ಮತ್ತೆ ರೀಪೇರಿ ಮಾಡಿ ತಂದ ಮೇಲೆ ಎರಡು ಮೂರು ದಿನಕ್ಕೆ ಸುಬ್ಬಣ್ಣ ಶೆಲ್ ಬದಲಾಯಿಸಬೇಕಿತ್ತು.

ಟಾಮಿ ಮಳ್ಳರೊಂದಿಗೆ ಊಟ ಮುಗಿಸಿದ ಸುಬ್ಬಣ್ಣ ಒಂದು ನಿರ್ಧಾರಕ್ಕೆ ಬಂದಿದ್ದ. ಊಟ ಮಾಡಿ ಎದ್ದವನೇ ಪುಟ್ಟಪ್ಪನ ಮನೆಗೆ ಹೋದ. ಹೆಂಡತಿ ಮಲ್ಲಿಕಾಳೊಂದಿಗೆ ಮಾತನಾಡುತ್ತಾ ಎಲೆಯಡಿಕೆ ಜಗಿಯುತ್ತಿದ್ದ ಪುಟ್ಟಪ್ಪನ ಬಳಿ, ‘ಪುಟ್ಟಪ್ಪ ನಾ ಮದುವೆಯಾಗಬೇಕಲ್ಲ..!’ ಎಂದುಸುರಿದ. ಸುಬ್ಬಣ್ಣ ತಮಾಷೆಗೆ ಹೇಳುತ್ತಿದ್ದಾನೆ ಎಂದುಕೊಂಡ ಪುಟ್ಟಪ್ಪ ‘ಅದಕ್ಕೇನ ಆಗಬೌದು’ ಎಂದು ನಕ್ಕ. ತಾನು ಹೇಳುವುದನ್ನು ಪುಟ್ಟಪ್ಪ ಲಘವಾಗಿ ತೆಗೆದುಕೊಂಡಿದ್ದಾನೆ ಎಂದು ಅರಿವಾದ ಸುಬ್ಬಣ್ಣ ಗಂಭೀರವಾಗಿ ಇನ್ನೊಮ್ಮೆ ತನ್ನ ಇಂಗಿತವನ್ನು ವ್ಯಕ್ತಪಡಿಸಿದ. ಈ ಬಾರಿ ಪುಟ್ಟಪ್ಪನಿಗೆ ಸಿಟ್ಟು, ನಗು ಒಮ್ಮೆಗೆ ಬಂತು. ‘ಏನಾ.. ಈ ವಯಸ್ಸಲ್ಲಿ ನಿನಗೆ ಮದುವೆ, ಹುಚ್ ಗಿಚ್ ಏನಾದರೂ ಹಿಡಿದಿದಿಯ’ ಎಂದು ಗದರಿದ. ಅಲ್ಲಿಂದ ಸುಬ್ಬಣ್ಣ, ಕೃಷ್ಣಪ್ಪನ ಮನೆಗೂ ಪ್ರಭಾಕರ, ಹಸನ್ ಸಾಹೇಬರ ಮನೆಗೂ ಹೋಗಿ ಬಂದು ಅವರಿಂದೆಲ್ಲ ಬೈಸಿಕೊಂಡು ಬಂದ. ಇವರೆಲ್ಲ ತನಗೆ ಏಕೆ ಬೈಯುತ್ತಿದ್ದಾರೆ ಎಂದು ಕಸಿವಿಸಿಗೊಂಡ. ತನಗೇನಾಗಿದೆ ಎಂದು ಸುಬ್ಬಣ್ಣ ನೋಡಿಕೊಳ್ಳಲು ಯೋಚಿಸಿದರೆ ಇದ್ದ ಒಂದೇ ಒಡೆದ ಕನ್ನಡಿಯನ್ನು ಹೋದ ವರ್ಷವೇ ಮಳ್ಳ ಪುಡಿ ಪುಡಿ ಮಾಡಿತ್ತು.

