Thursday, July 23, 2009

ಬಾಬ್ರಿ ಮಸೀದಿ ಕಹಿನೆನಪು: ಅಂದಿನ India Today ಛಾಯಾಚಿತ್ರಗ್ರಾಹಕ ಪ್ರಶಾಂತ ಪಂಜಿಯಾರ್‌ರ ಒಂದು ಅನುಭವ

ಪ್ರಶಾಂತ ಪಂಜಿಯಾರ್
(ಛಾಯಾಚಿತ್ರಗ್ರಾಹಕ)
ಕನ್ನಡಕ್ಕೆ: ಗೋಪಾಲ ಬಿ. ಶೆಟ್ಟಿ

೧೯೯೨, ಡಿಸೆಂಬರ್ ೫; ಎಲ್.ಕೆ.ಅಡ್ವಾಣಿ ಯವರ ಲಕ್ನೋ ರ‍್ಯಾಲಿಯ ಛಾಯಾಚಿತ್ರಣ ವನ್ನು ತೆಗೆಯುವ ಹೊಣೆ ನನಗೆ ವಹಿಸಿ ಕೊಡಲಾಗಿತ್ತು. ಉತ್ತರ ಪ್ರದೇಶದ ಬಿಜೆಪಿಯ ಎಲ್ಲ ಮುಖಂಡರು ಆ ಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ಕಾರಣಕ್ಕಾಗಿ India Today ಅಡ್ವಾಣಿಯವರನ್ನು ಹಿಂಬಾಲಿಸಲು ನನಗೆ ಸೂಚನೆ ನೀಡಿತ್ತು. ಎಲ್ಲ ಭಾಷಣಗಳು ಮುಗಿದ ಮೇಲೆ ಆ ದಿನ ರಾತ್ರಿ ಎಲ್ಲ ಪತ್ರಕರ್ತರು ಹೊರಟು ಹೋದರು. ನನಗೇಕೋ ಅಲ್ಲಿಯೇ ನಿಲ್ಲಬೇಕೆನಿಸಿತು. ನಾನು ಅಡ್ವಾಣಿ ಯವರನ್ನು ಹಿಂಬಾಲಿಸಿದೆ. ಅವರು ಕಲ್ಯಾಣ್ ಸಿಂಗ್ ಅವರ ಮನೆಗೆ ಹೋದರು. ಅಲ್ಲಿ ನನ್ನ ಹೊರತು ಬೇರೆ ಯಾರೂ ಛಾಯಾಚಿತ್ರ ಗ್ರಾಹಕರು ಇದ್ದಿಲ್ಲ. ಅವರು ನನ್ನನ್ನು ಒಳಗೆ ಹೋಗಲು ಅನುಮತಿ ಕೊಟ್ಟರು. ಪ್ರಮುಖ ಬಿಜೆಪಿ ಮುಖಂಡರಾದ ಅಟಲ್‌ಬಿಹಾರಿ ವಾಜಪೇಯಿ, ಮುರಳೀ ಮನೋಹರ ಜೋಶಿ ಮುಂತಾದವರು ಒಂದು ಕೊಠಡಿಯಲ್ಲಿ ಬಿರುಸಿನ ಮಾತುಕತೆ ನಡೆಸುತ್ತಿದ್ದರು.

ಸುಮಾರು ಮಧ್ಯರಾತ್ರಿ ಹೊತ್ತು ಮನೆ ಯಿಂದ ಹೊರಗೆ ಬಂದಾಗ “ನೀವು ನಾಳೆ ಎಷ್ಟು ಹೊತ್ತಿಗೆ ಅಯೋಧ್ಯೆಗೆ ಹೊರಡುತ್ತಿದ್ದೀರಿ?” ಎಂದು ಕೇಳಿದೆ. ‘ಈಗ ತಾನೆ ಹೊರ ಡಲಿದ್ದೇನೆ’, ಇದು ಅವರ ಉತ್ತರ. ಕೂಡಲೇ ವಾಜಪೇಯಿ ಹೊರಗೆ ಬಂದರು. ಅವರಿಗೆ ದೆಹಲಿಗೆ ಹೋಗಬೇಕಾಗಿತ್ತು. ಏನೋ ಅವರೆಲ್ಲ ನಿರೀಕ್ಷಿಸಿದಂತೆ ನಡೆದಿಲ್ಲ ವೆನ್ನುವ ಅನುಮಾನ. ನಾನು ನನ್ನ ಸಹೋದ್ಯೋಗಿ ವರದಿಗಾರನನ್ನು ಕೂಡಿ ಕೊಂಡು ಹೊರಗೆ ಬಂದೆ.

