Monday, October 11, 2010

ಸಗಣಿ ಮತ್ತು ಮೇಲು ಗೊಬ್ಬರ

ಅಂಗೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಊರೆಲ್ಲ ತಿರುಗಿದರು ಎಂಬಂತಿದೆ ನಮ್ಮ ರೈತರ ಪರಿಸ್ಥಿತಿ. ತಮ್ಮ ಪರಿಸರದಲ್ಲಿಯೇ ಲಭ್ಯವಿರುವ ಅತ್ಯುತ್ತಮ ಸ್ಯ ಪೋಶಕಾಂಶಗಳನ್ನು ಸಮರ್ಪಕವಾಗಿ ಬಳಸುವ ರೀತಿಯೇ ಬಹುತೇಕ ರೈತರಿಗೆ ಅಪರಿಚಿತವಾಗಿಯೇ ಉಳಿದಿದೆ ಎಂದರೆ ಉತ್ಪ್ರೇಕ್ಷೆಯಲ್ಲ.

ಕೃಷಿಭೂಮಿ ಇದ್ದ ಮೇಲೆ ಜಾನುವಾರುಗಳು ಇರಲೇಬೇಕು ಎನ್ನುವ ಸತ್ಯವನ್ನು ನಮ್ಮ ಬಹುತೇಕ ರೈತರು ಮರೆತಿದ್ದಾರೆ. ಇದರ ಫಲವಾಗಿಯೇ ರಸಗೊಬ್ಬರಗಳ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ರಸಗೊಬ್ಬರಗಳ ಬಳಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಾ ಸಾಗಿದರೂ ಅವಲಂಬನೆ ಬಿಟ್ಟಿಲ್ಲದಿರುವುದು ಆಶ್ಚರ್ಯಕರ ಸಂಗತಿ. ಜಾನುವಾರುಗಳು ಇದ್ದ ಸಂದರ್ಭದಲ್ಲಿ ಗೊಬ್ಬರಗಳಿಗಾಗಿ ಮಾರುಕಟ್ಟೆ ನೋಡಬೇಕಾದ ಸಂದರ್ಭಗಳು ಅತಿ ಕಡಿಮೆ. ಕನಿಷ್ಠ ಒಂದು ಎಕರೆ ಜಮೀನಿದ್ದರೂ ಒಂದು ಜೊತೆ ಎತ್ತು, ಹಸು ಒಂದೆರಡಾದರೂ ಕುರಿ, ಮೇಕೆ ಅವಶ್ಯಕ. ಈ ಜಾನುವಾರುಗಳ ಸಾಕಣಿಕೆ ರೈತರಿಗೆ ಆರ್ಥಿಕವಾಗಿಯೂ ಲಾಭದಾಯಕ. ಜೊತೆಗೆ ಗೊಬ್ಬರಗಳಿಗಾಗಿ ಮಾಡುವ ಖರ್ಚನ್ನು ಇವು ಸಾಕಷ್ಟು ತಗ್ಗಿಸುತ್ತದೆ. ಆದ್ದರಿಂದ ಇವುಗಳ ಸಗಣಿಯನ್ನೇ ಬಳಸಿಕೊಂಡು ಸತ್ವಯುತ ಗೊಬ್ಬರ ತಯಾರಿಕೆ ಸಾಧ್ಯ.

ತಯಾರಿಸುವ ವಿಧಾನ

ಹಸು, ಕುರಿ, ಮೇಕೆ ಇತ್ಯಾದಿ ಜಾನುವಾರುಗಳ ಹಸಿ ಸಗಣಿ ಸಂಗ್ರಹಿಸಿಕೊಳ್ಳಬೇಕು. ಇದರ ಒಟ್ಟು ಪ್ರಮಾಣ ೨೫ರಿಂದ ೩೦ ಕೆಜಿ ಇರಲಿ. ಸಗಣಿಯಲ್ಲಿರುವ ಕಸ ಕಡ್ಡಿಯನ್ನು ತೆಗೆಯಬೇಕು. ಒಂದು ಗೋಣಿಚೀಲದಲ್ಲಿ ಈ ಸಗಣಿಯನ್ನು ತುಂಬಿ ಅದರ ಬಾಯಿಯನ್ನು ಬಿಗಿಯಾಗಿ ಕಟ್ಟಬೇಕು. ಇದನ್ನು ೨೦೦ ಲೀಟರ್ ನೀರು ತುಂಬಿದ ಡ್ರಮ್ಮಿನ ಮೇಲ್ಬಾಗದಲ್ಲಿ ಇಟ್ಟ ದೊಣ್ಣೆಗೆ ಅಡ್ಡವಾಗಿ ಕಟ್ಟಿ ಇಳಿಬಿಡಬೇಕು. ಮರು ದಿನಕ್ಕೊಮ್ಮೆ ಚೀಲವನ್ನು ನೀರಿನಿಂದ ಎತ್ತಿ ಇಳಿಸಬೇಕು. ಎರಡು ವಾರಗಳಲ್ಲಿ ಚೀಲದಲ್ಲಿರುವ ಪೋಷಕಾಂಶವು ತನ್ನ ಗುಣವನ್ನು ಬಿಟ್ಟುಕೊಡುತ್ತದೆ. ಮೊದಲ ಕೆಲವು ದಿನಗಳಲ್ಲಿ ಅಮೋನಿಯಾದ ಕಟ್ಟು ವಾಸನೆಯಿರುತ್ತದೆ. ಎರಡು ವಾರದೊಳಗೆ ಇದರ ಕಟ್ಟುವಾಸನೆ ಕಡಿವೆಯಾಗುತ್ತದೆ. ಡ್ರಮ್ಮ್‌ನಲ್ಲಿನ ದ್ರಾವಣವು ಕಂದು ಬಣ್ಣಕ್ಕೆ ತಿರುಗಿದಾಗ ಸಿಂಪಡಣೆಗೆ ಬಳಸಬಹುದು.