ಪುಟ್ಟಪ್ಪ, ಕೃಷ್ಣ, ಪ್ರಭಾಕರ, ಹಸನ್ ಸಾಹೇಬರು ಸುಬ್ಬಣ್ಣನ ಎದುರಿಗೆ ಬೈದು ಕಳಿಸಿದರೂ ಸುಬ್ಬಣ್ಣ ಒಬ್ಬನೇ ಮನೆಯಲ್ಲಿರುವುದು, ದನಕರುಗಳೆಲ್ಲ ಅನಾಥವಾಗಿರುವುದು ಅವರನ್ನೆಲ್ಲ ಯೋಚಿಸುವಂತೆ ಮಾಡಿದ್ದವು. ಸುಬ್ಬಣ್ಣನಂತೆ ನೊಂದಿರುವ ಯಾವುದಾದರೂ ಒಂಟಿ ಹೆಣ್ಣಿಗಾಗಿ ಅವರು ಶೋಧನೆಗೆ ತೊಡಗಿದರು. ಇವರೆಲ್ಲ ಸುಬ್ಬಣ್ಣನಿಗೆ ಹೆಣ್ಣು ನೋಡುತ್ತಿರುವ ಸುದ್ದಿ ಇಡೀ ಊರಿಗೆ ಹರಡಿ ತಮಗೆ ತಿಳಿದಂತೆ ಮಾತನಾಡ ಹತ್ತಿದರು. ಕೆಲವರ ವ್ಯಂಗ್ಯದ ಮಾತುಗಳು ಸುಬ್ಬಣ್ಣನ ಕಿವಿಗೂ ಬಿದ್ದು ಆತ ಒಳಗೊಳಗೆ ಬಹಳವಾಗಿ ನೊಂದುಕೊಂಡ. ಮತ್ತೆ ಮರುಕ್ಷಣವೇ ಜನರ ಮಾತು ತನ್ನ ಮಕ್ಕಳಿಗೆ ಹೊಟ್ಟೆ ತುಂಬಿಸುವುದಿಲ್ಲ ಎಂದು ಸಮಾಧಾನ ಮಾಡಿಕೊಂಡ.
ಸುಬ್ಬಣ್ಣನಿಗೊಂದು ಹೆಣ್ಣು ನೋಡುವುದರಲ್ಲಿ ಸುಬ್ಬಣ್ಣನ ಹಿತೈಷಿಗಳು ಕೊನೆಗೂ ಸಫಲರಾದರು. ಹದಿನಾಲ್ಕನೆ ಮೈಲಿಕಲ್ಲಿ ನಲ್ಲಿ ಸುಬ್ಬಣ್ಣನಂತೆ ಒಂಟಿಯಾಗಿದ್ದ ವಿಧವೆ ಮಿಣುಕು ಸುಬ್ಬಣ್ಣ ನನ್ನು ನೋಡಲು ಒಪ್ಪಿದಳು. ಪುಟ್ಟಪ್ಪ ಮತ್ತು ಸ್ನೇಹಿತರಿಗೆ ಮಾತು ಕೊಟ್ಟಂತೆ ತೀರ್ಥಹಳ್ಳಿ ಸಂತೆಯ ದಿನ ಮಿಣುಕು ಊರಿಗೆ ಬಂದಿಳಿದಳು.