ಅಡ್ವಾಣಿಯವರನ್ನು ನಾವು ಅಯೋಧ್ಯೆಯಲ್ಲಿ ಮಹಂತ ಪರಮಹಂಸರ ಆಶ್ರಮದಲ್ಲಿ ಬಜರಂಗದಳದ ವಿನಯ ಕಟಿಯಾರ್, ವಿಶ್ವ ಹಿಂದೂ ಪರಿಷತ್ತಿನ ಅಶೋಕ್ ಸಿಂಘಾಲ್, ಸಂಘ ಪರಿವಾರದ ಹೆಚ್.ವಿ. ಶೇಷಾದ್ರಿಯವರೊಡನೆ ಕುಳಿತಿರುವುದನ್ನು ನೋಡಿದೆವು. ಕರಸೇವಕರು ಬಾಬ್ರಿ ಮಸೀದಿಯನ್ನು ಖಂಡಿತ ವಾಗಿಯೂ ಉರುಳಿಸುವ ನಿರ್ಧಾರಕ್ಕೆ ಬಂದಂತೆ ನಮಗೆ ಕಂಡು ಬಂತು.

ಅಡ್ವಾಣಿಯವರು ಆಶ್ರಮದಿಂದ ಹೊರಗೆ ಬಂದಾಗ ನಾನು ಅವರನ್ನು ಹಿಂಬಾಲಿಸಿದೆ. ಬಿಜೆಪಿ ಮತ್ತು ಇತರ ವಿ‌ಎಚ್‌ಪಿ ಪ್ರಮುಖ ರೊಡನೆ ಅವರು ಮೊದಲೇ ಸಿದ್ಧಗೊಳಿಸಿದ ವೇದಿಕೆಯ ಹತ್ತಿರ ಬಂದರು; ವಾದಗ್ರಸ್ಥವಾದ ಮಂದಿರ ಆ ವೇದಿಕೆಯ ಎದುರುಗಡೆ ಇತ್ತು. ಅಲ್ಲಿ ಸಾಂಕೇತಿಕವಾಗಿ ಪೂಜೆ ನಡೆಸುವ ಸಲುವಾಗಿ ಆ ಸ್ಥಳವನ್ನು ಅವರು ವಿಕ್ಷಿಸುತ್ತಿದ್ದರು. ಪೂರ್ವಾಹ್ನ ೧೧.೩೦ರ ಹೊತ್ತಿಗೆ “ಜೈ ಶ್ರೀರಾಮ್” ಮಂತ್ರ ಪಠಣ ಪ್ರಾರಂಭವಾಗ ಬೇಕಿತ್ತು. ಸುಮಾರು ೨೦೦ ಮೀಟರ್ ದೂರದ ರಾಮಕಥಾ ಕುಂಜದ ಕಟ್ಟಡದ ಟೆರೇಸ್‌ನ ಮೇಲೆ ಒಂದು ದೊಡ್ಡ ವೇದಿಕೆಯನ್ನು ಸಜ್ಜುಗೊಳಿಸಲಾಗಿತ್ತು. ಅಡ್ವಾಣಿ ವೇದಿಕೆಯ ಕಡೆಗೆ ಹೊರಟು ನಿಂತರು, ನಾನು ಅವರನ್ನು ಹಿಂಬಾಲಿಸಿದೆ. ಟೆರೇಸ್‌ನ ಒಂದು ಮೂಲೆ ಯಲ್ಲಿ ಬಾಬ್ರಿ ಮಸೀದಿಯ ಗುಮ್ಮಟಗಳನ್ನು ನಾನು ನೋಡಿದೆ. ಅದರ ಹೊರತು ಬೇರೇನೂ ನನ್ನ ಕಣ್ಣಿಗೆ ಬೀಳಲಿಲ್ಲ.