ಬಳಸವ ವಿಧಾನ

ಯಾವುದೇ ಬೆಳೆಗೆ ಈ ದ್ರಾವಣವನ್ನು ಮೇಲು ಗೊಬ್ಬರವಾಗಿ ಬಳಸಬಹುದು. ಇದು ಭಾರಿ ಪರಿಣಾಮಕಾರಿ. ಒಂದು ಲೀಟರ್ ನೀರು ಸೇರಿಸಿ ಬಳಸಬೇಕು. ಒಂದು ಡ್ರಮ್ ದ್ರಾವಣಕ್ಕೆ ಸ್ಪಲ್ಪ ಅರಿಶಿನ ಪುಡಿ ಮತ್ತು ಅರ್ಧ ಲೀಟರ್‌ನಷ್ಟು ಜೇನು ತುಪ್ಪ ಸೇರಿಸಿ ಚೆನ್ನಾಗಿ ತಿರುಗಿಸಿ ಒಂದು ದಿನ ಕಳಿಸಿ ಸಿಂಪಡಿಸಿದರೆ ಹೆಚ್ಚಿನ ಪರಿಣಾಮವುಂಟಾಗುತ್ತದೆ. ಗೋಣಿ ಚೀಲದಲ್ಲಿ ಉಳಿದಿರುವ ಸಗಣಿಯನ್ನು ತೋಟದ ಬೆಳೆಗಳ ಬುಡಕ್ಕೆ ಹಾಕಬಹುದು ಅಥವಾ ಕಾಂಪೋಸ್ಟ್ ಗುಂಡಿಗೆ ಹಾಕಬೇಕು.

ಲಾಭ: ಕೀನ್ಯಾ ದೇಶದ ಅನೇಕ ರೈತರು ಈ ವಿಧಾನ ಅನುಸರಿಸಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ, ಪೊಟ್ಯಾಶ್‌ಗಳಲ್ಲದೇ ಇತರೆ ಲಘು ಪೋಷಕಾಂಶಗಳು,ಬೆಳೆವರ್ಧಕಗಳು ಸಸ್ಯಗಳಿಗೆ ದೊರೆಯುತ್ತವೆ. ಇದು ಸಸ್ಯಗಳ ಆರೋಗ್ಯಕರ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಈ ದ್ರವಗೊಬ್ಬರವನ್ನು ತಯಾರಿಸುವ ಖರ್ಚು ಕಡಿಮೆ. ಬಳಸುವ ಪದ್ದತಿಯೂ ಸರಳ. ಇದರಿಂದ ರಾಸಾಯನಿಕ ಗೊಬ್ಬರದ ಮೇಲಿನ ಅವಶ್ಯಕತೆಯಿರುವುದಿಲ್ಲ.

ಗೋಣಿಚೀಲದಲ್ಲಿ ಹಳೆಯ ಸಗಣಿ ಹಾಕಿದರೆ ಎರಡು ವಾರಗಳಲ್ಲಿ ಅದು ತೂತಾಗಬಹುದು. ಗೋಣಿಚೀಲವನ್ನು ಬಳಸುವ ಉದ್ದೇಶವೇನೆಂದರೆ ಎರಡು ವಾರದ ಬಳಿಕ ದ್ರಾವಣವನ್ನು ಸೋಸುವ ಅಗತ್ಯವಿರುವುದಿಲ್ಲ. ನೀರು ತುಂಬಿದ ಡ್ರಮ್ಮಿಗೆ ನೇರವಾಗಿ ಸಗಣಿ ಹಾಕಿ ಎರಡು ವಾರವದವರೆಗೆ ಆಗಾಗ ಕಲಕುತ್ತಿದ್ದು ಬಳಿಕ ಸೋಸಿ ಬಳಸಬಹುದು. ಕಾಫಿ ಗಿಡಗಳಿಗೂ ಇದನ್ನು ಬಳಸಬಹುದು. ಈ ದ್ರವಗೊಬ್ಬರ ಬಳಸುವುದರಿಂದ ಕ್ರಿಮಿ ಕೀಟಗಳ ಬಾಧೆ ಕಡಿಮೆಯಾಗುತ್ತದೆ.

No comments:

Post a Comment