ಮೊದಲೇ ತಿಳಿಸಿದಂತೆ ಪುಟ್ಟಪ್ಪನ ಮನೆಗೆ ಹೋದ ಮಿಣುಕು ಅಲ್ಲಿಂದ ಕೃಷ್ಣಪ್ಪ, ಪ್ರಭಾಕರ, ಹಸನ್ ಸಾಹೇಬರನ್ನು ಕರೆದುಕೊಂಡು ಸುಬ್ಬಣ್ಣನ ಮನೆಗೆ ಬಂದಳು. ಹಿಂದಿನ ಸಂತೆಗಳಲ್ಲಿ ಸುಬ್ಬಣ್ಣನನ್ನು ಮಿಣುಕು ಮೊದಲೇ ನೋಡಿದ್ದಳು. ಸುಬ್ಬಣ್ಣನೂ ಮಿಣುಕುವನ್ನು ನೋಡಿದ್ದರೂ ಮಾತನಾಡಿಸಿರ ಲಿಲ್ಲ. ಪುಟ್ಟಪ್ಪ, ಪ್ರಭಾಕರ, ಮಿಣುಕುವಿಗೆ ಸುಬ್ಬಣ್ಣನ ಮನೆಯ ಪರಿಸ್ಥಿತಿಯನ್ನು ವಿವರಿಸಿ ಸುಬ್ಬಣ್ಣನ ಗುಣ ಗಳನ್ನು ಹೊಗಳಿ ಸುಬ್ಬಣ್ಣನನ್ನು ಚೆನ್ನಾಗಿ ನೋಡಿ ಕೊಳ್ಳಬೇಕೆಂದು ಒಪ್ಪಿಸಿದರು. ಅದಕ್ಕೆಲ್ಲ ‘ಹ್ಹು...ಹ್ಹು...’ ಎಂದು ತನ್ನ ಸಮ್ಮತಿ ಸೂಚಿಸಿದಳು ಮಿಣುಕು. ಪುಟ್ಟಪ್ಪ ಮತ್ತು ಸ್ನೇಹಿತರು ತಮ್ಮ ಕೆಲಸ ಆಯಿತೆಂದು ಕೊಂಡು ನಿರ್ಗಮಿಸಿದರು. ಪುಟ್ಟಪ್ಪ ಮತ್ತು ಸ್ನೇಹಿತರು ಹೋದೊಡನೆ ಸುಬ್ಬಣ್ಣನ ಬಳಿ ಬಂದು ವೈಯಾರದಿಂದ ಅದೂ ಇದೂ ಮಾತನಾಡುತ್ತಾ ಮಿಣುಕು ಕೇಳಿದಳು ‘ಇಲ್ಲಿ ತನಕ ಎಷ್ಟು ಕಾಸು ಕೂಡಿಸಿದ್ದಿ? ಸುಬ್ಬಣ್ಣನಿಗೆ ಒಂದು ಕ್ಷಣ ಕಸಿವಿಸಿಯಾ ದರೂ ‘ನಾವು ಬಾಳುದೆ ಕಷ್ಟಾಗಿದೆ, ಇನ್ನೆಲ್ಲಿ ಕಾಸು ಕೂಡಿ ಸೋದು’ ಎಂದು ನಗೆ ಬೀರಿದ. ಸುಬ್ಬಣ್ಣನ ಉತ್ತರದಿಂದ ನಿರುತ್ಸಾಹ ಗೊಂಡ ಮಿಣುಕು ಪುಟ್ಟಪ್ಪ ಮತ್ತು ಮಿತ್ರರಿಗೂ ಹೇಳದೆ ತೀರ್ಥಹಳ್ಳಿ ಬಸ್ಸಿಡಿದು ಹೋಗಿಬಿಟ್ಟಳು.