ಸಂಘ ಪರಿವಾರದ ಎಲ್ಲ ಮುಖಂಡರು- ಉಮಾಭಾರತಿ ಸಾಧ್ವಿ ಋತಾಂಬರ ವಿಜಯ ರಾಜೆ ಸಿಂಧಿಯಾ, ಎಮ್.ಎಮ್.ಜೋಶಿ, ಶೇಷಾದ್ರಿ, ಅಡ್ವಾಣಿ, ಪ್ರಮೋದ್ ಮಹಾಜನ್ ವೇದಿಕೆಯ ಮೇಲೆ ಆಸೀನರಾಗಿರುವುದನ್ನು ನಾನು ನೋಡಿದೆ. ನಾನು ವಿಶ್ವಹಿಂದೂ ಪರಿ ಷತ್ತಿನ ಛಾಯಾ ಚಿತ್ರಗ್ರಾಹಕನೆಂದು ಅವರು ಊಹಿಸಿದ್ದರು. ಹಾಗಾಗಿ ನನಗೆ ಒಳಗೆ ಇರಲು ಅನುಮತಿ ಸಿಕ್ಕಿತು. ಉಳಿದ ಹೆಚ್ಚಿನ ಛಾಯಾ ಚಿತ್ರಗ್ರಾಹಕರು ಪೂಜೆ ನಡೆಯುವ ಶಿಬಿರದ ಹತ್ತಿರವೇ ಇದ್ದರು.

ಬಾಬ್ರಿ ಮಸೀದಿ ಧ್ವಂಸ ಮಾಡುವ ಮುಹೂರ್ತ ಸಮೀಪಿಸುತ್ತಿತ್ತು. ಇತ್ತ ವೇದಿಕೆಯಲ್ಲಿ ಕುಳಿತಿದ್ದ ಅಡ್ವಾಣಿ ಮತ್ತು ಶೇಷಾದ್ರಿ ಕಂಗಾಲಾದಂತೆ ಕಂಡು ಬಂದರು. ಪೂಜೆ ಪ್ರಾರಂಭವಾಯಿತು. ಅಂತೆಯೇ ಭಾಷಣಗಳು. ಸುಮಾರು ಬೆಳಗ್ಗೆ ೧೧.೩೦ಕ್ಕೆ ಸರಿ ಯಾಗಿ ಜನರು ಗುಂಬಜದ ಮೇಲೆ ಹತ್ತಲಾರಂಭಿಸಿದರು. ಫೊಟೋ ಗ್ರಾಫರ‍್ಸ್ ಕ್ಲಿಕ್ ಮಾಡಲು ಅಣಿಯಾದರು. ಕರ ಸೇವಕರು ಅವರ ಮೇಲೆ ಏರಿ ಬಂದರು. ಎಲ್ಲ ಛಾಯಾಗ್ರಾಹಕರನ್ನು ಒಂದು ಕೊಠಡಿಯೊಳಗೆ ಕೂಡಿ ಹಾಕಿ ಬೀಗ ಹಾಕಲಾಯಿತು. ಪ್ರತಿಭಟಿಸಿದವರನ್ನು ಥಳಿಸಲಾಯಿತು. “ಹೊರಗೆ ಬರಲು ಮುಂದಾದರೆ ನಿಮ್ಮ ಕಾಲುಗಳನ್ನು ಮುರಿ ದೇವು” ಎಂದು ಎಚ್ಚರಿಕೆ ಕೊಡಲಾಯಿತು.

ಗುಂಬಜದ ಸ್ಪಷ್ಟ ಕ್ಷಣೆಯನ್ನು ನನ್ನ ಹೊರತಾಗಿ ಬೇರೆ ಯಾವ ಛಾಯಾಗ್ರಾಹಕನಿಗೂ ಮಾಡಲು ಸಾಧ್ಯವಾಗಲಿಲ್ಲ. ಕಬ್ಬಿಣದ ಸಲಾಕೆಗಳಿಂದ ಜನರು ಗುಂಬಜಗಳನ್ನು ಒಡೆ ಯುತ್ತಿದ್ದರು. ಇತ್ತ ವೇದಿಕೆಯಲ್ಲಿ ಆಸೀನರಾದವರು ಗಹಗಹಿಸಿ ನಗುತ್ತಿದ್ದರು. ಹಠಾತ್ತನೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗುಂಬಜದ ತುತ್ತ ತುದಿಗೆ ಏರಿ ಬಂದರು. ಇದು ದಾಳಿಯ ಪರಮಾವಧಿಯೆಂದು ನಾನು ಊಹಿಸಿದೆ. ನಾನು ಅಡ್ವಾಣಿ ಮತ್ತು ಶೇಷಾದ್ರಿಯ ಮುಖವನ್ನು ನೋಡಿದೆ. ಅವರ ಮುಖ ಗೊಂದಲಕ್ಕೀಡಾದವರಂತೆ ಕಂಡುಬಂತು. ಸ್ವಲ್ಪ ಹೊತ್ತಿನ ಅನಂತರ ಅವರು ಬೆರಗು ಕಣ್ಣುಗಳಿಂದ ಬಾಯಿ ತೆರೆದು ಗುಂಬಜದ ಕಡೆಗೇ ನೋಡುತ್ತಿದ್ದರು. ಅವರೊಟ್ಟಿಗಿದ್ದ ಇತರ ಮುಖಂಡರು ಖುಶಿಯಲ್ಲಿದ್ದಂತೆ ಕಂಡು ಬಂತು. ಇದೀಗ ಅಡ್ವಾಣಿಯವರು ವಿಹೆಚ್‌ಪಿ ಧುರೀಣರ ಕಡೆಗೆ ಮುಖಮಾಡಿ “ಸಾಕು ಇನ್ನು ಅವರನ್ನು ಕೆಳಗೆ ಬರಲು ಹೇಳಿ” ಎಂದು ಸನ್ನೆ ಮಾಡುವಂತೆ ಕಂಡು ಬಂತು. ಆದರೆ ಇತರರಿಗೆ ಇಷ್ಟರಲ್ಲಿಯೇ ತೃಪ್ತಿಯಾಗಲಿಲ್ಲ; ಅವರಿಗೆ ಇನ್ನೂ “ಹೆಚ್ಚು”ಮಾಡಬೇಕಾಗಿತ್ತು.

ಪ್ರಾಯಶಃ ಕರಸೇವಕರು ಬಿಜೆಪಿ ಮುಖಂಡರ ಮಾತನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ವೆನ್ನುವ ಸುದ್ದಿ ಅವರಿಗೆ ಮೊದಲೇ ಮುಟ್ಟಿರಬಹುದು; ಈ ಕಾರಣಕ್ಕಾಗಿ ವಾಜಪೇಯಿ ದೆಹಲಿಗೆ ಹೊರಟು ಹೋದರು. ಆದರೆ ಅಡ್ವಾಣಿ ಅಯೋಧ್ಯೆಗೆ ಕೂಡಲೇ ಹೊರಟರು; ಕಲ್ಯಾಣಸಿಂಗ್ ಲಕ್ನೋದಲ್ಲಿಯೇ ಉಳಿದುಕೊಂಡರು. ಪ್ರಾಯಶಃ ಅಡ್ವಾಣಿಯವರಿಗೆ ರಾಮ ಜನ್ಮಭೂಮಿ ಆಂದೋಲನದವರು “ಮಸೀದಿಯನ್ನು ಉರುಳಿಸುವುದಿಲ್ಲ. ಆದರೆ ಗಲಭೆಯನ್ನು ಉಂಟುಮಾಡುತ್ತೇವೆ”ಎಂದು ಭರವಸೆ ಕೊಟ್ಟಿರಲೂಬಹುದು. ಆದರೆ ಅಡ್ವಾಣಿಯವರು ಈ ಆಪಾದನೆಯಿಂದ ದೋಷ ಮುಕ್ತರಾಗಲು ಸಾಧ್ಯವಾಗಲಾರದು.

ಈ ಮಧ್ಯೆ ಇತರರು ಬಹಳಷ್ಟು ಸಂತೋಷದಿಂದ ಗಹಗಹಿಸಿ ನಗುತ್ತಿದ್ದರು.

ಮೊದಲನೆಯ ಗುಂಬಜವು ಬಿರುಕುಬಿಟ್ಟಾಗ ಉಮಾಭಾರತಿ, ಸಾಧ್ವಿ ಋತಾಂಬರ ಮತ್ತು ಸಿಂಧಿಯಾ ಕೇಕೇ ಹಾಕುತ್ತ ನಗುತ್ತಿದ್ದರು. “ಇನ್ನೊಂದು ಹೊಡೆತ ಬಲವಾಗಿ; ಬಾಬ್ರಿ ಮಸೀದಿ ಒಡೆದು ಹಾಕಿ” ಎಂದು ಕರಸೇವಕರಿಗೆ ಅವರು ಹುರಿದುಂಬಿಸುತ್ತಿದ್ದರು.