ಮಿಣುಕುವನ್ನು ನೆನೆದು ಜುಗುಪ್ಸೆಗೊಂಡು ಸುಬ್ಬಣ್ಣನಿಗೆ ರುಕ್ಕುವಿನ ನೆನಪು ಮತ್ತೆ ಕಾಡಿತು. ಅದರೊಂದಿಗೆ ತನ್ನ ನಿರ್ಲಕ್ಷ ದಿಂದ ಸೋತು ಸಣ್ಣಗಾಗಿರುವ ತಿಮ್ಮಿ, ಟಾಮಿ, ಸೋಮಿ, ಮಳ್ಳ, ಬುಡ್ಡ, ಬೋಳಿಯರನ್ನು ನೋಡಿ ಸುಬ್ಬಣ್ಣನ ವೇದನೆ ಇನ್ನೂ ತೀವ್ರವಾಯಿತು. ದುಃಖವನ್ನು ಮರೆಯಲು ಕೊಳಲಿಡಿದು ಜೋಗಿಗುಡ್ಡಕ್ಕೆ ತೆರಳಿದ. ಮುಂಜಾನೆಯಿಂದ ಸಂಜೆಯವರೆಗೂ ತ್ರಾಣವಿದ್ದಾಗಲೆಲ್ಲ ಕೊಳಲೂದಿ ಸುಸ್ತಾದರೂ ಮನಸ್ಸು ಶಾಂತವಾದಂತಾಗಿ ಏಳುತ್ತಾ, ಬೀಳುತ್ತಾ ಮನೆಗೆ ಮರಳಿದ. ಜೋರಾಗಿ ಹಸಿವಾಗುತ್ತಿದ್ದರೂ ಗಂಜಿ ಬೇಯಿಸಲು ಸುಬ್ಬಣ್ಣನಲ್ಲಿ ಶಕ್ತಿ ಇರಲಿಲ್ಲ. ಕೊಟ್ಟಿಗೆಯಲ್ಲಿ ತಿಮ್ಮಿ ಸೋಮಿಯರು ಅತ್ತಂತೆ ಆಂಯ್ಗರೆಯುತ್ತಿದ್ದವು. ಬುಡ್ಡ ಬೋಳಿಯರು ಧ್ಯಾನಸ್ಥವಾಗಿದ್ದವು. ಮಳ್ಳ-ಟಾಮಿ ಸುಬ್ಬಣ್ಣನ ಪಕ್ಕ ಕುಳಿತು ಆಕಳಿಸುತ್ತಿದ್ದವು. ತನ್ನಂತೆ ಹಸಿದ ಮಕ್ಕಳನ್ನು ಕಂಡು ಸುಬ್ಬಣ್ಣನ ಕರುಳು ಕತ್ತರಿಸಿದಂತಾ ಯಿತು. ಇವಕ್ಕೆಲ್ಲಾ ಹೊಟ್ಟೆಗೆ ಹಾಕಲಾಗದವನು ಸತ್ತು ಹೋಗ ಬಾರದೆ ಎಂದು ಎಣಿಸಿದ. ಸಾವಿನೊಂದಿಗೆ ಬಂದ ರುಕ್ಕುವಿನ ನೆನಪು ಸುಬ್ಬಣ್ಣನನ್ನು ಇನ್ನಷ್ಟು ಕಲಕಿತು. ರುಕ್ಕುವಿಗೆ ಸಾವು ಕೊಟ್ಟ ದೇವರು ನನಗೆ ಅನ್ಯಾಯ ಮಾಡಿದ ಎಂದು ದೇವರನ್ನು ಬೈದ. ಯಾರಿಗೂ ಬೈದರೂ ಏನೂ ಆಗದಿದ್ದಕ್ಕೆ ಮತ್ತಷ್ಟು ವ್ಯಗ್ರನಾದ. ಕೋಪ ದುಃಖಗಳಿಂದ ಕುದಿಯತೊಡಗಿದ ಸುಬ್ಬಣ್ಣನ ಮನದಲ್ಲಿ ಒಂದು ಭಯಾನಕ ಯೋಜನೆ ಸಿದ್ಧಗೊಳ್ಳತೊಡಗಿತು.