ಹೆಚ್ಚಿನ ಫೊಟೋಗ್ರಾಫರ‍್ಸ್‌ಗೆ ಕರಸೇವಕರಿಂದ ಏಟು ಬಿದ್ದ ವಾರ್ತೆ ಇದೀಗ ಮತ್ತೆ ನನಗೆ ಮುಟ್ಟಿತು. ಗುಂಬಜಗಳು ಉರುಳಿ ಬೀಳುವ ದೃಶ್ಯವನ್ನು ಫೊಟೋ ತೆಗೆದವನು ನಾನೊಬ್ಬ ಮಾತ್ರ ಎಂದು ನನಗೆ ಮನವರಿಕೆಯಾಯಿತು; ಇನ್ನು ನಾನು ಜಾಗರೂಕ ನಾಗಿ ಇರಬೇಕೆಂದು ನಿರ್ಧರಿಸಿದೆ. ಸುಮಾರು ಮಧ್ಯಾಹ್ನದ ಹೊತ್ತಿಗೆ ಗುಂಬಜಗಳು ಪೂರ್ಣಾಹುತಿಗೆ ಒಳಗಾದವು. ಮಸೀದಿಗಳ ಒಳಗಿನಿಂದ ಜನರು ದೊಡ್ಡ ಕಂಬಗಳನ್ನು ಹೊರಗೆ ಕೊಂಡೊಯ್ಯುತ್ತಿರುವುದನ್ನು ನಾನು ನೋಡಿದೆ. ಈ ಮಧ್ಯೆ ‘ಏನೆಲ್ಲ ನಡೆಯಿತು ನೋಡಿ ಬಾ’ ಎಂದು ಅಡ್ವಾಣಿ ಪ್ರಮೋದ್ ಮಹಾಜನ್‌ಗೆ ಹೇಳುವುದನ್ನು ನಾನು ಗುಟ್ಟಾಗಿ ಆಲಿಸಿದೆ. ಅಡ್ವಾಣಿಯವರು ವೇದಿಕೆ ಬಿಟ್ಟು ಕದಲಲಿಲ್ಲ. ಆದರೆ ಇತರ ಮುಖಂಡರು ಅತ್ತಿಂದಿತ್ತ ಸುತ್ತಾಡುತ್ತಿದ್ದರು. ಮಹಾಜನ್ ಮತ್ತೆ ತಿರುಗಿ ಬಂದರು. ಏನು ಮಾಡಲೂ ಸಾಧ್ಯವಿಲ್ಲ; ಹಿಂದಿನಿಂದ ಹಗ್ಗವನ್ನು ಕಟ್ಟಿಯಾಗಿದೆ; ಅವರು ಗುಂಬಜಗಳನ್ನು ಉರು ಳಿಸುತ್ತಾರೆ’ ನಾನು ಗುಟ್ಟಾಗಿ ಈ ಮಾತನ್ನು ಆಲಿಸಿದೆ.

ಮಧ್ಯಾಹ್ನದ ಹೊತ್ತು ತಡೆಯಲಾರದ ಸೆಕೆ. ನಾನು ಆಹಾರ ನೀರಿಲ್ಲದೆ ಇಡೀ ದಿನ ಅಲ್ಲಿಯೇ ಇದ್ದೆ. ನಾನು ಕುರ್ಚಿಯಲ್ಲಿ ತಲೆತಗ್ಗಿಸಿ ಕುಳಿತೆ. ಒಬ್ಬ ಸ್ವಾಮಿ ನನ್ನ ಹತ್ತಿರ ಬಂದು “ತಲೆ ತಗ್ಗಿಸಿ ಏಕೆ ಕುಳಿತಿದ್ದಿಯಾ? ನಿನಗೇನು ಖುಶಿಯಾಗಲಿಲ್ಲವೆ. (ಧ್ವಂಸವಾದದ್ದು)?” ಕೇಳಿದ. ಸುಮಾರು ಸಂಜೆ ೪.೩೦ಕ್ಕೆ ಎರಡು ಗುಂಬಜಗಳು ಉರುಳಿಬಿದ್ದವು. ಈ ದೃಶ್ಯವನ್ನು ನಾನು ಫೊಟೋ ತೆಗೆದೆ.

ಏಟು ತಿಂದ ಕೆಲವು ಛಾಯಾಗ್ರಾಹಕರು ತಪ್ಪಿಸಿಕೊಂಡು ವೇದಿಕೆಯ ಹತ್ತಿರಕ್ಕೆ ಬಂದರು. ನಾನು ಒಬ್ಬನಿಂದ ಒಂದು ದೊಡ್ಡದಾದ ಲೆನ್ಸ್ ತೆಗೆದುಕೊಂಡೆ. ಅವನ ಕ್ಯಾಮೆರಾ ಒಡೆದು ಹೋಗಿತ್ತು. ಆತ ತುಂಬ ಹತಾಶನಾಗಿದ್ದ. ದೊಡ್ಡದಾದ ಈ ಲೆನ್ಸ್‌ನಿಂದ ಎರಡನೆಯ ಗುಂಬಜ ಬೀಳುವ ದೃಶ್ಯವನ್ನು ನಾನು ಸೆರೆಹಿಡಿದೆ. ಅದು ವಾಲುತ್ತ ನಿಧಾನವಾಗಿ ನೆಲಕ್ಕೆ ಅಪ್ಪಳಿಸಿತು. ಧೂಳಿನ ಪದರು ಸುತ್ತ ಪಸರಿಸಿತು. ಆ ಗುಂಬಜ ವಾಲುತ್ತ ಕೆಳಗೆ ಅಪ್ಪಳಿಸುವ ದೃಶ್ಯ ಅಚ್ಚಳಿಯದೆ ಮನಸ್ಸಿನಲ್ಲಿ ಉಳಿಯುವಂತಹದು. ವೇದಿಕೆಯ ಮೇಲೆ ಎಲ್ಲಿಲ್ಲದ ಹರ್ಷೋಲ್ಲಾಸ. ಈ ಕಡೆ ನಗರದ ಬಾನಂಗಳದಲ್ಲಿ ಮುಸುಕಾದ ಹೊಗೆ! ಒಬ್ಬ ಆಚಾರ್ಯ ಧ್ವನಿವರ್ಧಕದಲ್ಲಿ ಹೇಳಿದ, “ಈ ಮುಸ್ಲಿಮರನ್ನು ನೋಡಿ; ಅವರು ತಮ್ಮ ಮನೆಗಳಿಗೆ ತಾವೇ ಬೆಂಕಿ ಹಚ್ಚಿ ವೈರತ್ವವನ್ನು ಹರಡಲು ಹೊರಟಿದ್ದಾರೆ ”. ಕರಸೇವಕರು ರೊಚ್ಚಿಗೆದ್ದರು. ಇದು ಕೋಮು ಹತ್ಯೆಗೆ ನಾಂದಿ ಹಾಡಿತು. ಇಡೀ ಆಕಾಶ ಹೊಗೆ ಮತ್ತು ಬೆಂಕಿ ಜ್ವಾಲೆಯಿಂದ ಆವರಿಸಿಕೊಂಡಿತು.

ಒಬ್ಬ ಹದಿಹರೆಯದ ಮಹಿಳಾ ಪೊಲೀಸ್ ಅಧಿಕಾರಿ ಮೂಕವಿಸ್ಮಿತಳಾಗಿ ರಾಮಕಥಾ ಕುಂಜಕ್ಕೆ ಬಂದಳು. ಇಡೀ ನಗರವೇ ಹತೋಟಿಯನ್ನು ಕಳೆದುಕೊಂಡಿದೆ. ಆಕೆ ಇಬ್ಬರು ಛಾಯಾ ಚಿತ್ರಗ್ರಾಹಕರ ಕಥೆಯನ್ನು ಹೇಳಿದರು: “ಅವರ ಹೆಸರು ನಿತಿನ್‌ರಾಯ್ ಮತ್ತು ಪ್ಯಾಬ್ಲೋ ಬಾರ‍್ತೊಲೋಮಿಯೊ. ಅವರನ್ನು ಕರಸೇವಕರು ಶಿಕ್ಷಿಸುವುದರಲ್ಲಿದ್ದರು. ಹಾಗೆ ಮಾಡಿದರೆ ನಿಮ್ಮನ್ನು ದಸ್ತಗಿರಿ ಮಾಡುವುದಾಗಿ ಹೇಳಿ ಅವರನ್ನು ರಕ್ಷಿಸಿದೆ”.