ಕುಳಿತಲ್ಲಿಯೇ ತನ್ನ ಯೋಜನೆಗೆ ಬೇಕಾದ ವಸ್ತುವನ್ನು ಎಲ್ಲಿದೆ ಎಂದು ಸುಬ್ಬಣ್ಣ ಅವಲೋಕಿಸತೊಡಗಿದ. ಕಡಿಮಾಡಿನಲ್ಲಿ ಅದು ಗೋಚರಿಸುತ್ತಿದ್ದಂತೆಯೇ ನಿಟ್ಟುಸಿರಿಟ್ಟು ಟಾಮಿ, ಮಳ್ಳರನ್ನು ಹೊರಗೆ ಅಟ್ಟಿ ಬಾಗಿಲು ಹಾಕಿ ಬಂದ. ಸುಬ್ಬಣ್ಣನ ಮನಸ್ಸಿನಲ್ಲಿ ಯೋಜನೆ ಕಾಯ ರೂಪಕ್ಕಿಳಿಯತೊಡಗಿತು. ಮೂಲೆಯಲ್ಲಿದ್ದ ಖಾಲಿ ಅಕ್ಕಿಡಬ್ಬವನ್ನು ಈಚೆಗೆಳೆದುಕೊಂಡು ಅದರ ಮೇಲೆ ಹತ್ತಿ ಕಡಿಮಾಡಿನಲ್ಲಿ ಬೆಂಗ್ಟೆಗೆ ಸಿಕ್ಕಿಸಿದ್ದ ಸಪ್ಪಿನ ಹಗ್ಗವನ್ನು ಅದೇ ಮಾಡಿನಲ್ಲಿ ಸ್ವಲ್ಪ ಎತ್ತರಕ್ಕೆ ಕಟ್ಟಿದ. ಇನ್ನೊಂದು ಕೊನೆಯನ್ನು ಉರುಳಾಗಿಸಿದ. ಕೊಟ್ಟಿಗೆಗೆ ಹೋಗಿ ತಿಮ್ಮಿ ಸೋಮಿಯರನ್ನು ನೇವರಿಸಿ ಬಂದ. ಹಿತ್ತಲ ಬಾಗಿಲಿನಿಂದಲೇ ಮುಂದುಗಡೆ ಹೋಗಿ ಟಾಮಿ ಮಳ್ಳರನ್ನು ಅವುಚಿಕೊಂಡು, ಬುಡ್ಡ ಬೋಳಿಯರನ್ನು ಎತ್ತಿಕೊಂಡು ಕೆಳಗೆ ಬಿಟ್ಟು ಪುನಃ ಹಿಂಬಾಗಿಲಿನಿಂದ ಒಳಸೇರಿದ.

ಅಕ್ಕಿ ಡಬ್ಬವನ್ನು ಹತ್ತಿ, ಸಪ್ಪಿನ ಹಗ್ಗದ ಮುಂದೆಬಂದು ಕೊನೆಯದಾಗಿಯೆಂಬಂತೆ ರುಕ್ಕುವನ್ನು ನೆನಸಿಕೊಂಡ. ರುಕ್ಕುವನ್ನು ನೆನಸುವುದಕ್ಕೂ ಯಾರೋ ದಬದಬನೆ ಬಾಗಿಲು ಬಡಿಯುವು ದಕ್ಕೂ ಸರಿಹೋಯಿತು. ನಿಧಾನಕ್ಕೆ ಬಡಿದರೆ ಸುಬ್ಬಣ್ಣನಿಗೆ ಕೇಳುವುದಿಲ್ಲ ಎಂದು ಹೊರಗಿದ್ದ ವ್ಯಕ್ತಿ ತಿಳಿದಿದ್ದಂತೆ ಕಾಣುತ್ತದೆ. ‘ಈ ಜನ ಸಾಯಲಿಕ್ಕೂ ಬಿಡುವುದಿಲ್ಲ’ ಎಂದು ಬೈದುಕೊಂಡ ಸುಬ್ಬಣ್ಣ ಹಗ್ಗವನ್ನು ಬಿಚ್ಚಿ ಯಥಾ ಸ್ಥಾನದಲ್ಲಿಟ್ಟು ಒಂದು ಬಾಗಿಲು ತೆರೆದ.

ಅಹ್ಮದಣ್ಣನ ಪುಟ್ಟ ಮಗಳು ಝೀನತ್ ತಟ್ಟೆಯಲ್ಲಿ ಊಟ ಹಿಡಿದು ನಿಂತಿದ್ದಳು. ಯಾಕೆ ಪಾಪು ಎಂದ ಸುಬ್ಬಣ್ಣ ಕ್ಷೀಣ ಸ್ವರದಲ್ಲಿ
‘ಊಟಕ್ಕೆ’ ಎಂದು ನಕ್ಕ ಝೀನತ್ ತಟ್ಟೆಯಿಟ್ಟು ಹಿಂದಿರುಗಿ ದಳು.

ಸುಬ್ಬಣ್ಣನ ಕೋಪ-ತಾಪ ದುಃಖಗಳೆಲ್ಲ ನಿಧಾನವಾಗಿ ಕರಗತೊಡಗಿದವು.

ಸುಬ್ಬಣ್ಣನ ಕಣ್ಣಲ್ಲಿ ಸ್ವಲ್ಪ ಹೊಳಪು ಮಿಂಚತೊಡಗಿತು.

No comments:

Post a Comment