ನಾನು ವೇದಿಕೆಯ ಮೇಲಿನಿಂದ ಕೆಳಗೆ ಇಳಿದು ಬಂದಾಗ ನಾನು ನೋಡಿದ್ದು ಕೇವಲ ಮರದ ದಿಮ್ಮಿಗಳು, ರಸ್ತೆತಡೆ, ಬೆಂಕಿ, ಜನರು ಲಾಠಿ ಮತ್ತು ಕಬ್ಬಿಣದ ಸರಳುಗಳನ್ನು ಹಿಡಿದು ಝಳಪಿಸುತ್ತಿದ್ದರು. ಸುಮಾರು ಸಂಜೆ ೭.೩೦ರ ಹೊತ್ತಿಗೆ ಎಲ್ಲ ಪತ್ರಕರ್ತರು ಅಯೋಧ್ಯೆಯಿಂದ ಕಾಲು ಕಿತ್ತರು. ನಾನು ಕೂಡ ಒಂದು ಕಾರಿನಲ್ಲಿ ಹೋಗುವ ಅವಕಾಶ ಸಿಕ್ಕಿ ಫೈಝಾಬಾದ್ ಕಡೆಗೆ ಮುಖಮಾಡಿದೆ. ಅಲ್ಲಿ ನಾವು ಪತ್ರಕರ್ತರು ಉಳಿದು ಕೊಳ್ಳುವ ತಾಣವಾಗಿತ್ತು.

ಉಳಿದ ದೃಶ್ಯಾವಳಿಗಳ ಫೊಟೋ ತೆಗೆಯಲು ಮತ್ತೆ ಮರುದಿನ ಅಯೋಧ್ಯೆಗೆ ಹೋದೆ. ಬೆಟ್ಟದ ಸಾಲಿನಲ್ಲಿ ನಿಂತಿದ್ದ ಆ ಮಸೀದಿಯ ಸ್ಥಳದಲ್ಲಿ ಕಂದುಬಣ್ಣದ ಡೇರೆಗಳು ಕಾಣಿಸಿ ಕೊಂಡವು. ಕರಸೇವಕರು ತತ್ಕಾಲಿಕ ಮಂದಿರವನ್ನು ಕಟ್ಟಲು ಪ್ರಾರಂಭಿಸಿದರು.

ಬಾಬ್ರಿ ಮಸೀದಿ ಗುಂಬಜ ನೆಲಕ್ಕುರುಳಿ ಹದಿನೇಳು ವರ್ಷ ಸಂದು ಹೋದವು. ಆದರೆ ಗುಂಬಜ ಕೆಳಗೆ ಉರುಳಿದ ದೃಶ್ಯ ಕೊನೆಯ ಕಹಿ ನೆನಪಲ್ಲ. ಆದರೆ ಆಚಾರ್ಯರೊಬ್ಬರು ಹೇಳಿದ ಮಾತು ಮುಖ್ಯ “ಮುಸ್ಲಿಮರ ಮನೆಗಳು ಹೊತ್ತಿ ಉರಿಯುತ್ತವೆ. ಅದಕ್ಕೆ ಅವರೇ ಕಾರಣ”. ಬಾಬ್ರಿ ಮಸೀದಿ ಧ್ವಂಸದ್ವೇಷ ರಾಜಕಾರಣದ ಒಂದು ಅಂಗವಾಗಿರಬಹುದು. ಆದರೆ ಅಡ್ವಾಣಿಯವರಿಗೆ ಆಚಾರ್ಯನ ಧ್ವನಿವರ್ಧಕದ ಹತ್ತಿರ ಬಂದು ಆ ಅನಾಹುತ ವನ್ನು ತಡೆಯಬಹುದಿತ್ತು. ಕೇವಲ ಅಡ್ವಾಣಿಯವರು ಮಾಡುವ ಒಂದು ವಿನಂತಿ ಕೆಲವು ಜೀವಗಳನ್ನಾದರೂ ಉಳಿಸಬಹುದಿತ್ತು. ಹಾಗೆ ಮಾಡದಿರುವುದು ಧೈರ್ಯದ ಕೊರತೆಯ ನ್ನು ಮಾತ್ರ ಸೂಚಿಸುತ್ತದೆ.

(ಕೃಪೆ: ತೆಹಲ್ಕಾ )

No comments:

Post a Comment